'ಕನ್ನಡತಿ'ಯ ಖಳನಟ 'ಸ್ಪಾನರ್ ಶಿವ' ಈ ಮಹೇಶ್

By Suvarna NewsFirst Published Dec 17, 2020, 5:11 PM IST
Highlights

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ `ಕನ್ನಡತಿ'. ಧಾರಾವಾಹಿಯ ಪ್ರತಿಯೊಂದೂ ಪಾತ್ರಗಳು ಕೂಡ ಜನ ಮೆಚ್ಚುಗೆ ಪಡೆಯುತ್ತಿದೆ. ಇದೇ ಧಾರಾವಾಹಿಯ 'ಸ್ಪಾನರ್ ಶಿವ' ಎನ್ನುವ ಪಾತ್ರದ ಮೂಲಕ ಕನ್ನಡಿಗರ ಮೆಚ್ಚಿದ ಕಲಾವಿದನಾಗಿರುವ ಮಹೇಶ್ ಇಲ್ಲಿ ತಮ್ಮ ಮನಸು ಬಿಚ್ಚಿ ಮಾತನಾಡಿದ್ದಾರೆ.
 

ಬಾಲ್ಯದಲ್ಲಿ ಎಲ್ಲರೂ ಸಿನಿಮಾ ಹೀರೋ ಆಗುವ ಕನಸು ಕಾಣುತ್ತಾರೆ. ಆದರೆ ಟಿ.ವಿ ಧಾರಾವಾಹಿಗಳನ್ನು ನೋಡಿ ಮೆಚ್ಚಿಕೊಂಡು, ನಾನು ಒಬ್ಬ ಕಿರುತೆರೆ ನಟನಾಗಬೇಕು ಎಂದುಕೊಳ್ಳುವವರು ವಿರಳ. ಆದರೆ ಅಂಥ ವಿರಳ ವ್ಯಕ್ತಿಗಳ ಸಾಲಿಗೆ ಸೇರಿದವರು ಮಹೇಶ್. ಅಂದುಕೊಂಡಿದ್ದು ಮಾತ್ರವಲ್ಲ, ಅದನ್ನು ಸಾಧಿಸಿಯೂ ತೋರಿಸಿದ್ದಾರೆ. ಯಾವ ಕಿರುತೆರೆ ಪ್ರಶಸ್ತಿ ಸಮಾರಂಭಕ್ಕೆ ಬೌನ್ಸರ್ ಆಗಿ ಕೆಲಸ  ಮಾಡಿದ್ದರೋ, ಅಲ್ಲಿಂದ ಅದೇ ಸಮಾರಂಭದಲ್ಲಿ ಪ್ರಶಸ್ತಿಗಾಗಿ ಸ್ಪರ್ಧಿಸುವ ಮಟ್ಟಕ್ಕೆ ಬೆಳೆದ ಈ ಪಯಣವೇ ರೋಚಕ. ಅವೆಲ್ಲದರ ಮಾಹಿತಿ ಇಲ್ಲಿದೆ.

