ತೆಲುಗಿನ ಖ್ಯಾತ ನಟ ಕೋಟ ಶ್ರೀನಿವಾಸ್ ರಾವ್ ತನ್ನ ಬಗ್ಗೆ ಹಬ್ಬಿದ್ದ ವದಂತಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಆರೋಗ್ಯವಾಗಿದ್ದೀನಿ ಎಂದು ಹೇಳಿದ್ದಾರೆ.
ತೆಲುಗಿನ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ಬಗ್ಗೆ ಹಬ್ಬಿದ್ದ ವದಂತಿಗೆ ಅಭಿಮಾನಿಗಳು ಮತ್ತು ಸಿನಿಮಾರಂಗ ಶಾಕ್ ಆಗಿದೆ. 75 ವರ್ಷದ ನಟ ಕೋಟ ಶ್ರೀನಿವಾಸ ರಾವ್ ಇನ್ನಿಲ್ಲ ಎನ್ನುವ ಸುದ್ದಿ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆತ್ಮಕ್ಕೆ ಶಾಂತಿ ಕೋರಿ ಪೋಸ್ಟ್ಗಳನ್ನು ಸಹ ಶೇರ್ ಮಾಡಿದ್ದರು. ಸುದ್ದಿ ವೈರಲ್ ಆಗುತ್ತಿದ್ದಂತೆ ಹೈದರಾಬಾದ್ ನಲ್ಲಿರುವ ಕೋಟ ಶ್ರೀನಿವಾಸ ರಾವ್ ಅವರ ಮನೆಗೆ ಭದ್ರತೆ ಒದಗಿಸಲು ಪೊಲೀಸರು ಕೂಡ ಧಾವಿಸಿದ್ದರು. ಇದನ್ನು ನೋಡಿ ಶಾಕ್ ಆದ ಹಿರಿಯ ನಟ ತಾನು ಸತ್ತಿಲ್ಲ, ಆರೋಗ್ಯವಾಗಿದ್ದೀನಿ, ಇಂಥ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ. ಭದ್ರತೆಗೆ ಬಂದಿದ್ದ ಪೊಲೀಸರಿಗೆ ಆರೋಗ್ಯವಾಗಿರುವ ನಟನನ್ನು ನೋಡಿ ಶಾಕ್ ಆಗಿದ್ದಾರೆ.
ಅನೇಕ ವರ್ಷಗಳಿಂದ ಕೋಟ ಶ್ರೀನಿವಾಸ್ ರಾವ್ ತೆಲುಗು ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಆರೋಗ್ಯವಾಗಿರುವ ನಟನ ಬಗ್ಗೆ ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ಆತಂಕ ಸೃಷ್ಟಿಸಿದ್ದರು. ಈ ಬಗ್ಗೆ ಹಿರಿಯ ನಟ ಸಾಮಾಜಿಕಾ ಜಾಲತಾಣದಲ್ಲಿ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. 'ಯಾರೋ ಸಾಮಾಜಿಕ ಜಾಲತಾಣದಲ್ಲಿ ನಾನು ಸತ್ತಿದ್ದೇನೆ ಎಂದು ಸುದ್ದಿ ಹಬ್ಬಿಸಿದ್ದಾರಂತೆ. ನನಗೆ ಇದರ ಬಗ್ಗೆ ಗೊತ್ತಿರಲಿಲ್ಲ. ನಾನು ಬೆಳಗ್ಗೆ ಎಂದಿನಂತೆ, ನಾಳೆ ಯುಗಾದಿ ಹಬ್ಬ ಇದೆ. ಏನೆಲ್ಲ ತಯಾರಿ ಮಾಡಿಕೊಳ್ಳಬೇಕಂದು ಮನೆಯವರೊಂದಿಗೆ ಮಾತನಾಡಿಕೊಳ್ಳುತ್ತಿದ್ದೆ. ಅನೇಕರು ಕರೆಮಾಡಿ ನನ್ನ ಬಗ್ಗೆ ವಿಚಾರಿಸುತ್ತಿದ್ದಾರೆ. ಅದಕ್ಕಿಂತಲೂ ಆಶ್ಚರ್ಯ ಏನೆಂದರೆ, ಒಂದಿಷ್ಟು ಪೊಲೀಸರು ನಮ್ಮ ಮನೆಗೆ ಭದ್ರತೆಗಾಗಿ ಬಂದಿದ್ದಾರೆ. ಹಾಗಾಗಿ, ದಯವಿಟ್ಟು ಯಾರೂ ಕೂಡ ಈ ಸುಳ್ಳು ಸುದ್ದಿ ನಂಬಬಾರದು. ನಾನು ಆರೋಗ್ಯವಾಗಿದ್ದೀನಿ' ಎಂದು ಹೇಳಿದ್ದಾರೆ.
