ಕೊರೊನಾ ವಿರುದ್ಧ ಎಚ್ಚರಿಕೆ ಅತ್ಯಗತ್ಯ ಅಂತಾರೆ ಗಿಣಿರಾಮ ನಟಿ ನಯನಾ

By Suvarna NewsFirst Published Apr 22, 2021, 11:10 AM IST
Highlights

ನಟಿ ನಯನಾ ನಾಗರಾಜ್ ಅವರನ್ನು ಕೋವಿಡ್ 19 ಕಾಡಿದೆ. ಕ್ವಾರಂಟೈನ್‌ನಲ್ಲಿರುವ ಅವರು ಕೊರೊನಾ ಬಗ್ಗೆ ಯಾರೂ careless ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಕ್ವಾರಂಟೈನ್‌ ದಿನಗಳನ್ನು ಅನುಭವಿಸುತ್ತಿರುವ ಕಷ್ಟದ ಬಗ್ಗೆ ಅವರು ಸುವರ್ಣ ನ್ಯೂಸ್‌.ಕಾಮ್‌ ಜೊತೆಗೆ ಮಾತನಾಡಿದ್ದಾರೆ.
 

ಬಹುಶಃ ಈ ಹುಡುಗಿಯ ಚುರುಕು ಕಂಗಳನ್ನು ನೋಡಿಯೇ ತಂದೆ ತಾಯಿ ನಯನಾ ಎನ್ನುವ ಹೆಸರಿಟ್ಟಿರಬೇಕು. ಪಾಪ ಪಾಂಡು ಧಾರಾವಾಹಿಯ ಚಾರು ಪಾತ್ರದ ಮೂಲಕ ಸನ್ನಿವೇಶಕ್ಕೆ ಅನುಗುಣವಾಗಿ ನಗಿಸಿ ಕಣ್ಣಲ್ಲಿ ನೀರು ತರಿಸುತ್ತಿದ್ದ ನಯನಾ ಕಣ್ಣಲ್ಲಿ ನೋವಿನ ಕಣ್ಣೀರಿದೆ.  ಅದಕ್ಕೆ ಕಾರಣ ಕೊರೊನಾ! ಹೌದು, ಪ್ರಸ್ತುತ `ಗಿಣಿರಾಮ' ಧಾರಾವಾಹಿಯ ಮೂಲಕ ಪ್ರೇಕ್ಷಕರ ಮನ ಸೆಳೆದಿರುವ ನಟಿ ನಯನಾ ಅವರು ತಮಗೆ ಕೊರೊನಾ ಸೋಂಕು ತಗಲಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿದ್ದರು. ಇದೀಗ ಕ್ವಾರಂಟೈನಲ್ಲಿ ಕಳೆಯುತ್ತಿರುವ ನಯನಾ ಅವರೊಂದಿಗೆ ನಡೆಸಿರುವ ಮಾತುಕತೆ ಇಲ್ಲಿದೆ.

- ಶಶಿಕರ ಪಾತೂರು

ನಿಮ್ಮ ಆರೋಗ್ಯ ಪರಿಸ್ಥಿತಿ ಈಗ ಹೇಗಿದೆ?
ನನಗೆ ಕೋವಿಡ್ ದೃಢಪಟ್ಟು ನಾನು ಕ್ವಾರಂಟೈನ್‌ ಆಗಿ ಇಂದಿಗೆ ನಾಲ್ಕು ದಿನಗಳಾಗಿವೆ. ನನಗೆ ಸಣ್ಣ ಲಕ್ಷಣಗಳು ಅರಿವಾಗುತ್ತಿದ್ದ ಹಾಗೆಯೇ ಚಿತ್ರೀಕರಣಕ್ಕೆ ಹೋಗುವುದನ್ನು ನಿಲ್ಲಿಸಿದೆ. ಆರಂಭದಲ್ಲಿ ಹೆಚ್ಚು ತಲೆನೋವು ಇತ್ತು. ನೆಗೆಡಿಯಾಗಿ, ಗಂಟಲು ಊದಿಕೊಂಡಿತ್ತು. ಸ್ವೆಲ್ಲಿಂಗ್ ಇತ್ತು. ತಲೆನೋವು, ಮೈಕೈ ನೋವು ಎಲ್ಲವು ಇತ್ತು. ಕಣ್ಣುಗಳು ಕೆಂಪಾಗಿದ್ದವು. ಮೊದಲ ದಿನವೇ ಲಂಗ್‌ ಇನ್ಫೆಕ್ಷನ್ ಆಯಿತು. ಯಾವುದೇ ಆಹಾರ ಸೇರದೇ ಇರುವುದು, ವಾಂತಿಯಾಗುವುದು, ಸ್ಮೆಲ್‌ ಅರಿವಾಗದಿರುವುದು.. ಹೀಗೆ ಕೊರೊನಾದ ಹೊಸ ಅಲೆಯ ಎಲ್ಲ ಲಕ್ಷಣಗಳೂ ನನಗೆ ಅನುಭವವಾಗಿದೆ. ಈಗ ಅವೆಲ್ಲದರ ಪ್ರಮಾಣ ಕಡಿಮೆಯಾಗಿದೆ. ಆಯಾಸ ಇದೆ. 

