
ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ವಿಶ್ವದಾದ್ಯಂತ ಅಭಿಮಾನಿಗಳ ಬಳಗ ಹೊಂದಿರೋ ಈ ಧ್ರುವತಾರೆ ಹುಟ್ಟಿ ಬೆಳೆದಿದ್ದು ಮಾತ್ರ ನಮ್ಮ ಬೆಂಗಳೂರಿನಲ್ಲಿ. ತಲೈವಾ ತಮ್ಮ ಬೆಂಗಳೂರ್ ಡೇಸ್ನ ಆಗಾಗ ನೆನಪು ಮಾಡಿಕೊಳ್ತಾ ಇರ್ತಾರೆ. ಇತ್ತೀಚಿಗೆ ತಾವು ಓದಿದ ಕಾಲೇಜಿನ ವಿಧ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮದ ನಿಮಿತ್ತ ರಜನಿ ಒಂದು ವಿಡಿಯೋ ಮಾಡಿದ್ದಾರೆ. ತಮ್ಮ ಶಾಲಾ-ಕಾಲೇಜು ದಿನಗಳ ನೆನಪಿನ ಲಹರಿಯನ್ನ ತೆರೆದಿಟ್ಟಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್. ಈ ಒಂದು ಹೆಸರು ಸಿನಿಪ್ರಿಯರಲ್ಲಿ ರೋಮಾಂಚನ ಮೂಡಿಸುತ್ತೆ. ತೆರೆಮೇಲೆ ಸೂಪರ್ ಸ್ಟಾರ್ ಅನ್ನೋ ಹೆಸರು ಮೂಡ್ತಾನೇ ಪ್ರೇಕ್ಷಕ ವರ್ಗ ಸಮೂಹ ಸನ್ನಿಗೆ ಒಳಗಾದವರಂತೆ ನರ್ತಿಸುತ್ತೆ. ಆ ಸ್ಟೈಲ್ , ಆ ಹಾವಭಾವ, ಆ ಇಶಾರೆ... ರಜನಿ ಎಂಟ್ರಿ ಕೊಟ್ರೆ ಚಿತ್ರಮಂದಿರದ ತುಂಬಾ ಹರ್ಷೋದ್ಗಾರ ತುಂಬುತ್ತೆ.
ತಲೈವಾ ಸಿನಿಜರ್ನಿಗೆ 5 ದಶಕ ತುಂಬಿಯಾಗಿದೆ. ಇವತ್ತಿಗೂ ಅವರಿಗಿರೋ ಕ್ರೇಜ್ ಕಮ್ಮಿಯಾಗಿಲ್ಲ. ವಿಶ್ವದಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿರೋ ರಜನಿ, ಕಲಾಲೋಕದಲ್ಲಿ ನಕ್ಷತ್ರದಂತೆ ಹೊಳೀತಾ ಇರೋ ಶಾಶ್ವತ ಸೂಪರ್ ಸ್ಟಾರ್.
ರಜನಿಕಾಂತ್ ಜೊತೆ ನಟಿಸಲಿರುವ ಕನ್ನಡದ 'ನರಸಿಂಹ' ಅಮೆರಿಕಾದಿಂದ ಬರೋದು ಯಾವಾಗ?
ಇಂಥಾ ಮಹಾನ್ ತಾರೆ ಹುಟ್ಟಿ ಬೆಳೆದಿದ್ದು ನಮ್ಮ ಬೆಂಗಳೂರಿನಲ್ಲಿ ಅನ್ನೋದು ನಿಮಗೆ ಗೊತ್ತೇ ಇದೆ. ಬೆಂಗಳೂರಿನ ಗವಿಪುರ ಗುಟ್ಟಳ್ಳಿಯ ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ರಜನಿಕಾಂತ್, ನಾನಾ ಕಷ್ಟಗಳನ್ನ ಪಟ್ಟು , ನಾನಾ ಕೆಲಸಗಳನ್ನ ಮಾಡಿ , ನಟನೆಯತ್ತ ಆಸಕ್ತಿ ಮೂಡಿ , ಮದ್ರಾಸ್ನಲ್ಲಿ ನಟನೆ ಕಲಿತು ಬಣ್ಣ ಹಚ್ಚಿದವರು. ಒಂದೊಂದೆ ಹೆಜ್ಜೆ ಇಡ್ತಾ ನೆಲದಿಂದ ಆಗಸಕ್ಕೆ ಬೆಳೆದು ನಿಂತವರು.
