ಥಿಯೇಟರ್‌ ತೆರೆದ ಮೇಲೆ ರಿಲೀಸ್‌ ಆಗುತ್ತಿರುವ ಮೊದಲ ಸಿನಿಮಾ 'ಕಲಿವೀರ'

By Kannadaprabha NewsFirst Published Aug 6, 2021, 12:55 PM IST
Highlights

ಲಾಕ್‌ಡೌನ್‌ ನಂತರ ಚಿತ್ರಮಂದಿರಗಳಲ್ಲಿ ಇಂದು(ಆ.6) ‘ಕಲಿವೀರ’ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಮೂಲಕ ಏಕಲವ್ಯ ಚಿತ್ರದ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಅವರ ಜೊತೆ ಮಾತುಕತೆ.

ಆರ್‌. ಕೇಶವಮೂರ್ತಿ

1. ನಿಮ್ಮ ಹಿನ್ನೆಲೆ ಏನು?

ನಾನು ಅನಾಥ. ಹುಟ್ಟುವಾಗಲೇ ತಾಯಿ ತೀರಿಕೊಂಡರು. ಅನಾಥಾಶ್ರಮದಲ್ಲೇ ಬೆಳೆದೆ. ಊರು ರಾಣೆಬೆನ್ನೂರು. ಹೊಟ್ಟೆಪಾಡಿಗಾಗಿ ಎರಡು ವರ್ಷ ಆಟೋ, ಟ್ಯಾಕ್ಸಿ ಚಾಲಕನಾಗಿದ್ದೆ.

2. ಚಿತ್ರದಲ್ಲಿ ನೀವು ಮಾಡಿರೋ ಸಾಹಸಗಳು ನಿಜ ಜೀವನದಲ್ಲೂ ಕಲಿತಿದ್ದು ಹೇಗೆ?

ಹಸಿವು ಮತ್ತು ಕಷ್ಟಎಲ್ಲವನ್ನೂ ಕಲಿಸುತ್ತದೆ ಮತ್ತು ಕಲಿಯಕ್ಕೆ ಪ್ರೇರಣೆ ಆಗುತ್ತದೆ ಎನ್ನುವ ಮಾತು ನನ್ನ ಜೀವನದಲ್ಲೂ ನಿಜ ಆಗಿದೆ. ಏನಾದರೂ ಕಲಿಯಬೇಕು ಎಂದಾಗ ಯೋಗ ಪಟುವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡೆ. ಎರಡು ವರ್ಷ ಕಳರಿಪಯಟ್ಟು ಕಲಿತೆ. ಕರಾಟೆಯಲ್ಲಿ ಬ್ಲಾಕ್‌ ಬೆಲ್ಟ್‌ ತೆಗೆದುಕೊಂಡಿದ್ದೇನೆ. ಜಿಮ್ನಾಸ್ಟಿಕ್‌ ಅಭ್ಯಾಸ ಮಾಡಿದ್ದೇನೆ. ನನ್ನ ದುಡಿಮೆಯಲ್ಲಿ ಇದೆಲ್ಲವನ್ನೂ ಕಲಿಯುತ್ತ ಬಂದೆ.

ಇನ್ನೂ ಕಾದು ಕುಳಿತರೆ ತುಂಬಾ ಚಿತ್ರಗಳು ತೆರೆಗೆ ಬರುತ್ತವೆ. ಆಗ ಮತ್ತೆ ಎಂದಿನಂತೆ ಚಿತ್ರಮಂದಿರಗಳ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಇದೇ ಸರಿಯಾದ ಸಮಯ ಎಂದುಕೊಂಡು ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ. ಆ.6ರಿಂದ ಚಿತ್ರಮಂದಿರಗಳ ಮುಂದೆ ಪ್ರೇಕ್ಷಕರ ಸಂಭ್ರಮ ಮನೆ ಮಾಡುತ್ತದೆಂಬ ನಂಬಿಕೆ ಇದೆ. - ಏಕಲವ್ಯ, ನಟ

3. ಸಿನಿಮಾ ನಟರಾಗಬೇಕು ಅನಿಸಿದ್ದು ಯಾಕೆ?