`ಡಾನ್ಸ್ ಕರ್ನಾಟಕ ಡಾನ್ಸ್‌'ನ ನೃತ್ಯ ಜೋಡಿ ವರುಣ್ ದಂಪತಿ

ಓರ್ವ ಗಾಯಕಿಯೂ ಆಗಿರುವ ಕಾರಣ ಈ ಗಂಟಲು ನೋವು ನಿಮಗೆಷ್ಟು ಭಯ ತಂದಿದೆ?
ಗಿಣಿರಾಮದಲ್ಲಿ ನನ್ನ ಪಾತ್ರ ಗಾಯಕಿಯದ್ದೇನೂ ಅಲ್ಲ. ಆದರೆ ನಾನು ಹಾಡಬಲ್ಲೆ ಎಂದು ತಿಳಿದಿರುವ ಕಾರಣ ಅದನ್ನು ಡೈರೆಕ್ಟರ್ ಆದಷ್ಟು ಮಟ್ಟಿಗೆ ಸದ್ಬಳಕೆ ಮಾಡಲು ನೋಡಿದ್ದಾರೆ. ದೇವಸ್ಥಾನಗಳ ಸಂದರ್ಶನ, ಹಬ್ಬದ ವಾತಾವರಣ ಮೊದಲಾದ ಸಂದರ್ಭಗಳಲ್ಲಿ ನಮ್ಮ ನಿರ್ದೇಶಕರು ನನಗೆ ಹಾಡುವ ಅವಕಾಶ ನೀಡುತ್ತಾರೆ. ಇನ್ನು ಇದರಿಂದಾಗಿ ನನಗೆ ಭಯವಂತೂ ಆಗಿಲ್ಲ. ನನ್ನಿಂದಾಗಿ ನನ್ನ ಸುತ್ತಮುತ್ತಲಿನವರಿಗೆ ಹರಡದಿರಲಿ ಎನ್ನುವುದಷ್ಟೇ ಚಿಂತೆ. ಮೆಂಟಲಿ ಸ್ಟ್ರಾಂಗ್ ಇದ್ದರೆ ಖಂಡಿತವಾಗಿ ರಿಕವರ್ ಆಗಬಹುದು. ಆದರೆ ಸಾಕಷ್ಟು ಸಮಯ ಬೇಕಾಗುವುದು ಖಚಿತ. ಸದ್ಯಕ್ಕೆ ನಾನು ನೆಬುಲೈಸೇಶನ್ ಮಾಡುತ್ತಿದ್ದೇನೆ.

ಹಾಡುಗಾರ ವಿಶ್ವನಾಥ್ ರನ್ನು ಮೋಡಿಗಾರನಾಗಿಸಿತು ಬಿಗ್ ಬಾಸ್

ನಿಮಗೆ ಕೋವಿಡ್ ಹೇಗೆ ಬಂದಿರಬಹುದು ಎನ್ನುವ ಬಗ್ಗೆ ಕಲ್ಪನೆ ಇದೆಯೇ?
ನನ್ನ ತಾಯಿಗೆ ವಾಕ್ಸಿನೇಶನ್ ತೆಗೆದುಕೊಂಡಿದ್ದರು. ಆದರೆ ಅವರಿಗೆ ಕೊರೊನಾ ಲಕ್ಷಣಗಳು ಕಾಣಿಸಿದಾಗ ನಾನೇ ನೋಡಿಕೊಳ್ಳುತ್ತಿದ್ದೆ. ಹಾಗಾಗಿ ನನಗೂ ಸಿಂಪ್ಟಮ್ಸ್‌ ಇದೆ ಅನಿಸಿದೊಡನೆ ಎಚ್ಚರ ವಹಿಸಿದೆ. ಬಹುಶಃ ಅವರಿಂದಲೇ ಬಂದಿರಬಹುದಾದ ಸಾಧ್ಯತೆಯೂ ಇದೆ. ಈಗಲೂ ಅಮ್ಮ ಆಸ್ಪತ್ರೆಯಲ್ಲಿದ್ದಾರೆ. ಅಲ್ಲಿಗೆ ಹೋಗಿ ಅವರನ್ನು ನೋಡಿಕೊಳ್ಳುವುದು ಕೂಡ ಅಸಾಧ್ಯವೆನಿಸುವಂಥ ಸಂದರ್ಭ ಇದು. ನಾನಂತೂ ಈಗ ಇರುವ ಕೋಣೆಯಿಂದ ಹೊರಗೆ ಬರುವಂತಿಲ್ಲ. ಸದ್ಯಕ್ಕೆ ನಮ್ಮಿಬ್ಬರನ್ನು ಅಪ್ಪನೇ ನೋಡಿಕೊಳ್ಳುತ್ತಿದ್ದಾರೆ. ಅಲ್ಲಿ ಅಮ್ಮನಿಗೆ ಊಟ ಕೊಡುವುದು, ಇಲ್ಲಿ ನನ್ನ ಕೋಣೆಯ ಹೊರಗಡೆ ಊಟದ ತಟ್ಟೆ ಇರಿಸುವುದು ಎಲ್ಲವೂ ಅವರೇ.

