ಚಿತ್ಕಳಾ ಈಗ ಕಿರುತೆರೆಯಲ್ಲಿ ಕನ್ನಡತಿಯ ರತ್ನಮಾಲಾ..!

By Suvarna NewsFirst Published Nov 29, 2020, 4:14 PM IST
Highlights

ಕಿರುತೆರೆಯಲ್ಲಿ ಎಷ್ಟೋ ಪಾತ್ರಗಳು ಬಂದು ಹೋಗುತ್ತವೆ. ಆದರೆ ಕೆಲವೊಂದು ಪಾತ್ರ ಮಾತ್ರ ಪ್ರೇಕ್ಷಕರ ಮನದಲ್ಲಿ ಸದಾ ಉಳಿಯುತ್ತವೆ. ಮುತ್ತು ರತ್ನದ ಮಾದರಿಯಲ್ಲಿ ಅಪರೂಪವೆನಿಸುವ ಅಂಥದೊಂದು ಪಾತ್ರವೇ ಕನ್ನಡತಿಯ ರತ್ನಮಾಲ. ಈ ಪಾತ್ರ ಮಾಡಿರುವ ನಟಿ ಚಿತ್ಕಳಾ ಬಿರಾದಾರ ಆ ಅನುಭವದ ಬಗ್ಗೆ ಇಲ್ಲಿ ಮಾತನಾಡಿದ್ದಾರೆ. 

ಚಿತ್ಕಳಾ ಬಿರಾದಾರ ನಟಿಯಾಗಿ ಗುರುತಿಸಿಕೊಂಡು ಸುಮಾರು ಹದಿನೈದು ವರ್ಷಗಳಾಗಿವೆ. ರಂಗಭೂಮಿ, ಕಿರುತೆರೆ,  ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಕನ್ನಡತಿಯಲ್ಲಿ ಹತ್ತು ತಿಂಗಳಿನಿಂದ ರತ್ನಮಾಲಾ ಆಗಿ ಮಾಡುತ್ತಿರುವ ಪಾತ್ರ ಅವರಿಗೆ ಬೇರೆಯೇ ಮಟ್ಟದ ಹೆಸರು ತಂದುಕೊಟ್ಟಿದೆ. ಅವರು ಕೂಡ  ಈ ಪಾತ್ರ ಇದುವರೆಗೆ ತಾವು ಮಾಡಿದ ಬೇರೆ ಎಲ್ಲಾ ಪಾತ್ರಗಳಿಗಿಂತ ವಿಭಿನ್ನಎಂದು ಒಪ್ಪಿಕೊಂಡಿದ್ದಾರೆ. ಅದು ಯಾಕೆ ಮತ್ತು ಹೇಗೆ ಎನ್ನುವುದನ್ನು ಅವರು ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.

