ಗಾರೆ ಹಿಡಿದ ಕೈ ಸ್ಟಾರ್‌ ಮೇಕರ್‌ ಆದ; ರಮೇಶ್‌ ರೆಡ್ಡಿ ಸಕ್ಸೆಸ್‌ ಸ್ಟೋರಿ!

By Kannadaprabha NewsFirst Published Dec 18, 2020, 9:47 AM IST
Highlights

ಆರಂಭದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದವರು ಈಗ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಚಿತ್ರಗಳ ನಿರ್ಮಾಪಕರು. ಒಳ್ಳೆಯ ಕತೆಗಳನ್ನು ಸಿನಿಮಾ ಮಾಡಬೇಕೆಂಬ ಆಲೋಚನೆಯೊಂದಿಗೆ ಚಿತ್ರ ನಿರ್ಮಾಣಕ್ಕೆ ಒಂದಿರುವ ರಮೇಶ್ ರೆಡ್ಡಿ ಅವರೊಂದಿಗಿನ ಸಂದರ್ಶನ ಇಲ್ಲಿದೆ.
 

ನಿಮ್ಮ ಹಿನ್ನೆಲೆ ಏನು?

ನಾನು ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲೂಕಿನ ನಂಗ್ಲಿ ಬಳಿ ಬರುವ ದೊಡ್ಡ ಗೊಲ್ಲಹಳ್ಳಿ ಗ್ರಾಮದವನು. ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ನಾನು ಗಾರೆ ಕೆಲಸ ಮಾಡುತ್ತಿದ್ದವನು. ಅದೇ ಕೆಲಸವನ್ನು ನಂಬಿಕೊಂಡು 1982ರಲ್ಲಿ ಬೆಂಗಳೂರಿಗೆ ಬಂದೆ. ಗಾರೆ ಕೆಲಸದಿಂದ ಮೇಸ್ತ್ರಿ ಆದೆ. ನಂತರ ಗುತ್ತಿಗೆದಾರನಾದೆ. ಯಾವುದೇ ಒಂದು ಕೆಲಸವನ್ನು ನಂಬಿ ಅದಲ್ಲೇ ಪ್ರಾಮಾಣಿಕವಾಗಿ ಮುಂದುವರಿದರೆ ಯಾವ ಹಂತಕ್ಕೆ ಬೇಕಾದರು ಬೆಳೆಯಬಹುದು.

ನಿಮ್ಮ ಬೆಳವಣಿಗೆಯ ಹಿಂದಿನ ಶಕ್ತಿ ಯಾರು?

ಇನ್‌ಫೋಸಿಸ್‌ ಸಂಸ್ಥೆಯ ಸುಧಾಮೂರ್ತಿ ಅವರು. ನಾನು ಸ್ಟಾರ್‌ ಹೋಟೆಲ್‌ ಊಟ ಮಾಡುತ್ತಿದ್ದೇನೆ. ಚಿತ್ರರಂಗದಲ್ಲಿ ನಿರ್ಮಾಪಕ ಆಗಿದ್ದೇನೆ, ಗುತ್ತಿಗೆದಾರನಾಗಿ ಒಂದು ಹೆಸರು ಬಂದಿದೆ ಎಂದರೆ ಎಲ್ಲದಕ್ಕೂ ಸುಧಾಮೂರ್ತಿ ಅವರ ನೆರವು, ಪ್ರೋತ್ಸಾಹವೇ ಕಾರಣ.

'ಕನ್ನಡತಿ'ಯ ಖಳನಟ 'ಸ್ಪಾನರ್ ಶಿವ' ಈ ಮಹೇಶ್ 

ನಿಮಗೆ ಇನ್‌ಫೋಸಿಸ್‌ನ ಸುಧಾಮೂರ್ತಿ ಅವರ ಒಡನಾಟ ಸಿಕ್ಕಿದ್ದು ಹೇಗೆ?