ರಜನಿಕಾಂತ್ ತಮ್ಮ ಬೆಂಗಳೂರು ದಿನಗಳನ್ನ ಆಗಾಗ ನೆನಪು ಮಾಡಿಕೊಳ್ತಾ ಇರ್ತಾರೆ. ಅಷ್ಟೇ ಅಲ್ಲ ಮಾರುವೇಷದಲ್ಲಿ ಆಗಾಗ ಬೆಂಗಳೂರು ಗಲ್ಲಿಗಳಲ್ಲಿ ಸುತ್ತಾಡಿ ಹೋಗ್ತಾರೆ. ಬೆಂಗಳೂರು ಅಂದ್ರೆ ತಲೈವಾ ರೋಮಾಂಚಿತರಾಗ್ತಾರೆ. ಹಳೆಯ ದಿನಗಳಿಗೆ ಜಾರ್ತಾರೆ.
ರಜನಿಕಾಂತ್ ಓದಿದ ಎಪಿಎಸ್ ಕಾಲೇಜ್ನಲ್ಲಿ ಸದ್ಯ ಹಳೆಯ ವಿಧ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೀತಾ ಇದೆ. ಖುದ್ದು ರಜನಿಕಾಂತ್ಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ಹೋಗಿತ್ತು. ತಾವು ಭಾಗವಹಿಸಬೇಕು, ಗೆಳೆಯ ಗೆಳತಿಯರನ್ನ ಭೇಟಿ ಮಾಡಬೇಕು ಅನ್ನೋ ಆಸೆ ರಜನಿಕಾಂತ್ಗೂ ಇತ್ತಂತೆ. ಆದ್ರೆ ಬ್ಯಾಂಕಾಕ್ನಲ್ಲಿ ಕೂಲಿ ಶೂಟಿಂಗ್ ನಡೀತಾ ಇರೋದ್ರಿಂದ ರಜನಿಕಾಂತ್ ಈ ಕಾರ್ಯಕ್ರಮದಲ್ಲಿ ಭಾಗವಹಿಸೋಕೆ ಆಗ್ತಾ ಇಲ್ಲ. ಆದ್ರೆ ರಜನಿಕಾಂತ್ ಒಂದು ವಿಡಿಯೋ ಸಂದೇಶವನ್ನ ತಮ್ಮ ಕಾಲೇಜು ಸಹಪಾಠಿಗಳಿಗೆ ಕಳಿಸಿಕೊಟ್ಟಿದ್ದಾರೆ.
ಸೈಫ್ ಮೇಲಿನ ದಾಳಿಗೆ 'ಕಿಸ್' ನಟಿ ಶ್ರೀಲೀಲಾಗೆ ಸಮಸ್ಯೆ, ಒಗಟು ಬಿಡಿಸ್ತೀರಾ ನೋಡಿ!
ಅಚ್ಚ ಕನ್ನಡದಲ್ಲಿ ಮಾತನಾಡಿರೋ ತಲೈವಾ, ಈ ಕಾರ್ಯಕ್ರಮಕ್ಕೆ ಬಾರದೇ ಇರೋದಕ್ಕೆ ಬೇಸರ ವ್ಯಕ್ತಪಡಿಸೋದ್ರ ಜೊತೆಗೆ ಶಾಲಾ ಕಾಲೇಜು ದಿನಗಳ ಒಂದಿಷ್ಟು ಇನ್ ಟ್ರೆಸ್ಟಿಂಗ್ ಕಥೆಯನ್ನೂ ಹಂಚಿಕೊಂಡಿದ್ದಾರೆ.
ಅಸಲಿಗೆ ರಜನಿಕಾಂತ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದು ಗುಟ್ಟಹಳ್ಳಿಯ ಗವಿಗಂಗಾಧರೇಶ್ವರ ಸರ್ಕಾರಿ ಶಾಲೆಯಲ್ಲಿ. ಈ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದ್ತಾ ಇದ್ದ ರಜನಿ ಫಸ್ಟ್ ಱಂಕ್ ಗಳಿಸಿದ್ರಂತೆ. ಶಾಲೆಯ ಮಾನಿಟರ್ ಕೂಡ ಆಗಿದ್ರಂತೆ. ಆದ್ರೆ 98 ಪರ್ಸೆಂಟ್ ಪಡೆದ ರಜನಿಯನ್ನ ಅವರ ಸೋದರ ಎಪಿಎಸ್ ಕಾಲೇಜಿನಲ್ಲಿ ಸೈನ್ಸ್ ಓದಲಿಕ್ಕೆ ಸೇರಿಸಿಬಿಟ್ರು. ಕನ್ನಡದಲ್ಲಿ ಫಸ್ಟ್ ರಾಂಕ್ ಪಡೆದಿದ್ದ ರಜನಿ ಎಪಿಎಸ್ ಕಾಲೇಜಿನ ಇಂಗ್ಲೀಷ್ ಮಿಡಿಯಂ ಅರ್ಥವಾಗದೇ ಲಾಸ್ಟ್ ಬೆಂಚ್ ಸ್ಟುಡೆಂಟ್ ಆಗಿಬಿಟ್ರಂತೆ.