ಶಶಿಕರ ಪಾತೂರು

ಕನ್ನಡತಿ ವರುಧಿನಿಯ ಬೋಲ್ಡ್ ಬ್ಯೂಟಿ

ನಿಮಗೆ ಧಾರಾವಾಹಿಗಳೆಂದರೆ  ಇಷ್ಟವಾಗಿದ್ದೇಕೆ? 
ನಾನು ಆರನೇ ಕ್ಲಾಸ್ ಇರುವಾಗ ನಮ್ಮ ಮನೆಗೆ ಟಿ.ವಿ ತಂದರು. ನಮ್ಮಮ್ಮ ಜೊತೆ ಕುಳಿತುಕೊಂಡು ಎಲ್ಲ ಧಾರಾವಾಹಿ ನೋಡುತ್ತಿದ್ದೆ. ಅದರಲ್ಲಿಯೂ `ರಂಗೋಲಿ' ಆಗ ನಾವೆಲ್ಲ ಮೆಚ್ಚಿ ನೋಡುತ್ತಿದ್ದ ಧಾರಾವಾಹಿ ಆಗಿತ್ತು. ಅದರಲ್ಲಿದ್ದಂಥ ಒಂದು ವಠಾರದ ಕತೆ, ತುಂಬಿದ ಮನೆಯ ಸಂಸಾರ ಎಲ್ಲವೂ ನನಗೆ ಇಷ್ಟವಾಯಿತು. ಮುಂದೆ ಧಾರಾವಾಹಿಯಲ್ಲಿ ನಟಿಸಿದರೆ ನಾನು ಕೂಡ ಎಲ್ಲರ ಮನೆ ಮಾತಾಗಬಲ್ಲೆ ಅನಿಸಿತು. ಮನೆಮನೆಯ ಹೀರೋ ಆಗಬೇಕೆಂದು ಹೊರಟವನು ಈಗ ವಿಲನ್ ಆಗಿಯಾದರೂ ಜನರ ಮನ ಸೇರಿಕೊಂಡಿದ್ದೇನೆ.

ಚಿತ್ಕಳಾ ಈಗ `ಕನ್ನಡತಿ'ಯ ರತ್ನಮಾಲ!

ಮೊದಲ ಅವಕಾಶಕ್ಕಾಗಿ ನೀವು ಪಟ್ಟ ಪ್ರಯತ್ನ ಎಂಥದ್ದು?
ನಾನು ಹಾಸನ ಜಿಲ್ಲೆ ಚೆನ್ನರಾಯಪಟ್ಟಣ ತಾಲೂಕು ಶ್ರವಣ ಬೆಳಗೊಳದ ಹಡೇನಹಳ್ಳಿ ಎನ್ನುವ ಗ್ರಾಮದವನು. ನಮ್ಮದು ರೈತ ಕುಟುಂಬ. ಕಾಲೇಜು ಮುಗಿಸಿ ಬೆಂಗಳೂರಿಗೆ ಬಂದವನು ಎರಡು ವರ್ಷ ಶೂಟಿಂಗ್ ಲೊಕೇಶನ್‌ಗಳಿಗೆ ಹೋಗಿ ಚಿತ್ರೀಕರಣ ಹೇಗೆ ನಡೆಯುತ್ತದೆ ಎಂದು ನೋಡುವುದರಲ್ಲೇ ಕಾಲ ಕಳೆದೆ. ಅಲ್ಲಿ ಅವಕಾಶ ಕೇಳುವುದಕ್ಕಿಂತ ಶೂಟಿಂಗ್ ಹೇಗಿರುತ್ತದೆ ಎಂದು ತಿಳಿಯುವುದೇ ನನಗೆ ಮುಖ್ಯವಾಗಿತ್ತು. ತಿಂಗಳ ಖರ್ಚಿಗೆ ಖಾಸಗಿಯಾಗಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದೆ. ನಟನಾ ತರಬೇತಿ ಪಡೆಯಲು ಕಟ್ಟುವಷ್ಟು ಹಣ ಇರಲಿಲ್ಲ. ಸಾಗರ್ ಎನ್ನುವ ಮಹಾನುಭಾವರೊಬ್ಬರು ತಮ್ಮ ಮನೆಯಲ್ಲೇ ಉಚಿತವಾಗಿ ಅಭಿನಯ ಹೇಳಿಕೊಟ್ಟರು. ಬಳಿಕ ಅವರ ಮೂಲಕವೇ ರವೀಂದ್ರ ಕಲಾಕ್ಷೇತ್ರಕ್ಕೆ ನಾಟಕಗಳಲ್ಲಿ ಪಾಲ್ಗೊಂಡೆ. ಅಲ್ಲಿ ಪರಿಚಯವಾದ ಜಗ್ಗು ಎನ್ನುವವರು `ಕಿನ್ನರಿ' ಧಾರಾವಾಹಿಯ ಮೂಲಕ ನನ್ನನ್ನು ಜ್ಯೂನಿಯರ್ ಆರ್ಟಿಸ್ಟ್ ಆಗಿ ತೆರೆ ಮುಂದೆ ತಂದರು. ಜಗ್ಗು ಅವರ ಮೂಲಕವೇ `ಜಗ್ಗುದಾದ' ಚಿತ್ರದಲ್ಲಿ ಕೂಡ ಜ್ಯೂನಿಯರ್ ಆರ್ಟಿಸ್ಟ್ ಆಗಿ ನಟಿಸಿದೆ.