ಶಶಿಕರ ಪಾತೂರು

ಅಮೆರಿಕನ್ನರಿಗೆ ಕನ್ನಡ, ನಾಟ್ಯ ಕಲಿಸಿದ ಯಮುನಾ ಶ್ರೀನಿಧಿ

ರತ್ನಮಾಲಾ ಪಾತ್ರ ನಿಮಗೇಕೆ ವಿಭಿನ್ನ?
ನಾನು ಸುಮಾರು ಧಾರಾವಾಹಿಗಳಲ್ಲಿ ತಾಯಿಯ ಪಾತ್ರ ಮಾಡಿದ್ದೀನಿ. ಆ ಎಲ್ಲಾ ಸಂದರ್ಭಗಳಲ್ಲೂ ತುಂಬಾ ಅಳುವುದು, ರೋದನೆ ಇರುವಂಥ ಪಾತ್ರಗಳೇ ನನ್ನ ಪಾಲಿಗೆ ಬಂದಿದ್ದವು. ಈ ರತ್ನಮಾಲಾ ಪಾತ್ರದಲ್ಲಿಯೂ ದುಃಖ ದುಮ್ಮಾನ,ಸಂಕಟ ಇದ್ದೇ ಇದೆ. ಆದರೆ ಇವಳು ಒಂದು ಅಳುಮುಂಜಿ ತಾಯಿ ಅಲ್ಲ. ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ತಿಳಿದಿರುವಾಕೆ. ತನ್ನದೇ ಘನತೆ, ಗೌರವ ಇಟ್ಕೊಂಡಿರುವವಳು. ಯಾವುದನ್ನೂ ಒಂದು ದೊಡ್ಡ ವಿಚಾರವಾಗಿ ಮಾಡದೇ ಅವಳು ತನ್ನ ಕಷ್ಟಗಳನ್ನು ನಿವಾರಿಸುತ್ತಾಳೆ ಯಾಕೆಂದರೆ ನೀವು ರತ್ನಮಾಲಾ ಕ್ಯಾರೆಕ್ಟರ್ ನ್ನು ನೋಡಿದರೆ ಅವಳು ಒಂದು ದೊಡ್ಡ ಕಂಪೆನಿ ನಡೆಸುವ ಎಮ್.ಡಿ . ಅದರ ಜೊತೆಗೆ ಅವಳು ಮನೆಗೆ ಹಿರಿಯಳು. ಜವಾಬ್ದಾರಿಯೊಂದಿಗೆ ತನ್ನ ಮೈದುನನ ಮಕ್ಕಳನ್ನು ತನ್ನ ಮಕ್ಕಳೆಂದೇ ನೋಡ್ಕೊಂಡು ಹೋಗುವವಳು. ಹಾಗಾಗಿ ಈ ರತ್ನಮಾಲಾ ಕ್ಯಾರೆಕ್ಟರ್  ನನಗೆ ತುಂಬಾ ತೃಪ್ತಿ ಕೊಟ್ಟಿದೆ. ಇಂತಹ ಒಂದು ಪಾತ್ರ ಮಾಡಬೇಕು ಎನ್ನುವ ಬಯಕೆ ನನಗೆ ಎಲ್ಲೋ ಒಳಗಡೆ ಇತ್ತು ಎನ್ನುವುದು ಈ ಪಾತ್ರ ಮಾಡುವಾಗ ಅನಿಸಿದೆ. 

