
ಸೀತೆಯ ಪಟ್ಟಕ್ಕೆ ಸಾಯಿ ಪಲ್ಲವಿ ಸೌಂದರ್ಯ: ಹಳೆಯ 'ಜಾನಕಿ' ದೀಪಿಕಾ ಚಿಖ್ಲಿಯಾ ಕೊಟ್ಟ ರೇಟಿಂಗ್ ಎಷ್ಟು ಗೊತ್ತಾ?
ಭಾರತೀಯ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಒಂದು ಹೆಸರಂತೂ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ, ಅದೇ ನಿತೇಶ್ ತಿವಾರಿ ನಿರ್ದೇಶನದ ಬಜೆಟ್ ಬಾಂಬ್ 'ರಾಮಾಯಣ'. ಈ ರಾಮಾಯಣ (Ramayana) ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ನಮ್ಮ ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಅಬ್ಬರಿಸಲು ರೆಡಿಯಾಗುತ್ತಿದ್ದರೆ, ಸೌತ್ ಇಂಡಿಯಾದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ (Sai Pallavi) ಸೀತೆಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಆದರೆ, ಇಡೀ ದೇಶವೇ ಇವತ್ತಿಗೂ 'ಸೀತೆ' ಅಂದಾಕ್ಷಣ ನೆನಪಿಸಿಕೊಳ್ಳುವುದು ರಾಮಾನಂದ ಸಾಗರ್ ಅವರ ರಾಮಾಯಣದ ದೀಪಿಕಾ ಚಿಖ್ಲಿಯಾ ಅವರನ್ನು. ಹಾಗಾದರೆ, ಈ ಹೊಸ ಸೀತೆಯ ಬಗ್ಗೆ ಹಳೆಯ ಸೀತೆ ಏನ್ ಹೇಳ್ತಾರೆ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್!
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ದೀಪಿಕಾ ಚಿಖ್ಲಿಯಾ (Dipika Chikhlia) ಅವರು ಸಾಯಿ ಪಲ್ಲವಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. "ಸಾಯಿ ಪಲ್ಲವಿ ಒಬ್ಬ ಅದ್ಭುತ ನಟಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅವರ ನಟನೆಯನ್ನು ನಾನು ನೋಡಿದ್ದೇನೆ, ಅದು ನಿಜಕ್ಕೂ ಮೆಚ್ಚುವಂತದ್ದು" ಎಂದು ಹಾಡಿ ಹೊಗಳಿದ್ದಾರೆ. ಆದರೆ, ವಿಷಯ ಅಲ್ಲಿಗೆ ಮುಗಿಯುವುದಿಲ್ಲ! ಸೀತೆ ಅಂದ ಮೇಲೆ ಒಂದು ವಿಶಿಷ್ಟ ಕಳೆ ಇರಬೇಕು ಎಂಬುದು ದೀಪಿಕಾ ಅವರ ಅಭಿಪ್ರಾಯ.
"ತುಳಸಿದಾಸರ ರಾಮಾಯಣದಲ್ಲಿ ಸೀತೆಯ ಅಂದವನ್ನು ವಿವರಿಸುವಾಗ 'ಬಾದಾಮಿ ಕಣ್ಣುಗಳ ಸುಂದರಿ' ಎಂದು ವರ್ಣಿಸಲಾಗಿದೆ. ರಾಮಾನಂದ ಸಾಗರ್ ಅವರು ಅಂದು ನನ್ನಲ್ಲಿ ಆ ಲಕ್ಷಣಗಳನ್ನು ಕಂಡಿದ್ದರು. ಸಾಯಿ ಪಲ್ಲವಿ ಅವರು ಸೀತೆಯ ಗೆಟಪ್ನಲ್ಲಿ ಹೇಗೆ ಕಾಣುತ್ತಾರೆ ಎಂಬುದು ನಮಗೆ ಇನ್ನೂ ತಿಳಿದಿಲ್ಲ. ಆ ಸಿನಿಮಾದ ಮೊದಲ ಝಲಕ್ ನೋಡಿದ ಮೇಲೆ ಮಾತ್ರ ಅವರು ಸೀತೆಯ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿದ್ದಾರೆ ಎಂದು ಹೇಳಲು ಸಾಧ್ಯ" ಎಂದು ದೀಪಿಕಾ ಸ್ವಲ್ಪ ಕುತೂಹಲ ಕಾಯ್ದಿರಿಸಿದ್ದಾರೆ.
