
ಸ್ತ್ರೀವಾದದ ಕುರಿತಾಗಿ ಬಾಲಿವುಡ್ ನಟಿ ನೀನಾ ಗುಪ್ತಾ ಹೇಳಿಕೆಯೊಂದನ್ನು ನೀಡಿದ್ದು, ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಸ್ತ್ರೀವಾದ ಸ್ತ್ರೀವಾದ ಎನ್ನುತ್ತಾ ಹೋರಾಟ ಮಾಡುವ ಬದಲು, ಮೊದಲು ಆರ್ಥಿಕವಾಗಿ ಸಬಲರಾಗುವುದನ್ನು ನೋಡಿ. ಮಾಡಬೇಕಾಗಿರುವ ಕೆಲಸದತ್ತ ಗಮನ ಕೊಡಿ ಎಂದು ನಟಿ ನೀನಾ ಗುಪ್ತಾ ಹೇಳಿದ್ದಾರೆ. ಗಂಡ ಮತ್ತು ಹೆಣ್ಣು ಯಾವತ್ತಿಗೂ ಸಮನಾಗಲು ಸಾಧ್ಯವಿಲ್ಲ. ಹೆಣ್ಣು ಗಂಡಿನ ಸಮನಾಗಬೇಕಾದರೆ ಗಂಡು ಗರ್ಭ ಧರಿಸಲು ಶುರು ಮಾಡಬೇಕಷ್ಟೇ. ಅದು ಹೇಗೆ ಸಾಧ್ಯವಿಲ್ಲವೋ, ಹಾಗೆ ಇಬ್ಬರೂ ಒಂದೇ ಎನ್ನುವಲ್ಲಿ ಅರ್ಥವಿಲ್ಲ ಎಂದು ನಟಿ ನೀನಾ ಗುಪ್ತಾ ಹೇಳಿದ್ದಾರೆ.
ರಣವೀರ್ ಅಲಹಬಾದಿಯಾ ಅವರ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡುವ ಸಮಯದಲ್ಲಿ ನಟಿ ನೀನಾ ಗುಪ್ತಾ ಫೆಮಿನಿಸಂ ಕುರಿತು ಹೇಳಿಕೆ ನೀಡಿದ್ದಾರೆ. ಸ್ತ್ರೀವಾದ ಎನ್ನುವುದು 'ಫಾಲ್ತು' (ನಿಷ್ಪ್ರಯೋಜಕ) ಎಂದು ಹೇಳೀರುವ ಅವರು, ಪುರುಷರು ಮತ್ತು ಮಹಿಳೆಯರ ನಡುವಿನ ಹೊಲಿಕೆ ಮಾಡುವುದು ಸರಿಯಲ್ಲ. ಅವರಿಬ್ಬರ ನಡುವಿನ ಸಮಾನತೆಯ ಪರಿಕಲ್ಪನೆಯನ್ನು ನಂಬುವ ಅಗತ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ಮಾತನಾಡಿ ಕಾಲಹರಣ ಮಾಡುವ ಬದಲು ಮಾಡಬೇಕಾಗಿರುವ ಕೆಲಸದತ್ತ ಗಮನ ಕೊಡಿ, ಆರ್ಥಿಕವಾಗಿ ಸಬಲರಾಗಲು ನೋಡಿ ಎಂದಿರುವ ನೀನಾ ಅವರು, ನೀವು ಗೃಹಿಣಿಯಾಗಿದ್ದರೆ, ಅದನ್ನು ಕೀಳಾಗಿ ನೋಡಬೇಡಿ, ಗೃಹಿಣಿಯ ಪಾತ್ರ ಕೂಡ ತುಂಬಾ ದೊಡ್ಡದು ಎಂದಿದ್ದಾರೆ.
ಟೈಟಾನಿಕ್ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗಿ ಅನುಭವಿಸಿದ ಹಿಂಸೆ ಅಷ್ಟಿಷ್ಟಲ್ಲ: ಅಂದಿನ ದಿನಗಳ ನೆನೆದ ನಟಿ ಕೇಟ್
ಗಂಡು-ಹೆಣ್ಣು ಇಬ್ಬರಿಗೂ ಅವರದ್ದೇ ಆದ ವ್ಯತ್ಯಾಸ ಇರುತ್ತದೆ. ಸಮಾನರು ಎಂದು ಹೇಳುವುದರಲ್ಲಿ ಅರ್ಥವಿಲ್ಲ ಎಂದಿರುವ ನಟಿ, ಕೆಲವು ಸಂದರ್ಭದಲ್ಲಿ ಹೆಣ್ಣು ಗಂಡಾಗಲು ಹೇಗೆ ಸಾಧ್ಯವಿಲ್ಲ ಎಂಬ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ನಾನು ಒಮ್ಮೆ ಬೆಳಿಗ್ಗೆ 6 ಗಂಟೆಗೆ ಫ್ಲೈಟ್ ಹಿಡಿಯಬೇಕಿತ್ತು. ಆ ಸಮಯದಲ್ಲಿ ನನಗೆ ಬಾಯ್ ಫ್ರೆಂಡ್ ಇರಲಿಲ್ಲ. ಬೆಳಗಿನ ಜಾವ 4 ಗಂಟೆಗೆ ಮನೆಯಿಂದ ಹೊರಗೆ ಬಂದಿದ್ದೆ. ತುಂಬಾ ಕತ್ತಲಾಗಿತ್ತು. ಒಬ್ಬಳನ್ನೇ ನೋಡಲು ಒಬ್ಬ ವ್ಯಕ್ತಿ ನನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದ, ನಾನು ಭಯದಿಂದ ನಡುಗಿದೆ. ಹಾಗೂ ಹೀಗೂ ಮಾಡಿ ಮನೆಗೆ ವಾಪಸಾದೆ. ಅಂದು ವಿಮಾನ ಮಿಸ್ ಆಯಿತು. ಮರುದಿನ ನಾನು ಅದೇ ವಿಮಾನವನ್ನು ಬುಕ್ ಮಾಡಿದೆ. ಆಗ ನನ್ನ ಪರಿಚಯದ ಒಬ್ಬ ಪುರುಷರ ನೆರವು ಪಡೆದೆ. ಅವರು ನನ್ನನ್ನು ಏರ್ಪೋರ್ಟ್ವರೆಗೆ ಡ್ರಾಪ್ ಮಾಡಿ ಬಂದರು. ಇದೇ ಕಾರಣಕ್ಕೆ ಹೇಳುವುದು, ಪ್ರತಿಯೊಬ್ಬರಿಗೂ ಅವರದ್ದೇ ಆದ ವ್ಯತ್ಯಾಸಗಳು ಇರುತ್ತವೆ. ಇಬ್ಬರೂ ಸಮಾನರು ಎನ್ನುತ್ತಾ ಕುಳಿತುಕೊಂಡರೆ ಆಗುವುದಿಲ್ಲ. ಹೆಣ್ಣಿನಂತೆ ಗಂಡು ಗರ್ಭ ಧರಿಸಿದರೆ ಬಹುಶಃ ಆಗ ಇಬ್ಬರೂ ಸಮಾನರಾಗಬಹುದು ಎಂದಿದ್ದಾರೆ.
ಈ ಮಾತಿಗೆ ಕೆಲವರು ಕಿಡಿ ಕಾರಿದ್ದರೆ, ಇನ್ನು ಕೆಲವರು ಇದನ್ನು ನಿಜ ಎಂದು ಹೇಳುತ್ತಿದ್ದಾರೆ. ನೀವೂ ಒಂದು ಹೆಣ್ಣಾಗಿ ಹೆಣ್ಣಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡಬಾರದು ಎಂದು ಕೆಲವರು ನಟಿಯನ್ನು ಟೀಕಿಸುತ್ತಿದ್ದಾರೆ. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವುದು ಇದಕ್ಕೇ ಎನ್ನುತ್ತಿದ್ದಾರೆ. ಆದರೆ ಇನ್ನು ಕೆಲವರು, ಹಿಂದೆ ಅದೆಷ್ಟೋ ಮಹಿಳೆಯರು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ವೀರ ವನಿತೆಯರಾಗಿದ್ದು, ಅವರ ಹೆಸರು ಎಂದಿಗೂ ಅಜರಾಮರವಾಗಿದೆ. ಅವರೂ ಇಂದಿನ ಕೆಲವು ಹೆಣ್ಣು ಮಕ್ಕಳಂತೆ ತಮಗೆ ಸಮಾನತೆ ಬೇಕು ಎಂದು ಭಾಷಣ ಮಾಡುತ್ತಾ, ಬೀದಿಗೆ ಇಳಿದು ಹೋರಾಟ ನಡೆಸಲಿಲ್ಲ. ಬದಲಿಗೆ ಅವರಿಗೆ ತಮ್ಮ ಗುರಿ ಸ್ಪಷ್ಟವಾಗಿತ್ತು. ಈಗಲೂ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಗುರಿಯತ್ತ ಧಾವಿಸಿ ಜಯಶೀಲರಾಗುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ. ಅಂಥ ಹೆಣ್ಣುಮಕ್ಕಳಿಗೂ ಸ್ತ್ರೀವಾದ ಎನ್ನುತ್ತಾ ವೇದಿಕೆಯ ಮೇಲೆ ಭಾಷಣ ಬಿಗಿಯುತ್ತಾ ಪ್ರಚೋದನೆ ನೀಡುವವರಿಗೂ ತುಂಬಾ ವ್ಯತ್ಯಾಸವಿದೆ ಎಂದು ನಟಿಯ ಪರವಾಗಿ ವಾದಿಸುತ್ತಿದ್ದಾರೆ. ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸ ಇದೆ ಎನ್ನುವ ಕಾರಣಕ್ಕಾಗಿಯೇ ಇಬ್ಬರಿಗೂ ಸೃಷ್ಟಿಯಲ್ಲಿ ವಿಭಿನ್ನ ಎಂದು ಗುರುತಿಸಲಾಗಿದೆ. ಅದನ್ನು ಬಿಟ್ಟು ಸ್ತ್ರೀವಾದದ ಹೆಸರಿನಲ್ಲಿ ಪುರುಷರನ್ನು ತುಚ್ಛವಾಗಿ ಕಾಣುತ್ತಾ ಇರುವುದು ಸರಿಯಲ್ಲ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ.
20 ವರ್ಷ ಹಿರಿಯ ನಟಿ ಜತೆ ಮದ್ವೆಯಾಗ ಹೊರಟಿದ್ದ ಅಭಿಷೇಕ್ ಬಚ್ಚನ್: ನಿಮ್ಮ ಜೊತೆ ಮಲಗಲೇ ಎಂದು ಕೇಳಿದ್ರಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.