
ರಾಜೇಶ್ ಶೆಟ್ಟಿ
* ಈ ಸಿನಿಮಾ ನಿಮ್ಮನ್ನು ತಟ್ಟಿದ್ದು ಯಾಕೆ?
ಈ ಪಾತ್ರದ ಪ್ರಯಾಣ ಎಲ್ಲರಿಗೂ ತಟ್ಟಬಹುದು ಅನ್ನಿಸಿತು. ಪ್ರತಿಯೊಬ್ಬರಿಗೂ ಈಗ ಇರುವ ತಮ್ಮ ಬದುಕನ್ನು ಬಿಟ್ಟು ಎಲ್ಲಾದರೂ ಹೋಗಿಬಿಡಬೇಕು ಎಂದು ಯಾವುದೋ ಒಂದು ಕ್ಷಣದಲ್ಲಿ ಅನ್ನಿಸುತ್ತದಲ್ಲ ಆ ಭಾವವನ್ನು ನನ್ನ ಪಾತ್ರ ಜೀವಿಸುತ್ತದೆ. ಎದ್ದು ತನ್ನದಲ್ಲದ ಜಗತ್ತಿಗೆ ನಾನು ನಡೆದುಹೋಗುತ್ತೇನೆ. ಈ ಅಂಶ ಎಲ್ಲರಿಗೂ ಕನೆಕ್ಟ್ ಆಗುತ್ತದೆ ಅನ್ನಿಸಿತು. ಜೊತೆಗೆ ಈ ಕತೆ ವಿಶಿಷ್ಟವಾಗಿದೆ. ಅದಕ್ಕೆ ಒಪ್ಪಿಕೊಂಡೆ. ಈ ಕತೆ ಎಲ್ಲರಿಗೂ ಅವರವರ ಕತೆ ಅನ್ನಿಸಬಹುದೇ. ಅದೇ ಈ ಚಿತ್ರದ ವಿಶಿಷ್ಟತೆ.
* ಈ ಸಿನಿಮಾದ ಟೇಕ್ಅವೇ ಏನು ಅಥವಾ ಈ ಸಿನಿಮಾ ಏನು ದಾಟಿಸುತ್ತದೆ?
ನೋಡಿದವರು ಏನಾದರೂ ಅಂದುಕೊಳ್ಳಲಿ, ನಿಮ್ಮ ಬದುಕನ್ನು ನೀವು ಕಟ್ಟಿಕೊಳ್ಳಿ ಅಂತ ಹೇಳುವ ಸಿನಿಮಾ ಇದು. ನಾನು ಹತ್ತನೇ ಕ್ಲಾಸಲ್ಲಿ ಚೆನ್ನಾಗಿ ಅಂಕ ಗಳಿಸುತ್ತಿದ್ದೆ. ಪಿಯುಸಿಯಲ್ಲಿ ರಂಗಭೂಮಿ ಒಲವು ಹೆಚ್ಚಾಗಿದ್ದರಿಂದ ಅಂಕ ಕಡಿಮೆಯಾಯಿತು. ಆಮೇಲೆ ಇಂಜಿನಿಯರಿಂಗ್ ಬಿಟ್ಟು ಸಿನಿಮಾಗೆ ಬಂದೆ. ಆಗೆಲ್ಲಾ ಮನೆಯಲ್ಲಿ ನೋಡಿವರು ಏನಂತಾರೆ ಎಂಬ ಆತಂಕ ಜಾಸ್ತಿ ಇತ್ತು. ತಂಗಿ ಅಂತರ್ಜಾತಿ ವಿವಾಹವಾದಾಗಲೂ ನೋಡಿದವರು ಏನಂತಾರೆ ಎಂದೇ ದುಃಖ ಪಟ್ಟಿದ್ದರು ಅಮ್ಮ. ಈಗ ಅಂಥಾ ಒಳ್ಳೆಯ ಹುಡುಗ ಹುಡುಕಿದರೂ ಸಿಗುತ್ತಿರಲಿಲ್ಲ ಅನ್ನುತ್ತಾರೆ. ಅಂತಿಮವಾಗಿ ನೀವು ಅಂದುಕೊಂಡಂತೆ ಬದುಕುವುದರಿಂದಲೇ ನಿಮಗೆ ನೆಮ್ಮದಿ. ಈ ಅಂಶವನ್ನು ನಾಟಿಸುತ್ತದೆ ಈ ಚಿತ್ರ.
