ಶ್ರೀರಾಮನನ್ನು ಮನೆ ಮನೆಗೆ ತಲುಪಿಸಿದ ನಟರು ಇವರು!

By Suvarna NewsFirst Published Aug 5, 2020, 4:21 PM IST
Highlights

ಶ್ರೀರಾಮನ ಪಾತ್ರದಲ್ಲಿ ಹೃದಯಂಗಮವಾಗಿ ನಟಿಸಿ ಚಿತ್ರ ರಸಿಕರ ಮನ ಗೆದ್ದ, ಭಾರತೀಯರ ಕಣ್ಣಿನಲ್ಲಿ ರಾಮನೆಂದರೆ ಹೀಗೇ ಎಂಬ ಚಿತ್ರಣ ಮೂಡಿಸಿದ ನಟರು ಇವರೆಲ್ಲ! ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುವ ದಿನ ಇವರೆಲ್ಲ ನೆನಪಾಗುತ್ತಾರೆ.

ಭಾರತದ ಪ್ರತಿಯೊಂದು ಭಾಷೆಯಲ್ಲೂ ರಾಮಾಯಣ ಚಲನಚಿತ್ರವಾಗಿ ಬಂದಿದೆ. ಎಂಬತ್ತರ ದಶಕದಲ್ಲಿ ರಾಮಾಯಣ ಸೀರಿಯಲ್ ಆಗಿ‌ ಮನೆ ಮನೆ ತಲುಪಿತು. ಅದಕ್ಕೂ ಮೊದಲು ಹಾಗೂ ನಂತರವೂ ನಾನಾ ಭಾಷೆಗಳಲ್ಲಿ ಅಲ್ಲಿನ ಪ್ರಮುಖ ನಟರು ಕೆಲವು ಸಿನಿಮಾಗಳಲ್ಲಿ ರಾಮನ ಪಾತ್ರಧಾರಿಗಳಾಗಿ ನಟಿಸಿದ್ದರು. 

ದೂರದರ್ಶನದಲ್ಲಿ ಪ್ರಸಾರವಾದ ರಮಾನಂದ ಸಾಗರರ ರಾಮಾಯಣ ಸೀರಿಯಲ್‌ನಲ್ಲಿ ಅರುಣ್ ಗೋವಿಲ್ ಅವರು ಶ್ರೀರಾಮನ ಪಾತ್ರ ಮಾಡಿದರು. ದೀಪಿಕಾ ಚಿಕಾಲಿಯಾ ಸೀತೆಯಾಗಿದ್ದರು. ಅವರು ಆ ದಿನಗಳಲ್ಲಿ ಎಲ್ಲೇ ಹೋದರೂ ಶ್ರೀರಾಮನನ್ನೇ ಕಾಣುವಂತೆ ಭಕ್ತಿ ಭಾವದಿಂದ ನೋಡಲಾಗುತ್ತಿತ್ತಂತೆ. ಅವರು ಸೀತೆ ಸಮೇತ ತೆರೆಯ ಮೇಲೆ ಬರುವಾಗ, ಆರತಿ ಎತ್ತಿ ಹಣ್ಣುಕಾಯಿ ಮಾಡುವ ಕೈಮುಗಿಯುವ ಸೀನುಗಳೂ ಭಾರತದ ಸಾವಿರಾರು ಮನೆಗಳಲ್ಲಿ ಆಗುತ್ತಿದ್ದುದು ಉಂಟು. ನಂತರ ಅನೇಕ ವರ್ಷಗಳ ಕಾಲ ಅವರಿಗೆ ಸರಿಯಾದ ಇತರ ರೋಲ್‌ಗಳೇ ಸಿಗಲಿಲ್ಲ. ಕಾರಣ, ಶ್ರೀರಾಮನ ಪಾತ್ರ ಮಾಡಿದವನು ಇಂಥ ಚಿಲ್ಲರೆ ರೋಲ್ ಮಾಡುವುದು ಸರಿಯಲ್ಲ ಎಂಬ ಭಾವನೆ!