ಕ್ರೇಜಿಸ್ಟಾರ್ ಜೊತೆ ಮಲ್ಲ ಸಿನಿಮಾ ಮರೆಯೋ ಹಾಗಿಲ್ಲ

ಕನ್ನಡತಿ ಧಾರಾವಾಹಿಯ ಪಾತ್ರಕ್ಕೆ ನಿಮಗೆ ಸಿಕ್ಕ ಪ್ರತಿಕ್ರಿಯೆಗಳು ಹೇಗಿವೆ?
ನನಗೆ ಅಭಿಮಾನಿಗಳ ಪ್ರತಿಕ್ರಿಯೆ ಹೊಸದೇನೂ ಅಲ್ಲ. ನಾನು ಎಷ್ಟೋ ಸೀರಿಯಲ್ ಗಳಲ್ಲಿ ಪಾತ್ರಗಳನ್ನು ಮಾಡಿದ್ದೀನಿ.  ಆವಾಗಲೆಲ್ಲಾ "ನೀವು ತುಂಬಾ ಚೆನ್ನಾಗಿ ಮಾಡಿದ್ದೀರಾ; ನೀವು ಬಂದರೆ ಒಳ್ಳೆಯ ಕಳೆ ಇರುತ್ತೆ" ಅಂತ ಹೇಳೋರು. ಆದರೆ ಈ ಕನ್ನಡತಿ ಸೀರಿಯಲ್ ಗೆ ಜನ ಪತ್ರಿಕ್ರಿಯಿಸಿದ ರೀತಿ ಇದೆಯಲ್ಲಾ ಅದು ಮಾತ್ರ ಬೇರೆ. ಇದರ  ಅಭಿಮಾನಿಗಳು ತುಂಬ ಭಾವನಾತ್ಮಕವಾಗಿ ಎಲ್ಲಾ ಪಾತ್ರಗಳ ಜೊತೆ ಹೊಂದ್ಕೊಂಡು ಬಿಟ್ಟಿದ್ದಾರೆ. ಬರೀ "ಸೂಪರ್-ಚೆನ್ನಾಗಿದೆ" ಅನ್ನೋದಕ್ಕಿಂತ ಹೆಚ್ಚಾಗಿ,  ತಾವು ಹೇಗೆ ನೋಡಬೇಕು ಅಂದ್ಕೊಂಡಿದ್ದಾರೆ; ಮುಂದೆ ಕಥೆ ಹೇಗೆ ಟರ್ನ್ ತಗೊಳ್ಳುತ್ತೆ ಅನ್ನೋದನ್ನೆಲ್ಲ ಅವರೇ ಒನ್ ಲೈನ್ ನಲ್ಲಿ  ಹೇಳ್ತಾ ಇದ್ದಾರೆ. ಇದು ನಮ್ಮದೇ ಎನ್ನುವಂಥ ಹಕ್ಕಲ್ಲಿ ಕೇಳೋಕೆ ಶುರು ಮಾಡ್ತಾರೆ. ಆ ತರಹದ ಪ್ರತಿಕ್ರಿಯೆಗಳು ರಿಯಾಕ್ಷನ್ ಗಳು ಕಮೆಂಟ್ಸ್ ಗಳು ನಮಗೆ ಬರ್ತಾ ಇವೆ. ಅದೆಲ್ಲ ಓದಿ ಜನರ ಈತರಹದ ಆಶೀರ್ವಾದ ಅವರ ಬೆಂಬಲ ಖುಷಿ ನೋಡಿ ನಮಗೆ ಏನು ಹೇಳಬೇಕು ಅಂತನೇ ಗೊತ್ತಾಗ್ತಿಲ್ಲ. ಏಕೆಂದರೆ  ಅವರು ಇದರಲ್ಲಿ ಬರುವಂತಹ ಕ್ಯಾರೆಕ್ಟರ್ ಗಳನ್ನು ಅಷ್ಟೇ ಪ್ರೀತಿಯಿಂದ ನೋಡ್ತಾರೆ. ಅಷ್ಟೇ ಪ್ರೀತಿಯಿಂದ ಕಮೆಂಟ್ಸ್ ನ್ನು ಹಾಕ್ತಾರೆ. ಹಾಗಾಗಿ ಈ ಅಭಿಮಾನಕ್ಕೆ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು.