ನೋಡಿದವರು ಏನಂತಾರೆ ಎನ್ನುತ್ತಲೇ ನಮ್ಮ ಕನಸು, ಗುರಿ ಬಗ್ಗೆ ಸಿನಿಮಾ ಮಾತನಾಡುತ್ತದೆ ಬಂದ ನವೀನ್ ಶಂಕರ್
* ವಿಭಿನ್ನ ಕತೆಗಳನ್ನು ಆರಿಸಿಕೊಳ್ಳುತ್ತೀರಿ, ನಿಮ್ಮ ಗುರಿ ಏನು?
ನಾನು ಇದುವರೆಗೂ ಮಾರ್ಕೆಟ್ ಕುರಿತು ಆಲೋಚಿಸಿ ಯಾವುದೇ ಸಿನಿಮಾ ಮಾಡಿಲ್ಲ. ನನಗೆ ಬಂದಿದ್ದರಲ್ಲಿ ಒಳ್ಳೆಯ ಕತೆಯನ್ನು ನೋಡಿ ಸಿನಿಮಾ ಮಾಡಿದ್ದೇನೆ. ಅಂತಿಮವಾಗಿ ಎಲ್ಲರೂ ಪ್ರೀತಿಸುವಂತಹ ನಟ ಆಗುವ ಆಸೆ ಇದೆ. ಅದರ ಹೊರತಾಗಿ ವಿಭಿನ್ನ ಪ್ರಯತ್ನಗಳನ್ನು ಮಾಡುವ ಅವಕಾಶ ಈಗ ಸಿಗುತ್ತಿದೆ. ಆಮೇಲೆ ಸಿಗುತ್ತದೋ ಗೊತ್ತಿಲ್ಲ. ಅದಕ್ಕಾಗಿ ವಿಭಿನ್ನ ಪ್ರಯತ್ನ ಮಾಡುತ್ತಿದ್ದೇನೆ. ಕಂಟೆಂಟ್ ಮತ್ತು ಕಮರ್ಷಿಯಲ್ ಈ ಎರಡೂ ಅಂಶಗಳಿರುವ ಸಿನಿಮಾ ಮಾಡಬೇಕು ಎಂಬುದೇ ನನ್ನ ಆಸೆ.
* ಈ ಪ್ರಯಾಣದಲ್ಲಿ ಮುಂದಿನ ದಾರಿ ಕುರಿತು ನಿಮ್ಮಲ್ಲಿ ಭಯ ಇದೆಯೋ, ಆತಂಕ ಇದೆಯೋ?
ಗುಲ್ಟೂ ಆದ ಮೇಲೆ ಒಂದೆರಡು ಒಳ್ಳೆ ಸಿನಿಮಾಗಳು ನಿಂತು ಹೋದವು. ಆಗ ಸ್ವಲ್ಪ ಬೇಸರವಾಗಿತ್ತು. ಅದರ ಹೊರತಾಗಿ, ಭಯ ಆತಂಕ ಏನೂ ಇಲ್ಲ. ನಾನು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಈಗ ಜನ ಗುರುತಿಸುತ್ತಾರೆ, ಕಾಲೇಜು ಹುಡುಗರು ಬ್ರೋ ಫೋಟೋ ಕೊಡಿ ಬ್ರೋ ಅನ್ನುತ್ತಾರೆ, ಕ್ಲಾಸ್ ಮಾಸ್ ಎರಡೂ ವಿಭಾಗದ ಜನ ಮಾತನಾಡಿಸುತ್ತಾರೆ. ನನಗೆ ನನ್ನ ದಾರಿಯ ಕುರಿತು ತೃಪ್ತಿ ಇದೆ. ಪ್ರಯತ್ನಗಳಿಗೆ ಯಾವತ್ತೂ ಸೋಲಿಲ್ಲ. ಸಿನಿಮಾ ಸೋಲಬಹುದು. ಆದರೆ ನನ್ನ ಪ್ರಯತ್ನಗಳನ್ನು ಜನ ಗಮನಿಸುತ್ತಾರೆ. ಆ ಪ್ರಯತ್ನವೇ ಇವತ್ತಿನ್ನ ನನ್ನನ್ನು ರೂಪಿಸಿದೆ. ನನಗೆ ಅವಸರವೇನಿಲ್ಲ. ನಿಧಾನವಾಗಿಯಾದರೂ ಪರವಾಗಿಲ್ಲ, ಒಳ್ಳೆಯ ರೀತಿಯಲ್ಲಿ ನಡೆದು ಗುರಿ ಮುಟ್ಟುವೆ.