ಈಗಲೂ ಹಲವು ರಾಮಾಯಣಗಳು ಪ್ರಸಾರವಾಗುತ್ತವೆ. ಚೋಪ್ರಾ ಅವರ ರಾಮಾಯಣ ಬಂದಾಗ ನಿತೀಶ್ ಭಾರದ್ವಾಜ್ ಅದರಲ್ಲಿ ಶ್ರೀರಾಮನ ಪಾತ್ರ ಮಾಡಿದ್ದರು. ಆದರೆ ಅವರು ಅರುಣ್‌ ಗೋವಿಲ್‌ನಷ್ಟು ಯಶಸ್ವಿ ಆಗಲಿಲ್ಲ. ಅದಕ್ಕೆ ಕಾರಣ, ರಮಾನಂದ ಸಾಗರರ ರಾಮಾಯಣ ಸಂಪೂರ್ಣ ವಾಲ್ಮೀಕಿ ರಾಮಾಯಣಕ್ಕೆ ನಿಷ್ಠವಾಗಿತ್ತು. ರಾಮ ಕೂಡ ಮರ್ಯಾದಾ ಪುರುಷೋತ್ತಮನಾಗಿದ್ದ.
ಕನ್ನಡದಲ್ಲಿ ವರನಟ ಡಾ.ರಾಜ್‍ಕುಮಾರ್ ಅವರು ಶ್ರೀರಾಮನ ರೋಲ್ ಮಾಡಿದ್ದಾರೆ. ಶ್ರೀ ರಾಮಾಂಜನೇಯ ಯುದ್ಧ ಫಿಲಂನಲ್ಲಿ ಅವರು ರಾಮನ ಪಾತ್ರ ಮಾಡಿದ್ದರು. ಪಂಡರಿಬಾಯಿ ಸೀತೆಯಾಗಿದ್ದರು. ಕೆಎಸ್ ಅಶ್ವತ್ಥ, ಡಿಕ್ಕಿ ಮಾಧವರಾವ್ ಮುಂತಾದ ಘಟಾನುಘಟಿಗಳಿದ್ದರು. ಆಂಜನೇಯನ ಜೊತೆ ಯುದ್ಧ ಮಾಡುವ ಭಾವನಾತ್ಮಕ ಪಾತ್ರದಲ್ಲಿ ಅಣ್ಣಾವ್ರು ನೋಡುಗರ ಮನಸೂರೆ ಮಾಡಿದ್ದರು. ಶ್ರೀರಾಮ ಮುಂತಾದ ದೇವತಾ ಪಾತ್ರಗಳನ್ನು ಮಾಡಬೇಕಾದಾಗ ಅಣ್ಣಾವ್ರು ಮಾಂಸಾಹಾರ ಸೇವನೆ ಮಾಡುತ್ತಿರಲಿಲ್ಲವಂತೆ. ನಿತ್ಯ ಪೂಜೆ, ಧ್ಯಾನ, ಯೋಗ ಮಾಡಿ ಸೆಟ್‌ಗೆ ಬರುತ್ತಿದ್ದರು. ಶುದ್ಧವಾಗಿದ್ದು ಪಾತ್ರದಲ್ಲಿ ಲೀನವಾಗುತ್ತಿದ್ದರು ಎಂದು ಅವರ ಸಹನಟರು ಹೇಳುತ್ತಾರೆ.

