500 ರೂನೊಂದಿಗೆ ಮುಂಬೈಗೆ ಬಂದ ನಾ ಇಡೀ ಆಸ್ತಿಯೇ ಹೋದರೂ ಮತ್ತೆದ್ದು ಬರುವೆ: ಕಂಗನಾ

By Anusha KbFirst Published Jan 27, 2023, 10:34 PM IST
Highlights

ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲು ತಮ್ಮ ಒಡೆತನದ ಪ್ರತಿಯೊಂದು ವಸ್ತುವನ್ನು ಅಡಮಾನವಿಡುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ ಬಾಲಿವುಡ್ ಕ್ವಿನ್ ಕಂಗನಾ ರಾಣಾವತ್ ತಮ್ಮ ಮತ್ತೊಂದು ಹೇಳಿಕೆ ಮೂಲಕ ಸುದ್ದಿಯಲ್ಲಿದ್ದಾರೆ.

ಮುಂಬೈ:  ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಲು ತಮ್ಮ ಒಡೆತನದ ಪ್ರತಿಯೊಂದು ವಸ್ತುವನ್ನು ಅಡಮಾನವಿಡುವುದಾಗಿ ಇತ್ತೀಚೆಗೆ ಹೇಳಿಕೆ ನೀಡಿದ ಬಾಲಿವುಡ್ ಕ್ವಿನ್ ಕಂಗನಾ ರಾಣಾವತ್ ತಮ್ಮ ಮತ್ತೊಂದು ಹೇಳಿಕೆ ಮೂಲಕ ಸುದ್ದಿಯಲ್ಲಿದ್ದಾರೆ. 500 ರೂಪಾಯಿಯೊಂದಿಗೆ ಮಾಯಾನಗರಿ ಮುಂಬೈಗೆ ಬಂದು ತನ್ನದೇ ಸಾಮ್ರಾಜ್ಯ ಕಟ್ಟಿರುವ ಕಂಗಾನಾ ಒಂದು ವೇಳೆ ಸಿನಿಮಾ ಬಿಡುಗಡೆ ನಂತರ ತಮ್ಮ ಇಡೀ ಸಂಪತ್ತು ಎಲ್ಲವೂ ಹೊರಟು ಹೋದರು ಚಿಂತಿಸಲಾರೆ ಮತ್ತದೇ ವಿಶ್ವಾಸದಿಂದ ಎದ್ದು ಬರುವೆ ಎಂಬ ದಿಟ್ಟ ಹೇಳಿಕೆ ನೀಡಿದ್ದಾರೆ. 

ಕಂಗನಾ ರಣಾವತ್ ತಾವೇ ನಿರ್ದೇಶಿಸುತ್ತಿರುವ ತಮ್ಮ ಬಹುನಿರೀಕ್ಷಿತ ಸಿನಿಮಾ ಎಮೆರ್ಜೆನ್ಸಿಯ ಚಿತ್ರೀಕರಣವನ್ನು ಇತ್ತೀಚೆಗಷ್ಟೇ ಮುಗಿಸಿದ್ದು, ಬುಧವಾರ ಪಾರ್ಟಿಯೊಂದಿಗೆ ಚಿತ್ರೀಕರಣ ಮುಗಿದ ಸಂದರ್ಭದವನ್ನು ಆಚರಿಸಿದರು. ಈ ಸಿನಿಮಾದಲ್ಲಿ ಭಾರತದ ಧೀಮಂತ ನಾಯಕಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ.  ಈ ವೇಳೆ  ಮಾತನಾಡಿದ ಅವರು ಎಮರ್ಜೆನ್ಸಿ ಸಿನಿಮಾವನ್ನು ಪೂರ್ಣಗೊಳಿಸುವುದಕ್ಕಾಗಿ  ತನ್ನೆಲ್ಲಾ ಆಸ್ತಿಯನ್ನು ಅಡಮಾನ ಇಟ್ಟ ಬಗ್ಗೆ ನಟಿಯನ್ನು ಮಾಧ್ಯಮಗಳು ಪ್ರಶ್ನಿಸಿದವು. 

Pathaan: ಶಾರುಖ್‌ ಸಿನಿಮಾ ಸಕ್ಸಸ್​ ಹಿಂದೆ ಪಾಕಿಸ್ತಾನ​ದ ISI ನಂಟು: ಕಂಗನಾ ರಣಾವತ್‌

ಜನವರಿ 21ರಂದು ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಮುಗಿದಿರುವುದಾಗಿ ಘೋಷಿಸಿದ್ದರು. ಈ ವೇಳೆ ಇದು ಸುಗಮ ಹಾದಿಯಾಗಿರಲಿಲ್ಲ ಎಂಬುದನ್ನು ಅವರು ಇನ್ಸ್ಟಾಗ್ರಾಮ್‌ನಲ್ಲಿ ಬಹಿರಂಗಪಡಿಸಿದ್ದರು. ಅಸ್ಸಾಂ (Assam) ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸಿನಿಮಾದ ಚಿತ್ರೀಕರಣಕ್ಕಾಗಿ ತಾವು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದ ಕಂಗನಾ, ಚಿತ್ರ ಮಾಡಲು ತನ್ನ ಎಲ್ಲಾ ಆಸ್ತಿಗಳನ್ನು  ಹೊಂದಿರುವ ಪ್ರತಿಯೊಂದು ವಸ್ತುಗಳನ್ನು ಅಡಮಾನವಿಡಬೇಕು ಎಂದು ಹೇಳಿದ್ದರು. ಏಕೆಂದರೆ ಕಂಗನಾ ಈ ಸಿನಿಮಾಗೆ ನಿರ್ಮಾಪಕರಾಗಿಯೂ ಬೆಂಬಲ ನೀಡುತ್ತಿದ್ದಾರೆ. 