* ಈ ಸಿನಿಮಾ ಯಾರಿಗೆ ಹೆಚ್ಚು ತಾಕುತ್ತದೆ?
ಈ ಚಿತ್ರಕ್ಕೆ ವಯಸ್ಸಿನ ಹಂಗಿಲ್ಲ. ಯುಎ ಸರ್ಟಿಫಿಕೇಟ್ ಸಿಕ್ಕಿದೆ. ಅದರ ಮಾನದಂಡದ ಅನುಗುಣವಾಗಿ ಎಲ್ಲರೂ ನೋಡಬಹುದು. ಇದೊಂದು ಭಾವುಕ ಪ್ರಯಾಣ. ನೋಡುಗರನ್ನು ನನ್ನ ಪಾತ್ರ ತನ್ನ ಪ್ರಯಾಣದ ಭಾಗವಾಗಿ ಮಾಡಿಕೊಳ್ಳುತ್ತದೆ. ಅಮ್ಮನ ಮಮತೆ ಇದೆ, ಪ್ರೇಮದ ತೀವ್ರತೆ ಇದೆ, ತನ್ನನ್ನು ತಾನು ಕಂಡುಕೊಳ್ಳುವ ಹುಡುಕಾಟವಿದೆ, ಒಂದು ಅಂತಃಕರಣ ತಾಕುವ ಪ್ರಯಾಣವಿದೆ. ಒಂದು ಪುಟ್ಟ ಕಾದಂಬರಿ ಓದಿದ ಅನುಭವವನ್ನು ಈ ಸಿನಿಮಾ ಒದಗಿಸುತ್ತದೆ.
ಕುತೂಹಲ ಹುಟ್ಟಿಸಿರುವ ನವೀನ್ ಶಂಕರ್ ಸಿನಿಮಾ 'ನೋಡಿದವರು ಏನಂತಾರೆ': ಯಾರೂ ಕಂಡಿರದ ಸುಂದರ ತಾಣಗಳಲ್ಲಿ ಚಿತ್ರೀಕರಣ
* ಚಿತ್ರಕ್ಕಾಗಿ ಬಹಳ ಸಣ್ಣ ಆಗಿದ್ದ ನವೀನ್ ಶಂಕರ್
ನವೀನ್ ಶಂಕರ್ ಸಿನಿಮಾಗಾಗಿ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಾರೆ. ಅದಕ್ಕೆ ‘ನೋಡಿದವರು ಏನಂತಾರೆ’ ಸಿನಿಮಾ ಸಾಕ್ಷಿ. ಈ ಚಿತ್ರದಲ್ಲಿ ಒಂದು ಸನ್ನಿವೇಶದಲ್ಲಿ ಈ ಪಾತ್ರ ಬಹಳ ತೂಕ ಕಳೆದುಕೊಂಡಂತೆ ಕಾಣಿಸಬೇಕಿತ್ತು. ಅದಕ್ಕಾಗಿ ನವೀನ್ 64 ಕೆಜಿ ಇದ್ದವರು ಬಹಳ ಕಡಿಮೆ ದಿನದಲ್ಲಿ 14 ಕೆಜಿ ಕಳೆದುಕೊಂಡಿದ್ದರು. ಆ ದೃಶ್ಯ ಈ ಸಿನಿಮಾದಲ್ಲಿ ಬರುತ್ತದೆ. ಅಂತಹ ಬದಲಾವಣೆ ಈ ಪಾತ್ರಕ್ಕೆ ಬೇಕಿತ್ತು ಅನ್ನುತ್ತಾರೆ ನವೀನ್ ಶಂಕರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.