ಕಾಲೇಜ್ ಡೇಸ್ನಲ್ಲಿ ಮೊದ ಮೊದಲು ನಾಟಕ ಮಾಡಿದ್ದು, ಬಣ್ಣ ಹಚ್ಚಿದನ್ನೂ ನೆನಪಿಸಿಕೊಂಡಿರೋ ರಜನಿಕಾಂತ್, ಇಲ್ಲಿಂದಲೇ ನಟನೆ ಬಗ್ಗೆ ಆಸಕ್ತಿ ಮೂಡಿತು ಅನ್ನೋ ಮಾತು ಹೇಳಿದ್ದಾರೆ. ಆ ಮೂಲಕ ಕಾಲೇಜಿಗೆ ಧನ್ಯವಾದ ಹೇಳಿದ್ದಾರೆ.
ರಜನಿಕಾಂತ್ ಇವತ್ತು ಏರಿರುವ ಎತ್ತರಕ್ಕೆ ಇದನ್ನೆಲ್ಲಾ ಮರೆತುಬಿಡಬಹುದಿತ್ತು. ಕಾಲೇಜು ಫಂಕ್ಷನ್ಗೆ ಕರೆದಾಗ ಟೈಂ ಇಲ್ಲ ಅಂದಿದ್ರೆ ಮುಗಿದು ಹೋಗಿರೋದು. ಆದ್ರೆ ರಜನಿ ಅದೆಷ್ಟು ಎತ್ತರಕ್ಕೆ ಏರಿದ್ರೂ ಇವತ್ತಿಗೂ ಮೊದಲಿನಷ್ಟೇ ಸರಳತೆಯನ್ನ ಉಳಿಸಿಕೊಂಡು ಬಂದಿದ್ದಾರೆ. ಅಂತೆಯೇ ಖುಷಿ ಖುಷಿಯಾಗಿ ಹಳೆಯ ದಿನಗಳನ್ನ ಮೆಲುಕು ಹಾಕಿ ಈ ವಿಡಿಯೋ ಮಾಡಿದ್ದಾರೆ.
ಹೆಣ್ಣಿನ ಋಣ ಕೊಟ್ಟ ದೇವ್ರು ಮಣ್ಣಿನ ಋಣ ಕೊಡ್ಲಿಲ್ಲ; ರವಿಮಾಮನ ಮಾತಿಗೆ ಅನುಶ್ರೀ ತಬ್ಬಿಬ್ಬು!
ರಜನಿಕಾಂತ್ ತಾವು ಓದಿರೋ ಶಾಲಾ ಕಾಲೇಜುಗಳಿಗೆ ಸಾಕಷ್ಟು ಆರ್ಥಿಕ ಸಹಾಯ ಕೂಡ ಮಾಡಿದ್ದಾರೆ. ಅದೆಷ್ಟೇ ಎತ್ತರಕ್ಕೆ ಬೆಳೆದಿದ್ರೂ ಇವತ್ತಿಗೂ ಶಾಲೆ, ಕಾಲೇಜು ನೆನಪಾದ್ರೆ ಥಟ್ ಅಂತ ಇಲ್ಲಿಗೆ ಓಡಿ ಬರ್ತಾರೆ. ಸವಿ ಸವಿ ನೆನಪುಗಳನ್ನ ಮೆಲುಕು ಹಾಕ್ತಾರೆ. ಆಗಸದಲ್ಲಿದ್ರೂ ಭೂಮಿ ಮೇಲೆ ಕಾಲಿರುವ ತಾರೆ ನಮ್ಮ ಸೂಪರ್ ಸ್ಟಾರ್ ರಜನಿಕಾಂತ್. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.