ಸೌತ್‌ಗೆ ಮಾಡಿದ ಅವಮಾನ; 'ಕನ್ನಡ' ಪದ ತಪ್ಪಾಗಿ ಹೇಳಿದ ವರುಣ್ ಧವನ್ ವಿರುದ್ಧ ನೆಟ್ಟಿಗರ ಕಿಡಿ

By Shruthi KrishnaFirst Published Dec 19, 2022, 12:30 PM IST
Highlights

ಬಾಲಿವುಡ್ ನಟ ವರುಣ್ ಧವನ್ ಕನ್ನಡ ಪದವನ್ನು ತಪ್ಪಾಗಿ ಹೇಳಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. 

ಕನ್ನಡ ಸಿನಿಮಾರಂಗ ಈಗ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇತ್ತೀಚಿಗೆ ಬಂದ ಕೆಲವು ಸಿನಿಮಾಗಳು ಇಡೀ ದೇಶವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ. ಕೆಜಿಎಫ್-2, 777 ಚಾರ್ಲಿ, ಕಾಂತಾರ ಸಿನಿಮಾಗಳು ಕನ್ನಡ ಸಿನಿಮಾರಂಗನ್ನೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಿಟ್ ಆಗುತ್ತಿವೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಈ ನಡುವೆ ಬಾಲಿವುಡ್ ನಟ ವರುಣ್ ಧವನ್ ಕನ್ನಡ ಪದವನ್ನು ತಪ್ಪಾಗಿ ಉಚ್ಚಾರಣೆ ಮಾಡಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಇತ್ತೀಚೆಗೆ, ಗಲಾಟ್ಟ ಪ್ಲಸ್, 'ರೌಂಡ್ ಟೇಬಲ್ ಇನ್ ಟ್ರೂ' ಕಾರ್ಯಕ್ರಮವನ್ನು ಆಯೋಜಿಸಿತ್ತು. ಕರಣ್ ಜೋಹರ್, ಪೂಜಾ ಹೆಗ್ಡೆ, ವರುಣ್ ಧವನ್, ಅನುರಾಗ್ ಕಶ್ಯಪ್, ಕನ್ನಡದ ನಿರ್ದೇಶಕ ಹೇಮಂತ್ ರಾವ್, ದುಲ್ಕರ್ ಸಲ್ಮಾನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಈ ವೇಳೆ ಕನ್ನಡ ಚಿತ್ರರಂಗದಿಂದ ಭಾಗಿಯಾಗಿದ್ದ ರೌಂಡ್ ಟೇಬಲ್ ಸಂವಾದದಲ್ಲಿ ನಿರ್ದೇಶಕ ಹೇಮಂತ್ ರಾವ್, ಕನ್ನಡ ಚಿತ್ರಗಳು ಮತ್ತು ಕನ್ನಡ ಪ್ರೇಕ್ಷಕರ ಬಗ್ಗೆ ಮಾತನಾಡಿದರು. ಹೆಚ್ಚಿನವರಿಗೆ ಅದು ‘ಕನ್ನಡ್’ ಅಲ್ಲ ‘ಕನ್ನಡ’ ಎಂಬ ಅರಿವು ಕೂಡ ಇರಲಿಲ್ಲ ಎಂದು ಹೇಳಿದ್ದಾರೆ. '8-9 ವರ್ಷಗಳ ಹಿಂದೆ ಉದ್ಯೋಗ ಮಾಡಲು ಬಂದಾಗ ಜನ ಕನ್ನಡ್ ಎಂದು ಹೇಳುತ್ತಿದ್ದರು. ನಾನು, ರಕ್ಷಿತ್, ರಿಷಬ್, ರಾಜ್ ಮತ್ತು ಪ್ರಶಾಂತ್ ಅವರಂತವರು ಕನ್ನಡ ಎಂದು ಹೇಳುತ್ತಿದ್ದೆವು. ಈಗ ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳು ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಿದೆ, ಮನ್ನಣೆ ತಂದುಕೊಟ್ಟಿವೆ'  ಎಂದು ಹೇಳಿದರು. 

ಪ್ರಭಾಸ್ ಲವ್ ಲೈಫ್ ಬಗ್ಗೆ ಸುಳಿವು ನೀಡಿದ ನಟ ವರುಣ್; ಬಾಹುಬಲಿ ಸ್ಟಾರ್ ಹೃದಯ ಕದ್ದ ಚೋರಿ ಯಾರು?

ಹೇವಂತ್ ರಾವ್ ಕನ್ನಡ ಪದದ ಬಗ್ಗೆ ಮಾತನಾಡಿದರೂ ಬಾಲಿವುಡ್ ನಟ ವರುಣ್ ಧವನ್ ತಪ್ಪಾಗಿ ಹೇಳಿದ್ದು ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ. 'ನನಗೆ ಪ್ರಾದೇಶಿಕ ಸಿನಿಮಾ ಎಂಬ ಪದ ಬಳಸುವುದು ಇಷ್ಟವಿಲ್ಲ. ಆದರೆ ಕನ್ನಡ್ ಸಿನಿಮಾ, ತಮಿಳು ಸಿನಿಮಾ ಅಥವಾ ತೆಲುಗು ಸಿನಿಮಾ ಈಗ ಹೆಚ್ಚು ಗಮನ ಸೆಳೆಯುತ್ತಿವೆ. ಆದರೆ ನನ್ನ ತಂದೆ 90 ರ ದಶಕದಲ್ಲಿ ಚಲನಚಿತ್ರಗಳನ್ನು ಮಾಡುತ್ತಿದ್ದಾಗ ಕೆಲವು ದೊಡ್ಡ ಹಿಟ್ ಚಿತ್ರಗಳು ತಮಿಳು ಅಥವಾ ತೆಲುಗು ಚಿತ್ರಗಳ ರಿಮೇಕ್ ಆಗಿದ್ದವು' ಎಂದು ಹೇಳಿದರು. 

ವೆಸ್ಟಿಬುಲರ್ ಹೈಪೋಫಂಕ್ಷನ್ ಕಾಯಿಲೆಯಿಂದ ಬಳಲುತ್ತಿರುವ ನಟ ವರುಣ್ ಧವನ್; ಹೀಗಂದರೇನು?

ನಿರ್ದೇಶಕ ಹೇಮೆಂತ್ ರಾವ್ ಹೇಳಿದ ಬಳಿಕವೂ ವರುಣ್ ಧವನ್ ಕನ್ನಡ್ ಎಂದು ಹೇಳಿರುವುದು ಸೌತ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. 'ಇದು ಸೌತ್ ಅವರಿಗೆ ಮಾಡಿದ ಅವಮಾನ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 'ಯಾವ ಸಾಧನೆ ಮಾಡಿದ್ದಾರೆ ಅಂತ ವರುಣ್ ಧವನ್ ಅವರನ್ನು ಕರೆದುಕೊಂಡು ಬಂದಿದ್ದೀರಿ' ಎಂದು ಕಿಡಿಕಾರುತ್ತಿದ್ದಾರೆ. ಕನ್ನಡ ನಿರ್ದೇಶಕ ಹೇಮಂತ್ ಕನ್ನಡ ಉಚ್ಚಾರಣೆಯ ಬಗ್ಗೆ ಸುದೀರ್ಘ ಹೇಳಿದರೂ ಕೂಡ ವರುಣ್ ಧವನ್ ಕನ್ನಡ್ ಅಂತ ಹೇಳಿ ದಕ್ಷಿಣವನ್ನು ಅವಮಾನಿಸಿದ್ದಾರೆ ಎಂದು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

click me!