ಗೌತಮಿ ಜಾಧವ್ ತೆರೆದಿಟ್ಟ ಸತ್ಯ ಸಮಾಚಾರ

ಈ ಸಂದರ್ಭದಲ್ಲಿ ನೀವು ಇತರರಿಗೆ ಹೇಳಲು ಬಯಸುವುದೇನು? 
ನಮಗೆ ಕೊರೊನಾ ಬರುವುದಿಲ್ಲ, ಬಂದರೂ ಎರಡೇ ವಾರದಲ್ಲಿ ಹೋಗುತ್ತದೆ ಎಂದು ದಯವಿಟ್ಟು ಕ್ಯಾರ್ಲೆಸ್‌ ಮಾಡಬೇಡಿ. ಇದು ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ನೀಡುತ್ತಿದೆ. ಹಾಗಂತ ನಮಗೆ ನಾವೇ ನಮ್ಮಲ್ಲಿ ಇಮ್ಯುನಿಟಿ ಪವರ್ ಹೆಚ್ಚು ಇದೆ ಎಂದು ಅತಿಯಾದ ಆತ್ಮವಿಶ್ವಾಸ ಇರಿಸುವಂತೆಯೂ ಇಲ್ಲ. ಉದಾಹರಣೆಗೆ ನಾನೇ ಕೋವಿಡ್‌ನಿಂದ ಒಮ್ಮೆಲೆ ಇಷ್ಟು ವೀಕ್ ಆಗಿ ಬಿಡುತ್ತೇನೆ ಎನ್ನುವ ಕಲ್ಪನೆಯೂ ನನಗೆ ಇರಲಿಲ್ಲ. ನಾನು ಕೂಡ ಮನೆಯಿಂದ ಅನಗತ್ಯವಾಗಿ ಹೊರಗೆ ಹೋದವಳಲ್ಲ. ಹೊರಗಡೆ ಕಾಲಿಡಬೇಕಾದರೆ ಮಾಸ್ಕ್ ಧರಿಸುತ್ತಿದ್ದೆ. ಆದರೂ ನನಗೆ ಕೊರೊನ ಬಂತು ಎನ್ನುವ ಕಾರಣಕ್ಕೆ ಮಾಸ್ಕ್‌ನಿಂದ ಉಪಯೋಗವಿಲ್ಲ ಎನ್ನುವ ನಿರ್ಧಾರ ತಪ್ಪು. ಯಾಕೆಂದರೆ ಮಾಸ್ಕ್‌ ಹಾಕದೆ ಇರುವುದು ಇನ್ನಷ್ಟು ಅಪಾಯಕಾರಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಜೊತೆಗೆ ಒಯ್ಯುವುದು ಎಲ್ಲವೂ ಮುಖ್ಯವೇ. ಎಚ್ಚರ ವಹಿಸಿದ ಮೇಲೆಯೂ ರೋಗ ಬಂದರೆ ಅನುಭವಿಸಲೇಬೇಕು. ಒಂದು ವೇಳೆ ನಿಮಗೆ ಅಷ್ಟೊಂದು ಎಫೆಕ್ಟ್ ಆಗದಿದ್ದರೂ ನಿಮಗೆ ರೋಗ ಖಾತ್ರಿಯಾಗುವ ವೇಳೆಗೆ ನಿಮ್ಮಿಂದ ಮನೆಯ ಹಿರಿಯರಿಗೂ ಹರಡುವ ಅಪಾಯ ಇರುತ್ತದೆ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಿ ಎಂದು ಹೇಳಲು ಬಯಸುತ್ತೇನೆ. 

click me!