ತೆಲುಗಿನ ಸೂಪರ್ ಸ್ಟಾರ್, ಮುಖ್ಯಮಂತ್ರಿ ಆಗಿದ್ದ ಎನ್‌ಟಿಆರ್ (ನಂದಮೂರಿ ತಾರಕ ರಾಮರಾವ್) ಯಾರಿಗೆ ಗೊತ್ತಿಲ್ಲ? ದ್ರಾವಿಡ ರಾಜಕಾರಣದ ನಡುವೆಯೂ ಇಲ್ಲಿ ಶ್ರೀರಾಮನಿಗೆ ಒಂದು ಅಜರಾಮರ ಫ್ಯಾನ್ ಫಾಲೋಯಿಂಗ್ ಕಲ್ಪಿಸಿಕೊಟ್ಟವರು ಎನ್‌ಟಿ‌ಆರ್. ಹಲವಾರು ಚಿತ್ರಗಳಲ್ಲಿ ಇವರು ರಾಮನಾಗಿದ್ದಾರೆ. ಲವ-ಕುಶ, ಶ್ರೀ ರಾಮಾಂಜನೇಯ ಯುದ್ಧ, ಶ್ರೀರಾಮ ಪಟ್ಟಾಭಿಷೇಕಂ ಅದರಲ್ಲಿ ಕೆಲವು.

ರಾಮನ ಜನ್ಮಸ್ಥಳ ಪತ್ತೆಗೆ ನೇಪಾಳ ಉತ್ಖನನ..! 

ತೆಲುಗಿನಲ್ಲಿ ಎನ್‌ಟಿಆರ್ ಅವರ ಶ್ರೀರಾಮನ ಲೆಗಸಿಯನ್ನು ಮುಂದುವರಿಸಿದವರು ನಂದಮೂರಿ ಬಾಲಕೃಷ್ಣ. ಶ್ರೀರಾಮರಾಜ್ಯಂ, ಶ್ರೀರಾಮಪಟ್ಟಾಭಿಷೇಕಂ ಫಿಲಂಗಳಲ್ಲಿ ರಾಮನಾಗಿ ಕಾಣಿಸಿಕೊಂಡರು. ನಯನತಾರಾ ಸೀತೆಯಾಗಿ ಸಾತ್ ನೀಡಿದರು. ಒಂದೇ ಹೊಡೆತಕ್ಕೆ ಲಾರಿ ಪುಡಿ ಮಾಡಬಲ್ಲ ಬಾಲಕೃಷ್ಣ ರಾಮನಾದದ್ದು ವಿಶೇಷವೇ.

'ಅರ್ನಾಬ್‌- ದಿ ನ್ಯೂಸ್‌ ಪ್ರಾಸ್ಟಿಟ್ಯೂಟ್‌'; ಆರ್‌ಜಿವಿ ಬ್ಯಾನರ್‌ನಲ್ಲಿ ಮತ್ತೊಂದು ಸಿನಿಮಾ! ...

ಹಿಂದಿಯ ಫೇಮಸ್ ನಟ ಜಿತೇಂದ್ರ ಕೂಡ ಶ್ರೀರಾಮ ನಾಗಿ ನಟಿಸಿದ್ದುಂಟು. ಲವಕುಶ ಫಿಲಂನಲ್ಲಿ ಅವರು ರಾಮನಾಗಿದ್ದರು. ಮರಾಠಿ, ಗುಜರಾತಿ ಮುಂತಾದ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಟಿವಿ ಸೀರಿಯಲ್‌ಗಳೂ, ಸಿನಿಮಾಗಳೂ ಶ್ರೀರಾಮನ ಮೇಲೆ ಬಂದಿವೆ. ಅದರಲ್ಲಿ ಶ್ರೀರಾಮನಾಗಿ ಕಾಣಿಸಿಕೊಂಡವರು ಮುಂದೆ ದೊಡ್ಡ ನಟರಾಗಿ, ರಾಜಕಾರಣಿಗಳಾಗಿ ಖ್ಯಾತರಾಗಿದ್ದಾರೆ. ಯಾರ ಬದುಕೂ ದುರಂತವಾಗಿಲ್ಲ ಎಂಬುದನ್ನು ಇಲ್ಲಿ ವಿಶೇಷವಾಗಿ ನೆನೆಯಲೇಬೇಕು.

ನಟಿ ಸಾನ್ವಿ ಫೇಸ್‌ಬುಕ್ ಖಾತೆ ಹ್ಯಾಕರ್ಸ್ ಮುಷ್ಠಿಯಲ್ಲಿ..! 

click me!