ಕ್ರೇಜಿಸ್ಟಾರ್ ಜೊತೆ ನಟಿಸಿದ `ಮಲ್ಲ' ಮರೆಯೋಕಾಗಲ್ಲ- ಪ್ರಿಯಾಂಕಾ

ಅದರ ಬಳಿಕ ನೀವು ಧಾರಾವಾಹಿ ನಟನಾಗಿ ಬೆಳೆದದ್ದು ಹೇಗೆ?
ಅಮೃತವರ್ಷಿಣಿ, ತ್ರಿವೇಣಿ ಸಂಗಮ, ಅವಳು ಮೊದಲಾದ ಒಂದಷ್ಟು ಧಾರಾವಾಹಿಗಳಲ್ಲಿ ಜ್ಯೂನಿಯರ್ ಆರ್ಟಿಸ್ಟ್ ಆದ ಬಳಿಕ `ನೀಲಿ' ಎನ್ನುವ ಧಾರಾವಾಹಿಯಲ್ಲಿ ನಾಲ್ಕು ತಿಂಗಳ ಕಾಲ ಒಂದು ಪಾತ್ರ ದೊರಕಿತು. ಅದರ ಬಳಿಕ ಮತ್ತೆ ಕೆಲಸ ಇರದೇ ಕುಳಿತ ದಿನಗಳಲ್ಲಿ ಸ್ನೇಹಿತರೊಬ್ಬರು ನಿರ್ದೇಶಕ ಯಶವಂತ ಅವರನ್ನು ಸಂಪರ್ಕಿಸಲು ತಿಳಿಸಿದರು. ಅವರ ಮೂಲಕ ನನಗೆ ಉದಯದಲ್ಲಿ `ದೇವಯಾನಿ' ಧಾರಾವಾಹಿಯಲ್ಲಿ ಒಂದೊಳ್ಳೆಯ ಪಾತ್ರ ದೊರಕಿತು. ನಾನು ಸರಿಯಾದ ಸಂಭಾವನೆ, ಗೌರವ ಎಲ್ಲವನ್ನು ಕಂಡಿದ್ದು ಅಲ್ಲಿಂದಲೇ. ಮಾತ್ರವಲ್ಲ ನಾನು ಒಬ್ಬ ಕ್ಯಾಮೆರಾ ಮುಂದಿನ ಪಾತ್ರವಾಗಿ ಮತ್ತು ಒಬ್ಬ ಕಲಾವಿದನಾಗಿ ನಿರ್ದೇಶಕ ಯಶವಂತ ಅವರಿಂದ ಬಹಳಷ್ಟು ಕಲಿತುಕೊಂಡೆ. ಹಾಗಾಗಿ ಅವರನ್ನು ನನ್ನ ಗುರು ಎಂದೇ ಹೇಳುತ್ತೇನೆ. ಪ್ರಸ್ತುತ `ಕನ್ನಡತಿ' ಧಾರಾವಾಹಿಯಲ್ಲಿಯೂ ಅವರದೇ ನಿರ್ದೇಶನದಲ್ಲಿ ಒಂದೊಳ್ಳೆಯ ಪಾತ್ರ ದೊರಕಿದೆ. `ಸ್ಪಾನರ್ ಶಿವ' ಎನ್ನುವ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರು ನನ್ನನ್ನು ಗುರುತಿಸುತ್ತಿದ್ದಾರೆ. ಅದಕ್ಕೆ ಖುಷಿಯಿದೆ.  

 

click me!