ಲವ್ ಮ್ಯಾರೇಜ್ ಆದೋರೆಲ್ಲ ಖುಷಿಯಾಗಿಲ್ಲ: ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಕಪಲ್ಸ್ ಏನಂತಾರೆ..?

By Suvarna NewsFirst Published Feb 14, 2021, 4:53 PM IST
Highlights

ಇಂದು ಪ್ರೇಮಿಗಳ ದಿನ. ಎಲ್ಲ ಪ್ರೇಮಿಗಳು ಮದುವೆಯಾಗುವುದಿಲ್ಲ. ಪ್ರೇಮಿಸಿ ಮದುವೆಯಾದವರೆಲ್ಲ ಯಶಸ್ವಿ ದಾಂಪತ್ಯ ನಡೆಸುತ್ತಾರೆ ಎನ್ನುವಂತೆಯೂ ಇಲ್ಲ. ಆದರೆ ಪ್ರೇಮ ಮತ್ತು ದಾಂಪತ್ಯದಲ್ಲಿ ಗೆದ್ದು ಮುನ್ನಡೆಯುತ್ತಿರುವ ಒಂದಷ್ಟು ಸೆಲೆಬ್ರಿಟಿಗಳು ಅದಕ್ಕೆ ಕಾರಣವಾದ ಅಂಶಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ.

ಶಶಿಕರ ಪಾತೂರು

ಪ್ರೇಮ ಎಲ್ಲರೂ ಮಾಡುತ್ತಾರೆ. ಅದನ್ನು ಮದುವೆಯ ಹಂತಕ್ಕೆ ತರಲು ಬಹಳ ಮಂದಿ ಸೋಲುತ್ತಾರೆ. ಆದರೆ ಅದರಲ್ಲಿ ಗೆದ್ದು ವಿವಾಹವಾಗಿರುವ ಒಂದಷ್ಟು ಕಲಾವಿದರ ಬದುಕು ಅದೇ ವಿಚಾರಕ್ಕೆ ಆದರ್ಶವಾಗುತ್ತದೆ. ಹಾಗಾಗಿ ಅಂಥದೊಂದು ಗೆಲುವು ಪಡೆಯಲು ಪ್ರಮುಖವಾಗಿ ಏನಿರಬೇಕು ಎನ್ನುವುದನ್ನು ಅವರೇ ಅನುಭವದ ಪ್ರಕಾರ ತಿಳಿಸಿದರೆ ಚಂದ. ಮಾತ್ರವಲ್ಲ, ಪ್ರೇಮಿಗಳ ಗೆಲುವು ಎನ್ನುವುದು ಸಿನಿಮಾಗಳಲ್ಲಿ ತೋರಿಸಿದಂತೆ ಬರೇ ವಿವಾಹಕ್ಕೆ ಸೀಮಿತವಲ್ಲ.

ದಾಂಪತ್ಯ ಜೀವನವನ್ನು ಯಶಸ್ವಿಯಾಗಿ ನಡೆಸಿದರೆ ಮಾತ್ರ ಅದು ನಿಜವಾದ ಪ್ರೇಮದ ಗೆಲುವು. ಹಾಗಾಗಿ ಪ್ರೇಮ ವಿವಾಹವಾಗಿ ವರ್ಷಗಳಿಂದ ಯಶಸ್ವಿ ದಾಂಪತ್ಯ ನಡೆಸುತ್ತಿರುವ ಕೆಲವು ಸೆಲೆಬ್ರಿಟಿಗಳು ಆ ಗೆಲುವಿನ ಗುಟ್ಟನ್ನು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.

ನನ್ನನ್ನು ಟ್ರೋಲ್ ಮಾಡಿ ಆದರೆ ರೂಲ್ ಮಾಡಬೇಡಿ- ಶೋಭರಾಜ್

"ನನ್ನ ಪ್ರೀತಿಯ ಬಗ್ಗೆ ಹೇಳುವುದಾದರೆ ಅದೊಂದು ಪ್ರೀತಿ, ಅಪ್ಯಾಯತೆ. ಪ್ರೀತಿಯ ಬಗ್ಗೆ ಹಂಸಲೇಖ ಅವರು ಒಂದು ಒಳ್ಳೆಯ ಮಾತು ಹೇಳಿದ್ದಾರೆ. ಒಬ್ಬರ ಮೈನ ಒಬ್ಬರು ಎಷ್ಟು ಸಲ ಮುಟ್ಟಿದ್ದೇವೆ ಎನ್ನುವುದಕ್ಕಿಂತ ಒಬ್ಬರ ಮನಸನ್ನು ಒಬ್ಬರು ಎಷ್ಟು ಬಾರಿ ತಟ್ಟಿದ್ದೇವೆ ಎನ್ನುವುದು ಮುಖ್ಯ ಎಂದು. ಆಗಲೇ ಪ್ರೀತಿ ಎನ್ನುವುದು ನಿರಂತರ ಜೀವನದಿಯಾಗುವುದು." 