ಹಳೆಯ ರಾಮಾಯಣದ ಹವಾ ಕಮ್ಮಿ ಆಗಲ್ಲ!
ಇದೇ ವೇಳೆ ದೀಪಿಕಾ ಒಂದು ಭಾವನಾತ್ಮಕ ಮಾತು ಹೇಳಿದ್ದಾರೆ. "ನನ್ನ ಹೆಸರು ದೀಪಿಕಾ ಅನ್ನೋದಕ್ಕಿಂತ ಹೆಚ್ಚಾಗಿ ಜನ ನನ್ನನ್ನು ಸೀತೆ ಎಂದೇ ಗುರುತಿಸುತ್ತಾರೆ. ಅದು ನನ್ನ ಹೆಮ್ಮೆ. ಇವತ್ತಿನ ಪೀಳಿಗೆ ಕೂಡ ದೂರದರ್ಶನದ ಆ ಹಳೆಯ ರಾಮಾಯಣವನ್ನೇ ಇಷ್ಟಪಡುತ್ತಿದೆ. ಹಾಗಾಗಿ, ಹೊಸ ಸಿನಿಮಾ ಎಷ್ಟು ಅದ್ದೂರಿಯಾಗಿ ಬಂದರೂ, ಆ ಹಳೆಯ ರಾಮಾಯಣದ ನೆನಪುಗಳನ್ನು ಅಳಿಸಿಹಾಕುವುದು ಅಷ್ಟು ಸುಲಭವಲ್ಲ" ಎಂದಿದ್ದಾರೆ. ಅಂದಹಾಗೆ, ಅಂದು ರಾಮನಾಗಿ ಮಿಂಚಿದ್ದ ಅರುಣ್ ಗೋವಿಲ್ ಈಗ ಈ ಚಿತ್ರದಲ್ಲಿ ದಶರಥನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ!
ನಿತೇಶ್ ತಿವಾರಿ ಅವರ ಈ ಸಿನಿಮಾ ಸುಮ್ಮನೆ ಬರುತ್ತಿಲ್ಲ. ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಚಿತ್ರ ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸನ್ನಿ ಡಿಯೋಲ್ ಹನುಮಂತನಾಗಿ, ರವಿ ದುಬೆ ಲಕ್ಷ್ಮಣನಾಗಿ, ಮತ್ತು ಲಾರಾ ದತ್ತಾ ಕೈಕೇಯಿಯಾಗಿ ನಟಿಸುತ್ತಿದ್ದಾರೆ.
ಈ ಮಹಾಕಾವ್ಯ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗವು 2026ರ ದೀಪಾವಳಿಗೆ ಪಟಾಕಿ ಸಿಡಿಸಲು ರೆಡಿಯಾಗಿದ್ದರೆ, ಎರಡನೇ ಭಾಗವು 2027ಕ್ಕೆ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ, ಸಾಯಿ ಪಲ್ಲವಿ ಅವರು ದೀಪಿಕಾ ಚಿಖ್ಲಿಯಾ ಸೃಷ್ಟಿಸಿರುವ ಆ ಐಕಾನಿಕ್ ಇಮೇಜ್ ಅನ್ನು ಮೀರಿ ನಿಲ್ಲುತ್ತಾರಾ? ಅಥವಾ ಹೊಸ ಇತಿಹಾಸ ಸೃಷ್ಟಿಸುತ್ತಾರಾ? ಅನ್ನೋದನ್ನು ಕಾದು ನೋಡಬೇಕು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.