ಕೊಲೆ ಬೆದರಿಕೆಯಿಂದ ಹೆದರಿದ ಖಾನ್ ಕುಟುಂಬ; ನಿದ್ದೆ ಇಲ್ಲದ ರಾತ್ರಿ ಕಳೆಯುತ್ತಿರುವ ಸಲ್ಮಾನ್ ತಂದೆ
'ದುಡ್ಡು ಗಳಿಸುವುದಕ್ಕೆ ಸಾಕಷ್ಟು ದಾರಿಗಳಿವೆ. ಯಾರೂ ಇಂತಹ ಕೆಲಸಕ್ಕೆ ಕೈಹಾಕಬಾರದು. ಒಬ್ಬರ ಪ್ರಾಣದ ಜೊತೆಗೆ ಆಟ ಆಡಬಾರದು.' ಎಂದು ಕೂಡ ಹಿರಿಯ ನಟ ಕೋಟ ಶ್ರೀನಿವಾಸ ರಾವ್ ವಿಡಿಯೋದಲ್ಲಿ ಹೇಳಿದ್ದಾರೆ.
Salman Khan ಮನೆಗೆ ಫುಲ್ ಸೆಕ್ಯುರಿಟಿ: ಎಲ್ಲಾ ಕಾರ್ಯಕ್ರಮ ಸ್ಥಗಿತ!
ಕೋಟ ಶ್ರೀನಿವಾಸ ರಾವ್ ತೆಲುಗು ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರು. 1978 ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಪ್ರಾಣಮ್ ಖರೀದು ಚಿತ್ರದ ಮೂಲಕ ನಟನೆಯನ್ನು ಪ್ರಾರಂಭಿಸಿದರು. 2015 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2005 ರಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಸರ್ಕಾರ್ ಚಿತ್ರದ ಮೂಲಕ ಹಿಂದಿಗೆ ಪಾದಾರ್ಪಣೆ ಮಾಡಿದರು. ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ನಟರಾಗಿ ಮಾತ್ರವಲ್ಲದೆ, ರಾಜಕೀಯವಾಗಿಯೂ ಕೋಟ ಶ್ರೀನಿವಾಸ ರಾವ್ ಅವರು ಹೆಸರು ಮಾಡಿದ್ದಾರೆ.
ಕಬ್ಜ ಸಿನಿಮಾದಲ್ಲಿ ಶ್ರೀನಿವಾಸ್ ರಾವ್
ಉಪೇಂದ್ರ ನಟನೆಯ 'ಕಬ್ಜ' ಸಿನಿಮಾದಲ್ಲಿ ಕೋಟ ಶ್ರೀನಿವಾಸ ರಾವ್ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಒಂದು ಸಣ್ಣ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ಧಾರೆ. ಇನ್ನು, ಕನ್ನಡದ ಉಪೇಂದ್ರ ನಟನೆಯ ರಕ್ತ ಕಣ್ಣೀರು, ಆದಿತ್ಯ ಅಭಿನಯದ ಲವ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನಮ್ಮ ಬಸವ ಸಿನಿಮಾಗಳಲ್ಲಿ ಕೋಟ ಶ್ರೀನಿವಾಸ ರಾವ್ ನಟಿಸಿದ್ದರು.