ನೆನಪಿರಲಿ ಪ್ರೇಮ್, ಚಿತ್ರನಟ

"ನಿಷ್ಕಲ್ಮಶವಾದ ಪ್ರೀತಿ ಇರಬೇಕು. ಸ್ವಾರ್ಥದ ಪ್ರೀತಿ ತಾತ್ಕಾಲಿಕವಾಗಿರುತ್ತದೆ. ನಿಸ್ವಾರ್ಥ ಪ್ರೀತಿ ನಿರಂತರವಾಗಿರುತ್ತದೆ. ಮದುವೆಯಾದ ಮೇಲೆ ಸಾಕಷ್ಟು ಹೊಂದಾಣಿಕೆಗಳನ್ನು ಮಾಡಲೇಬೇಕಾಗುತ್ತದೆ. ಮದುವೆಗೆ ಮುನ್ನ ಪ್ರೀತಿಸುವ ದಿನಗಳಲ್ಲಿ ಎಲ್ಲ ಹೊತ್ತು ನಾವು ಅವರೊಂದಿಗೆ ಕಳೆಯುತ್ತಿರುವುದಿಲ್ಲ. ಆದರೆ ಮದುವೆಯ ಬಳಿಕ ರಾತ್ರಿ, ಹಗಲು ಅವರೊಂದಿಗೆಯೇ ಕಳೆಯುವ ಸಂದರ್ಭ ಬರುತ್ತದೆ. ಹಾಗಾಗಿ ನಮ್ಮ, ಅವರ ಎಲ್ಲ ಲೋಪದೋಷಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ಅವುಗಳ ಸಮೇತ ನಾವು ಪರಸ್ಪರ ಒಪ್ಪಿಕೊಳ್ಳಬೇಕು. ಇಲ್ಲಿ ಅಹಂಕಾರಕ್ಕೆ ಸ್ಥಾನ ಇರುವುದಿಲ್ಲ. ನಾನೇ ಸರಿ; ನನ್ನ ವಾದವೇ ಸರಿ  ಎನ್ನುವ ಅಹಂಕಾರ ಇದ್ದರೆ ಬಹಳ ಕಷ್ಟ. ಪ್ರತಿಯೊಂದು ವಾದದಲ್ಲಿ ನಾವೇ ಗೆಲ್ಲಬೇಕು ಎಂದುಕೊಳ್ಳುವುದು ತಪ್ಪು. ಸೋತರೂ ಪರವಾಗಿಲ್ಲ. ಸಂಬಂಧ ಉಳಿಸಿಕೊಳ್ಳುವುದು ಮುಖ್ಯ. "
                                                                                          
-ಅನಿರುದ್ಧ ಜಟ್ಕರ್, ಚಿತ್ರನಟ

ಕನ್ನಡತಿ ಮೆಚ್ಚಿದ ನಟಿ ವರುಧಿನಿ


"ಬೇಸಿಕಲಿ ಇಬ್ಬರ ನಡುವೆ ಉತ್ತಮ ಸ್ನೇಹ ಇದ್ದಾಗ ಖಂಡಿತವಾಗಿ ಪ್ರೇಮ ಗಟ್ಟಿಯಾಗಿರುತ್ತದೆ ಎನ್ನುವುದು ನನ್ನ ಅನುಭವದ ಮಾತು. ಯಾಕೆಂದರೆ ನನ್ನ ಮತ್ತು ಕೃಷ್ಣರ ನಡುವೆ ಮದುವೆಗೆ ಮೊದಲೂ ಸ್ನೇಹವಿತ್ತು, ಈಗಲೂ ಆ ಸ್ನೇಹ ಹಾಗೆಯೇ ಇದೆ. ಇಷ್ಟಗಳು ಕಷ್ಟಗಳಾಗುವುದನ್ನು ಮತ್ತು ಕಷ್ಟಗಳು ಇಷ್ಟಗಳಾಗುವುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಸ್ನೇಹ ಅಥವಾ ಇನ್ನಿತರ ಸಂಬಂಧಗಳಲ್ಲಿ ವಿಚ್ಚೇದನ ಎನ್ನುವುದು ಇರುವುದಿಲ್ಲ. ಅದೇ ರೀತಿ ದಾಂಪತ್ಯದ ಸಂಬಂಧವನ್ನು ಕೂಡ ಇರಿಸಿಕೊಂಡರೆ ಜಗಳಗಳು ವಿಚ್ಚೇದನಕ್ಕೆ ಹೋಗುವ ಅವಕಾಶಗಳೇ ಇರುವುದಿಲ್ಲ." 