ಕಂಗನಾ ತನ್ನ ಆಸ್ತಿ ಅಡಮಾನ ಇಡುವ ಬಗ್ಗೆ ಮಾತನಾಡುವ ವಿಡಿಯೋಗಳನ್ನು ಪಾಪಾರಾಜಿ ಸೇರಿದಂತೆ ಕೆಲವು ಫ್ಯಾನ್‌ ಫೇಜ್‌ಗಳು ಶೇರ್ ಮಾಡಿಕೊಂಡಿವೆ. ಈ ವಿಡಿಯೋದಲ್ಲಿ ಕಂಗನಾ, ನಾನು ಏನನ್ನಾದರೂ ಮಾಡಲು ಹೊರಟರೆ ನಾನು ಯಾವಾಗಲೂ ಅದನ್ನು ಮಾಡಿ ತೋರಿಸುತ್ತೇನೆ.  ತುರ್ತು ಪರಿಸ್ಥಿತಿಯನ್ನು ಪೂರ್ಣಗೊಳಿಸಲು ನನ್ನ ಎಲ್ಲಾ ಆಸ್ತಿಯನ್ನು ಅಡಮಾನ (Mortgaging) ಇಡುವುದು ನನಗೆ ದೊಡ್ಡ ವಿಷಯವಲ್ಲ.  ಏಕೆಂದರೆ ನಾನು ನಿಮಿಷಗಳಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಚಿತ್ರೀಕರಣದ ವೇಳೆ ನಿರಂತರವಾಗಿ ಬ್ಯಾಂಕ್‌ಗಳಿಗೆ ಭೇಟಿ ನೀಡುವುದು ಒಂದೇ ದೊಡ್ಡ ಹೋರಾಟವಾಗಿತ್ತು. ಇದು  ಚಿತ್ರೀಕರಣದ ಸಮಯದಲ್ಲಿ ನಮ್ಮ ಕೆಲಸಕ್ಕೂ ಅಡ್ಡಿಯಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. 

ಎಮರ್ಜೆನ್ಸಿ ಪಾರ್ಟಿಯಲ್ಲಿ ಶಾರುಖ್ 'ಪಠಾಣ್' ಹೊಗಳಿದ ಕಂಗನಾ ರಣಾವತ್; ಹೇಳಿದ್ದೇನು?

ಇದೇ ವೇಳೆ ಬಾಲಿವುಡ್‌ನಲ್ಲಿ (Bollywood) ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡ ಕ್ವೀನ್, ಒಂದು ವೇಳೆ ಎಮರ್ಜೆನ್ಸಿ ಸಿನಿಮಾದ ಬಿಡುಗಡೆ ನಂತರ ತನ್ನ ಎಲ್ಲಾ ಆಸ್ತಿಯನ್ನು ಕಳೆದುಕೊಂಡರೂ ಮತ್ತೆ ಗಳಿಸಲು ಸಮರ್ಥಳಾಗಿದ್ದಾನೆ.  ನಾನು ಈ ನಗರಕ್ಕೆ ಕೇವಲ 500 ರೂಪಾಯಿ ಹಿಡಿದುಕೊಂಡು ಬಂದಿದ್ದೆ.  ಹಾಗಾಗಿ ನಾನು ಸಂಪೂರ್ಣವಾಗಿ ನಾಶವಾದರೂ ಸಹ, ಮತ್ತೊಮ್ಮೆ ನನ್ನ ಸಾಧನೆಯ ಮೇಲೆ ನಿಲ್ಲುವ ಆತ್ಮವಿಶ್ವಾಸ ಮತ್ತು ಶಕ್ತಿ ನನ್ನಲ್ಲಿದೆ ಎಂದು ಅವರು ಹೇಳಿದ್ದಾರೆ.

ಕಂಗನಾ 2006  ರಲ್ಲಿ ತೆರೆಕಂಡ  ಗ್ಯಾಂಗ್‌ಸ್ಟರ್ (Gangster) ಸಿನಿಮಾ ಮೂಲಕ ಬಾಲಿವುಡ್ ಸಿನಿಮಾ ರಂಗಕ್ಕೆ  ಪಾದಾರ್ಪಣೆ ಮಾಡಿದರು. ಈ ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾವನ್ನು ಅನುರಾಗ್ ಬಸು (Anurag Basu) ನಿರ್ದೇಶಿಸಿದ್ದರು. ಇದರಲ್ಲಿ ಕಂಗನಾ ಜೊತೆ ಇಮ್ರಾನ್ ಹಶ್ಮಿ (Emraan Hashmi) ನಟಿಸಿದ್ದಾರೆ. ಇನ್ನು ಅವರ ಶೀಘ್ರದಲ್ಲೇ ತೆರೆ ಕಾಣಲಿರುವ ಎಮರ್ಜೆನ್ಸಿ ಸಿನಿಮಾದಲ್ಲಿ ಕಾಶ್ಮೀರ್ ಫೈಲ್ಸ್ ಖ್ಯಾತಿಯ ನಟ ಅನುಪಮ್ ಖೇರ್ ದಿವಂಗತ ಜಯಪ್ರಕಾಶ್ ನಾರಾಯಣ್ (Jayaprakash Narayan) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಹಿಮಾ ಚೌಧರಿ ಅವರು ಇಂದಿರಾಗಾಂಧಿ (Indira Gandhi) ಅವರ ಸ್ನೇಹಿತೆ ಮತ್ತು ಆಪ್ತ ಪುಪುಲ್ ಜಯಕರ್ (Pupul Jayakar) ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಹಾಗೆಯೇ ಈ ಸಿನಿಮಾದಲ್ಲಿ ವಿಶಾಕ್ ನಾಯರ್, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

click me!