
ಆರ್. ಕೇಶವಮೂರ್ತಿ
ಟ್ರೇಲರ್ ನೋಡಿದಾಗ ನಿಮಗೆ ಏನನಿಸಿತು?
ಕುತೂಹಲ ಮೂಡಿತು. ಒಂದೇ ಒಂದು ಡೈಲಾಗ್ ಇಲ್ಲದೆ ಕಮರ್ಷಿಯಲ್ ಚಿತ್ರದ ಟ್ರೇಲರ್ ರೂಪಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರವಾಗಿ ನಿರ್ದೇಶಕ ಹರ್ಷ ಅವರು ‘ಭಜರಂಗಿ 2’ ಟ್ರೇಲರ್ ಮಾಡಿದ್ದಾರೆ. ನೋಡಿದ ಮೇಲೆ ನಾನೂ ಎಕ್ಸೈಟ್ ಆದೆ.
ತುಂಬಾ ವರ್ಷಗಳ ನಂತರ ನಿಮ್ಮ ಚಿತ್ರ ತೆರೆಗೆ ಬರುತ್ತಿದೆಯಲ್ಲ?
ಭಯ ಮತ್ತು ನಿರೀಕ್ಷೆ ಎರಡೂ ಇದೆ. ಯಾಕೆಂದರೆ ಯಾವ ರೀತಿ ಈ ಸಿನಿಮಾ ತೆಗೆದುಕೊಳ್ಳುತ್ತಾರೆ ಎಂಬುದು ಭಯ ಆದರೆ, ಈಗಾಗಲೇ ಹಾಡು ಮತ್ತು ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿದೆ. ಈ ಎರಡೂ ಭಾವನೆಗಳಲ್ಲಿ ನಾನೂ ಸಿನಿಮಾ ನೋಡಲು ಕಾಯುತ್ತಿದ್ದೇನೆ.
ಯಾಕೆ ಟ್ರೇಲರ್ನಲ್ಲಿ ಡೈಲಾಗ್ಗಳು ಇಲ್ಲ?
ಒಂದಿಷ್ಟುಮಾಸ್, ಬಿಲ್ಡಪ್ ಡೈಲಾಗ್ಗಳನ್ನು ಹಾಕಿ ಟ್ರೈಲರ್ ಮಾಡುವುದು ಸಾಮಾನ್ಯ. ಆದರೆ, ಡೈಲಾಗ್ಗಳಿಂದ ಪ್ರೇಕ್ಷಕರನ್ನು ಮಿಸ್ ಲೀಡ್ ಮಾಡಬಾರದು. ಕತೆಗೆ ಸೂಕ್ತ ಎನಿಸುಂತೆ ಇರಬೇಕು. ಜತೆಗೆ ಇಲ್ಲಿವರೆಗೂ ತುಂಬಾ ಮಾತನಾಡಿದ್ದೇವೆ. ಆದರೆ, ನಾವು ಏನು ಮಾಡಿದ್ದೇವೆ ನೋಡಿ ಅಂತ ಹೇಳಬೇಕಿತ್ತು. ಅದನ್ನು ಹೇಳುವ ಹೊಸ ಪ್ರಯತ್ನ ಇಲ್ಲಿದೆ.
ನಿಮ್ಮ ಪ್ರಕಾರ ಹೊಸ ಪ್ರಯತ್ನ ಯಾವುದು?
ಮೇಕಿಂಗ್, ಹಾರರ್, ಹಿನ್ನೆಲೆ ಸಂಗೀತ ಹಾಗೂ ವಿಷ್ಯುವಲ್ ಮೂಲಕ ಕತೆಯನ್ನು ಹೇಳುವ ಪ್ರಯತ್ನ. ನಮ್ಮ ಈ ಪ್ರಯತ್ನ ನಿಮಗೆ ಟ್ರೇಲರ್ನಲ್ಲೇ ಗೊತ್ತಾಗುತ್ತದೆ. ಮೇಕಿಂಗ್ ಅಂತೂ ಬೇರೆ ರೀತಿಯಲ್ಲೇ ಇದೆ. ಬೇರೆ ಜಗತ್ತಿನ ಫ್ಯಾಂಟಸಿ ಕತೆ ಇಲ್ಲಿದೆ. ಅದನ್ನು ನೀವು ಸಿನಿಮಾದಲ್ಲೇ ನೋಡಬೇಕು.
"
ಯಾವ ಜಾನರ್ ಸಿನಿಮಾ ಇದು?
ಡಿವೋಷನಲ್ ಮಾಸ್ ಸಿನಿಮಾ. ದೇವರು ಮತ್ತು ರಾಕ್ಷಸರು, ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಮುಖಾಮುಖಿ ಆಗುವ ಕತೆ. ಇಲ್ಲಿ ದೇವರು ಯಾರು, ರಾಕ್ಷಸರು ಯಾರು ಎಂಬುದು ಕತೆ. ಕನ್ನಡದ ಮಟ್ಟಿದೆ ಡಿವೋಷನಲ್ ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾ ಎಂಬುದು ಹೊಸದು.
ನಿಮಗೆ ಖುಷಿ ಕೊಟ್ಟಿದ್ದು ಏನು?
ಚಿತ್ರದ ಕತೆ, ಮೇಕಿಂಗ್, ಪಾತ್ರಗಳು. ಇದರ ಜತೆಗೆ ಮುಖ್ಯವಾಗಿ ನನ್ನ ಗೆಟಪ್ಗಳು. ನನ್ನ ಈ ಚಿತ್ರದ ಮೂಲಕ ಹೊಸ ರೀತಿಯಲ್ಲಿ ತೋರಿಸಿದ್ದಾರೆ. ಸ್ಕ್ರೀನ್ ಮೇಲೆ ನೋಡಿಕೊಂಡರೆ ಖುಷಿ ಕೊಡುತ್ತದೆ.