- ಸ್ವಪ್ನಾಕೃಷ್ಣ, ನಿರ್ದೇಶಕಿ

"ಪ್ರೇಮ ಮೂಡಲು ಹಲವಾರು ಕಾರಣಗಳಿರಬಹುದು. ಆ ಪ್ರೀತಿ ಮದುವೆಯವರೆಗೆ ಹೋದರೆ ತುಂಬ ಚಂದ. ಮದುವೆಗೆ ಮೊದಲೇ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರೆ ಮದುವೆಯ ಬಳಿಕದ ಜೀವನ ತುಂಬ ಚೆನ್ನಾಗಿರುತ್ತದೆ. ದಾಂಪತ್ಯದಲ್ಲಿ ಏನೇ ಸಮಸ್ಯೆ ಬಂದರೂ ಕೂತು ಪರಸ್ಪರ ಚರ್ಚೆ ಮಾಡಬೇಕು. ಮನಸಿನೊಳಗೆ ಸಮಸ್ಯೆಗಳನ್ನು ಇರಿಸಿಕೊಂಡು  ಬಿಗುಮಾನದಿಂದ ದಿನ ಕಳೆಯುವಂತಾಗಬಾರದು. "

-ರಮೇಶ್ ಪಂಡಿತ್, ಚಿತ್ರನಟ

ಕನ್ನಡತಿ ನಿರ್ದೇಶಕ ಕೇರಳದ ಯಶವಂತ್

"ಪ್ರೀತಿಯಲ್ಲಿದ್ದಾಗ ಇಬ್ಬರ ಕಡೆಯಿಂದ ಒಂದು ಒಪ್ಪಂದ ಇರುತ್ತದೆ. ಅದಕ್ಕೆ ಯಾವುದೇ ಬಾಂಡೇಜ್ ಇರುವುದಿಲ್ಲ. ಅದು ಪ್ರೀತಿಯ ನೆಲೆಯಲ್ಲಿ ಮಾತ್ರ ಉಳಿದಿರುತ್ತದೆ. ಆದರೆ ಮದುವೆಯಾದಾಗ ಮದುವೆ ಎನ್ನುವ ಬಂಧನದೊಳಗೆ ಬಂದ ಮೇಲೆ ಅಲ್ಲಿ ಪ್ರೀತಿ ಇದ್ದರೂ, ಇಲ್ಲದಿದ್ದರೂ ಆ ಬಂಧನದೊಳಗೆ ಇರಲೇಬೇಕು ಎನ್ನುವ ಸಂದರ್ಭ ಬರುತ್ತದೆ. ಯಾವುದೇ ಒಂದನ್ನು ಪಡೆಯುವುದು ಹೆಚ್ಚಲ್ಲ. ಅದನ್ನು ಉಳಿಸಿಕೊಳ್ಳುವುದು ಮುಖ್ಯ. ಅದಕ್ಕಾಗಿ ನಾವು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುವುದು ಮುಖ್ಯ. ಯಾಕೆಂದರೆ ನಾನು ಅಷ್ಟು ಕೊಟ್ಟಿದ್ದೀನಿ. ನೀನು ಇಷ್ಟು ಕೊಡಲೇಬೇಕು ಎನ್ನುವುದಕ್ಕೆ ಇದು ವ್ಯವಹಾರವಲ್ಲ. ನಾವು ಎಷ್ಟು ಕೊಡುತ್ತೇವೆ ಎನ್ನುವುದರಲ್ಲಿ ಪ್ರೀತಿ ಇರುತ್ತದೆ. ಅದನ್ನು ತೂಕ ಹಾಕುವುದು ತಪ್ಪು."

-ಸುಂದರ್ ವೀಣಾ, ಚಿತ್ರನಟ

click me!