ಅದಕ್ಕೆ ಕಾರಣ ಸಿವಿ ಕರ್ನಲ್‌ ಕೃಷ್ಣ ಅವರು. ಇವರು ನನ್ನ ಕೆಲಸ ನೋಡಿ ಸುಧಾಮೂರ್ತಿ ಅವರನ್ನು ಪರಿಚಯ ಮಾಡಿಸಿದರು. ನನ್ನ ನೋಡಿದ ಸುಧಾಮೂರ್ತಿ ಅಮ್ಮ ‘ನಮ್ಮ ಜತೆ ಕೆಲಸ ಮಾಡುತ್ತೀರಾ’ ಎಂದು ಕೇಳಿದರೆ. ನಾನು ‘ನೀವು ದೊಡ್ಡ ಸಂಸ್ಥೆಯವರು. ನನಗೆ ಇಂಗ್ಲಿಷ್‌, ಹಿಂದಿ ಬರಲ್ಲ’ ಎಂದೆ. ಅವರು ಅದಕ್ಕೆ ‘ಕನ್ನಡ ಬರುತ್ತೇ ತಾನೇ? ಅಷ್ಟುಸಾಕು ಬಿಡಿ’ ಎಂದು ಮುಂದೆ ಅವರು ನನಗೆ ತಾಯಿಯಂತೆ ಜತೆಗೆ ನಿಂತರು. ರಾಮದಾಸ್‌ ಕಾಮತ್‌ ಹಾಗೂ ಸಂಜಯ್‌ ಭಟ್‌ ಅವರು ಕೂಡ ನನ್ನ ಬೆಳವಣಿಗೆಗೆ ಪ್ರೋತ್ಸಾಹಿಸಿದವರು.

ಉದ್ಯಮಿಯಾಗಿ ನೀವು ಕೊರೋನಾ ಸಂಕಷ್ಟಗಳನ್ನು ಹೇಗೆ ಎದುರಿಸಿದ್ರಿ?

ತುಂಬಾ ಕಷ್ಟಆಯಿತು. ಯಾಕೆಂದರೆ ನಮ್ಮನ್ನು ನಂಬಿ ನೂರಾರು ಮಂದಿ ಕಾರ್ಮಿಕರು ಇದ್ದರು. ಅವರನ್ನು ನೋಡಿಕೊಳ್ಳಬೇಕು. ಊರಿಗೆ ಹೋಗಬೇಕು ಎಂದುಕೊಂಡವರನ್ನು ಊರಿಗೆ ತಲುಪಿಸಬೇಕಿತ್ತು. ಬೆಂಗಳೂರಿನಲ್ಲೇ ಉಳಿದಕೊಂಡ ಕಾರ್ಮಿಕರ ಜೀವನ ನೋಡಿಕೊಳ್ಳಬೇಕಿತ್ತು. ಇದರ ನಡುವೆ ನನ್ನ ನಿರ್ಮಾಣದ ಸಿನಿಮಾಗಳು. ಸಂಪೂರ್ಣವಾಗಿ ನಿಂತೇ ಹೋದಂತೆ ಅನಿಸಿತು. ಆ ಸಂಕಷ್ಟಗಳನ್ನು ಈಗ ಮತ್ತೆ ಹೇಳಿದರೆ ಭಯ ಆಗುತ್ತದೆ. ಈ ಹಂತದಲ್ಲೂ ಕೂಡ ನನ್ನ ಕೈ ಹಿಡಿದಿದ್ದು ಅದೇ ಸುಧಾಮೂರ್ತಿ ಅವರು.

ಒಳ್ಳೆಯ ನಟಿ ಅನ್ನಿಸಿಕೊಳ್ಳುವುದೇ ನನ್ ಕನಸು; ಮಿಂಚು ಕಂಗಳ ಮಿಲನ ನಾಗರಾಜ್ 

ಕಟ್ಟಡ ಕೆಲಸ ಮಾಡಿಕೊಂಡಿದ್ದ ನಿಮಗೆ ಸಿನಿಮಾ ಆಸಕ್ತಿ ಹುಟ್ಟಿಕೊಂಡಿದ್ದು ಹೇಗೆ?