ಸೀತಾ ವಲ್ಲಭದಿಂದ ಸಿನಿಮಾರಂಗಕ್ಕೆ ಬಂದ ಸುಪ್ರೀತಾ

ಕನ್ನಡತಿಯ ಬಳಿಕ ನಿಮ್ಮಲ್ಲಿ ಆಗಿರುವ ಬದಲಾವಣೆಗಳೇನು?
ಕನ್ನಡತಿ ಧಾರಾವಾಹಿಯಿಂದ ನಾನು ಅಳವಡಿಸಿಕೊಂಡದ್ದು ಏನೆಂದರೆ ಕನ್ನಡ ಭಾಷೆ  ಮಾತನಾಡುವಲ್ಲಿನ ಸ್ಪಷ್ಟತೆ. ಮೊದಮೊದಲು ಅದರಲ್ಲಿ ನಾನು ರತ್ನಮಾಲಾ ಆಗಿ ಮಾತನಾಡುವಾಗ ಕಷ್ಟ ಆಯಿತು. ಕ್ಲಿಷ್ಟ ಅಂತ ಅನಿಸಿತು. ಏಕೆಂದರೆ ನಾವು ದಿನ ನಿತ್ಯ  ಹತ್ತು ಪದ ಹೇಳುವಾಗಲೇ ಅದರಲ್ಲಿ ಒಂದು ಎಂಟರಷ್ಟು ಪದಗಳು ಇಂಗ್ಲೀಷ್ ನಲ್ಲೇ ಇರುತ್ತೆ. ಆಂಗ್ಲ ಭಾಷೆಯ ಮೇಲೆ ನಾವು ಅಷ್ಟೊಂದು ಅವಲಂಬಿತರಾಗಿದ್ದೀವಿ. ಅದು ನಮಗೆ ಗೊತ್ತೂ ಇಲ್ಲ.  ಕನ್ನಡದಲ್ಲಿ ಏನೋ ಒಂದು ಹೇಳೋಕೆ ಹೋದಾಗ ಅದು ನಮಗೆ ಅರ್ಥನೇ ಆಗಲ್ಲ, ಹಾಗಿರುವಾಗ, ಇದಕ್ಕೆ ನಮ್ಮ ನಿರ್ದೇಶಕರಾದ ಯಶವಂತ ಪಾಂಡು ಅವರಿಗೆ ತುಂಬಾ ಧನ್ಯವಾದ ಹೇಳಬೇಕು. ನನ್ನ ಮಾತೃಭಾಷೆ ಕನ್ನಡ ಆದರೂ ಅದನ್ನು ತೆರೆಯ ಮೇಲೆ ಸ್ಪಷ್ಟವಾಗಿ ಮಾತನಾಡಬೇಕಾದರೆ ಅದಕ್ಕೆ ನಮ್ಮದೇ ಆದ ಕಾನ್ಫಿಡೆನ್ಸ್ ಬರಬೇಕು.  ಆವಾಗಲೇ ಅದು ಸ್ಪಷ್ಟವಾಗಿ ನಿಮಗೆ ಕೇಳ್ಸೋದು. ತುಂಬಾ ಜನ ನಮ್ಮ ಕನ್ನಡತಿ ಬಗ್ಗೆ ಕಮೆಂಟ್ಸ್ ಮಾಡ್ತೀರಾ, ಭಾಷೆ ಬಗ್ಗೆ, ಕಂಟೆಂಟ್ ಬಗ್ಗೆ  ಅದಕ್ಕೆ ಎಲ್ಲಾ ಶ್ರೇಯ  ನಮ್ಮ ನಿರ್ದೇಶಕರಿಗೆ ಹೋಗಬೇಕು. ಹಾಗಾಗಿ ನಮ್ಮಲ್ಲಿ  ಕನ್ನಡಕ್ಕೆ ಜಾಸ್ತಿ ಒತ್ತು. ಬರೀ ಸೀರಿಯಲ್ ನಲ್ಲಿ ಮಾತ್ರ ಅಲ್ಲ.  ನಾನೀಗ ರತ್ನಮಾಲಾ ಆದಾಗಿನಿಂದ ನನ್ನ ಮೊಬೈಲ್ ನಲ್ಲಿ ಕನ್ನಡ ಚೆನ್ನಾಗಿ ಟೈಪ್ ಮಾಡ್ತಾ ಇದ್ದೀನಿ. ಆ ರೀತಿ ನಮ್ಮಲ್ಲೇ ನಮ್ಮ ಕನ್ನಡತನವನ್ನು ಹುಟ್ಟಿಸ್ಕೊಂಡ್ವಿ.  ಈಗ ಅನಿಸ್ತಾ ಇದೆ. ಈ ಧಾರಾವಾಹಿ ಮಾಡದೇ ಇರ್ತಿದ್ರೆ ನಾವೆಲ್ಲ ಬರೀ ಇಂಗ್ಲೀಷನ್ನೇ ಜಾಸ್ತಿ ಬಳಸ್ತಾ ಇದ್ವಿ ಏನೋ. ಹಾಗಾಗಿ ಕನ್ನಡವನ್ನ ಕನ್ನಡತವನ್ನ ನಮ್ಮಲ್ಲಿ ಬೆಳೆಸ್ಕೋಬೇಕು ಎನ್ನುವ ಮನೋಭಾವ ಬಂದಿದೆ.

 

click me!
Last Updated Nov 29, 2020, 4:14 PM IST
click me!