ಭಜರಂಗಿ 2 ಪಾರ್ಟ್ 1 ಕತೆಯ ಮುಂದುವರಿದ ಭಾಗವೇ?
ಖಂಡಿತ ಇಲ್ಲ. ಅದೇ ಬೇರೆ, ಇದೇ ಬೇರೆ ಕತೆ. ಒಂದಕ್ಕೊಂದು ಸಂಬಂಧ ಇಲ್ಲ. ಹೆಸರು ಮಾತ್ರ ಇಲ್ಲಿ ರಿಪೀಟ್ ಆಗಿದೆ ಅಷ್ಟೆ.
ಹೀರೋ ಪಾತ್ರದಷ್ಟೆಬೇರೆ ಕ್ಯಾರೆಕ್ಟರ್ಗಳು ಖಡಕ್ ಆಗಿವೆಯಲ್ಲ?
ಈಗ ಅದೆಲ್ಲ ಬೇಕು. ಯಾಕೆಂದರೆ ನಾನೇ ಎಂದರೆ ನಡೆಯಲ್ಲ. ಹೀರೋಯಿಸಂ ಎಲ್ಲಾ ಮಾಡಿ ಆಗಿದೆ. ಈಗ ಚಿತ್ರದ ಪ್ರತಿ ಪಾತ್ರವೂ ಕಂಟೆಂಟ್ನ ಪಿಲ್ಲರ್ಗಳಾಗಿರುತ್ತವೆ. ಅಂಥ ಪ್ರತಿ ಪಾತ್ರವನ್ನು ಅಷ್ಟೇ ಪ್ರಭಾವಿಯಾಗಿ ರೂಪಿಸಬೇಕು. ಹೀಗಾಗಿಯೇ ಮೊನ್ನೆ ನಾನು ತೋಟಿ ರೀತಿಯ ಪಾತ್ರಗಳನ್ನೂ ಮಾಡುವ ಆಸೆ ಇದೆ ಅಂತ ಹೇಳಿದ್ದು.
ತೋಟಿ ರೀತಿಯ ಕ್ಯಾರೆಕ್ಟರ್ ನಿಮಗೆ ಕಾಡಿದ್ದು?
ನಾನು ಚಿಕ್ಕ ವಯಸ್ಸಿನಿಂದಲೂ ನೋಡಿದ ಜನ- ವ್ಯಕ್ತಿಗಳು ಅವರು. ಇಡೀ ಸಮಾಜವನ್ನು ಅವರು ಸ್ವಚ್ಛ ಮಾಡುತ್ತಾರೆ. ನಾವು ಹಾಕುವ ಎಲ್ಲ ಕೊಳಕನ್ನು ಅವರೇ ತೆಗೆದು ನಮ್ಮ ಮನೆ, ಬೀದಿ ಸೇರಿ ಇಡೀ ಊರನ್ನೇ ಸ್ವಚ್ಛವಾಗಿಡುತ್ತಾರೆ. ಆದರೆ, ನಾವು ಅವರನ್ನು ಸಮಾನವಾಗಿ ನೋಡಲ್ಲ. ನೀರು ಕೊಡಬೇಕಾದರೂ ದೂರ ಇರು ಅಂತೀವಿ, ಅವರು ಜತೆಯಲ್ಲಿ ಬಂದರೂ ಹತ್ತಿರ ನಡೆಯಲ್ಲ. ಪಾಪ ಹೀಗೆ ಏನೇ ಅವಮಾನ ಮಾಡಿದರೂ ತೋಟಿ ಜನ ಮಾತ್ರ ತಮ್ಮ ವೃತ್ತಿಯನ್ನು ಭಕ್ತಿಯಿಂದ, ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅವರ ಬದುಕಿಗಿಂತ ಬೇರೆ ಕತೆ ಇಲ್ಲ. ಹೀಗಾಗಿ ಅಂಥ ಜನರ ಕತೆಯನ್ನು ಹೇಳುವ ತೋಟಿ ಪಾತ್ರ ಮಾಡಬೇಕು ಎನ್ನುವ ಆಸೆ ಇದೆ.
ತುಳಿತಕ್ಕೊಳಗಾದ ತಳವರ್ಗದ ಜನರ ಕತೆ ಬಂದರೆ ನಟಿಸುತ್ತೀರಾ?
ಖಂಡಿತ ಆ ರೀತಿಯ ಕತೆ ಬಂದರೆ ನಾನು ನಟಿಸುತ್ತೇನೆ. ಯಾಕೆ ಮಾಡಬಾರದು!? ಅವರು ನಮ್ಮ ಸಾಮಾಜವನ್ನು ಸ್ವಚ್ಚ ಮಾಡುವ ಜನ. ಬೀದಿ, ಚರಂಡಿ ಮಾತ್ರವಲ್ಲ, ಎಲ್ಲ ಕಡೆ ತುಂಬಿಕೊಂಡಿದೆ. ಅದೆಲ್ಲವನ್ನೂ ಈಗ ಕ್ಲೀನ್ ಮಾಡಬೇಕಿದೆ. ಹಾಗೆ ಕ್ಲೀನ್ ಮಾಡುವ ತೋಟಿ ನಾನು ಆಗಲು ರೆಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.