ನಾನು ಗಡಿ ಪ್ರದೇಶದವನು. ಸಿನಿಮಾ ನೋಡುವ ಹುಚ್ಚು ತುಂಬಾ ಇತ್ತು. ಯಾವುದೇ ಸಿನಿಮಾ ನೋಡಿದರೂ ಆ ಚಿತ್ರದಲ್ಲಿ ನನ್ನ ನಾನು ಕಲ್ಪನೆ ಮಾಡಿಕೊಳ್ಳುತ್ತಿದ್ದೆ. ಸಿನಿಮಾಗಳ ಬಗ್ಗೆ ಇದ್ದ ಕುತೂಹಲದಿಂದಲೇ ನಮ್ಮ ಊರಿನ ಕಡೆಯವರೇ ಆದ ಮಂಸೋರೆ ಅವರು ಒಂದು ಕತೆ ಮಾಡಿಕೊಂಡು ನಿರ್ದೇಶಕನಾಗಬೇಕು ಎಂದು ಓಡಾಡುತ್ತಿದ್ದಾಗ ಆತನಿಗೆ ನೆರವಾಗಲು ಮುಂದಾಗಿ ಚಿತ್ರ ನಿರ್ಮಾಪಕರನಾದೆ. ಹಾಗೆ ನನ್ನ ನಿರ್ಮಾಣದಲ್ಲಿ ಮೊದಲಿಗೆ ಬಂದಿದ್ದು ‘ನಾತಿಚರಾಮಿ’.

ನಿಮ್ಮ ಮೊದಲ ನಿರ್ಮಾಣದ ಚಿತ್ರವೇ ರಾಷ್ಟ್ರ ಮಟ್ಟದಲ್ಲಿ ಸುದ್ದಿ ಮಾಡಿತಲ್ಲ?

ಅದೆಲ್ಲವೂ ಚಿತ್ರತಂಡಕ್ಕೆ ಸೇರಬೇಕು. ನಿರ್ದೇಶಕ ಮಂಸೋರೆ ಅವರು ಮಾಡಿಕೊಂಡ ಕತೆ ಚೆನ್ನಾಗಿತ್ತು. ನಾನು ಒಬ್ಬ ನಿರ್ಮಾಪಕನಾಗಿ ಅವರ ಜತೆ ಪ್ರೀತಿಯಿಂದ ನಿಂತೆ. ಒಂದು ಒಳ್ಳೆಯ ಕತೆ ಇರುವ ಚಿತ್ರವನ್ನು ನಿರ್ಮಿಸಿದೆ, ನಮ್ಮ ಊರಿನ ಹುಡುಗನ ಆಸೆಗೆ ಜತೆಯಾದೆ ಎನ್ನುವ ನೆಮ್ಮದಿ ಇದೆ.

ಹಾರ್ಡ್‌ವರ್ಕ್ ಗೆಲ್ಲಿಸುತ್ತ: ದಿಯಾ ಚಿತ್ರದ ನಾಯಕಿ ಖುಷಿ 

ಕೆ ಮಂಜು ಅವರು ನಿರ್ಮಾಪಕರಾಗಿದ್ದರೂ ಅವರ ಮಗನನ್ನು ಹೀರೋ ಆಗಿ ಲಾಂಚ್‌ ಮಾಡಿದ್ರರಲ್ಲ?

ಅದು ಸ್ನೇಹಕ್ಕೆ. ನಾನು ಕೆ ಮಂಜು ಅವರು ಸ್ನೇಹಿತರು. ಅವರ ಪುತ್ರ ಶ್ರೇಯಾಸ್‌ನನ್ನು ನೋಡಿದೆ. ಒಳ್ಳೆಯ ಹುಡುಗಿ. ನಟನಾಗಬೇಕೆಂಸ ಆಸೆ ಇಟ್ಟುಕೊಂಡಿದ್ದ. ಅದಕ್ಕೆ ತಕ್ಕಂತೆ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದ. ಅವನ ಪ್ರಮಾಣಿಕತೆ, ಆಸಕ್ತಿ ನೋಡಿದ್ದೆ. ಹೀಗಾಗಿ ನಿರ್ಮಾಪಕನ ಮಗ ಎನ್ನುವುದಕ್ಕಿಂತ ನನ್ನ ಸ್ನೇಹಿತನ ಮಗ ಎನ್ನುವ ಕಾರಣಕ್ಕೆ ನಾನು ಶ್ರೇಯಾಸ್‌ನನ್ನು ‘ಪಡ್ಡೆಹುಲಿ’ ಚಿತ್ರದ ಮೂಲಕ ಲಾಂಚ್‌ ಮಾಡಿದೆ.

ಇಲ್ಲಿವರೆಗೂ ನೀವು ನಿರ್ಮಿಸಿರುವ ಚಿತ್ರಗಳ ಕುರಿತು ಹೇಳುವುದಾದರೆ?

ಒಂದೊಂದು ಸಿನಿಮಾ ಒಂದೊಂದು ರೀತಿ. ‘ನಾತಿಚರಾಮಿ’ ಕತೆ ಪ್ರಧಾನವಾದ ಚಿತ್ರ. ‘ಉಪ್ಪು ಹುಳಿ ಖಾರ’ ಸಿನಿಮಾ ಈಗಿನ ಯಂಗ್‌ ಜನರೇಷನ್‌ನ ಗಮನದಲ್ಲಿಟ್ಟುಕೊಂಡು ನಿರ್ಮಿಸಿದ್ದ ಚಿತ್ರ. ‘ಪಡ್ಡೆಹುಲಿ’ ಚಿತ್ರ ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಯುವಕನ ಕತೆ. ಹೀಗೆ ನಾನು ನಿರ್ಮಿಸಿದ ಎಲ್ಲ ಚಿತ್ರಗಳು ನನಗೆ ಒಂದೊಂದು ಹೆಜ್ಜೆ ಗುರುತು.

ನಿಮ್ಮ ಮುಂದಿನ ಚಿತ್ರಗಳು ಯಾವೆಲ್ಲ ಇವೆ? ಯಾವಾಗ ತೆರೆಗೆ ಬರುತ್ತವೆ?

ನಟ ಶ್ರೀಮುರಳಿ ಚಿತ್ರ ಸೇರಿ ನನ್ನ ಸೂರಜ್‌ ಪ್ರೊಡಕ್ಷನ್‌ನಲ್ಲಿ ನಾಲ್ಕು ಚಿತ್ರಗಳು ಇವೆ. ರಮೇಶ್‌ ಅರವಿಂದ್‌ ನಿರ್ದೇಶಿಸಿ, ನಟಿಸುತ್ತಿರುವ ‘100’ ಹಾಗೂ ಹಿಂದಿಯಲ್ಲಿ ಇದೇ ಚಿತ್ರವನ್ನು ಸುಶಿಗಣೇಶನ್‌ ನಿರ್ದೇಶನಲ್ಲಿ ನಿರ್ಮಿಸಿದ್ದೇನೆ. ಅಲ್ಲಿ ವಿನೀತ್‌ ಕುಮಾರ್‌ ಸಿಂಗ್‌ ಹಾಗೂ ಊರ್ವಶಿ ರೌಟೇಲಾ ಚಿತ್ರದ ಜೋಡಿ.

ನಿರ್ದೇಶಕರನ್ನು ನಂಬುವುದೇ ನನ್ನ ಸಕ್ಸಸ್ ಗುಟ್ಟು; ಆಶಿಕಾ ರಂಗನಾಥ್ 

ಶ್ರೀಮುರಳಿ ಜತೆಗೆ ನಿರ್ಮಿಸುತ್ತಿರುವ ಚಿತ್ರ ಯಾವಾಗ ಸೆಟ್ಟೇರುತ್ತದೆ, ಯಾವ ರೀತಿಯ ಸಿನಿಮಾ ಆಗಲಿದೆ?

ಈಗಷ್ಟೆಚಿತ್ರವನ್ನು ಘೋಷಣೆ ಮಾಡಿದ್ದೇನೆ. ಒಳ್ಳೆಯ ಕತೆಗಾಗಿ ಕಾಯುತ್ತಿದ್ದೇನೆ. ಕನ್ನಡದ ಮಟ್ಟಿಗೆ ಇದೊಂದು ದೊಡ್ಡ ಸಿನಿಮಾ ಆಗಲಿದೆ.

ಗಾಳಿಪಟ 2 ಚಿತ್ರದ ಶೂಟಿಂಗ್‌ ಎಲ್ಲಿಗೆ ಬಂದಿದೆ?

ಶೇ.60 ಭಾಗ ಚಿತ್ರೀಕರಣ ಆಗಿದೆ. ಉಳಿದಂತೆ ಸಂಪೂರ್ಣ ಚಿತ್ರೀಕರಣ ಜಾರ್ಜಿಯಾ ದೇಶದಲ್ಲಿ ಮಾಡಲಿದ್ದೇವೆ. ಕೊರೋನಾ ಭಯ ದೂರ ಆಗಬೇಕು. ಅಥವಾ ವಾಕ್ಸಿನ್‌ ಬಂದ ಮೇಲೆಯೇ ನಾನು ಶೂಟಿಂಗ್‌ಗೆ ಹೋಗುವುದು. ಯಾಕೆಂದರೆ ಈಗ ವೀಸಾ ಸಿಗುವುದು ಕಷ್ಟ.

click me!