ಒಮ್ಮೆ ನನ್ನ ತಾಯಿ ಮತ್ತು ಅವರ ಸ್ನೇಹಿತೆ ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದಾಗ ‘ನನ್ನ ಮಗನನ್ನು ಈ ರೀತಿ ಸ್ಕ್ರೀನ್‌ನಲ್ಲಿ ಯಾವಾಗ ನೋಡೋದು’ ಎಂದು ಆಸೆ ವ್ಯಕ್ತಪಡಿಸಿದ್ದು ದೊಡ್ಡವನಾದ ಮೇಲೆ ನನ್ನ ತಾಯಿ ಸ್ನೇಹಿತೆ ಮೂಲಕ ಗೊತ್ತಾಯಿತು. ಅಮ್ಮನ ಆಸೆ ಈಡೇರಿಸಬೇಕೆಂದು ಚಿತ್ರರಂಗಕ್ಕೆ ಬಂದೆ. ಸಿನಿಮಾ ಬಿಡುಗಡೆ ದಿನ ಎರಡು ಟಿಕೆಟ್‌ ತೆಗೆದುಕೊಳ್ಳುತ್ತೇನೆ. ನನ್ನ ಪಕ್ಕದ ಸೀಟು ಖಾಲಿ ಬಿಟ್ಟು ಕೂರುತ್ತೇನೆ. ಅಲ್ಲಿ ನನ್ನ ತಾಯಿ ಕೂತಿರುತ್ತಾರೆ. ನನ್ನ ಜತೆ ಅವರು ಸಿನಿಮಾ ನೋಡುತ್ತಾರೆ.

ಕಲಿವೀರ'ನಾಗಿ ಕನ್ನಡ ಚಿತ್ರರಂಗಕ್ಕೆ ಏಕಲವ್ಯ ಎಂಟ್ರಿ!Exclusive ಸಂದರ್ಶನ

4. ನಟನಾಗಲು ಏನೆಲ್ಲ ತಯಾರಿ ಮಾಡಿಕೊಂಡ್ರಿ?

ಮೈಸೂರಿನ ರಂಗಾಯಣ ಹಾಗೂ ಹೆಗ್ಗೋಡಿನ ನೀನಾಸಂನಲ್ಲಿ ಅಭಿನಯ ತÃಬೇತಿ ಮಾಡಿಕೊಡೆ. ಡ್ಯಾನ್ಸ್‌ ಕಲಿತೆ. ನನ್ನದೇ ಒಂದು ಆಲ್ಬಂ ಮಾಡಿಕೊಂಡು ಅವಕಾಶಗಳಿಗಾಗಿ ಅಲೆದೆ. ನೂರೆಂಟು ಆಡಿಷನ್‌ ಕೊಟ್ಟಿದ್ದೇನೆ. ಸುಮಾರು ಚಿತ್ರಗಳಲ್ಲಿ ಜೂನಿಯರ್‌ ಆರ್ಟಿಸ್ಟ್‌ ಆಗಿ ಕೆಲಸ ಮಾಡಿದ್ದೇನೆ.

5. ಹೀರೋ ಆಗಿದ್ದು ಹೇಗೆ?

ನನ್ನ ಅಲೆದಾಟ ನೋಡಿದ ನಮ್ಮೂರಿನ ಹಿರಿಯರು ನೀನು ಏನಾಗಬೇಕು ಎಂದುಕೊಂಡಿದ್ದೀಯ ಅಂತ ಕೇಳಿದರು. ನನಗೆ ಗೊತ್ತಿದ್ದ ಕಲೆ, ಕಿರುಚಿತ್ರ ಅವರ ಮುಂದೆ ಪ್ರದರ್ಶಿಸಿದೆ. ನನಗಾಗಿ ಚಿತ್ರ ನಿರ್ಮಾಣ ಮಾಡಲು ಕೆಎಂಪಿ ಶ್ರೀನಿವಾಸ್‌ ಮುಂದೆ ಬಂದರು. ‘ಕನ್ನಡ ದೇಶದೊಳ್‌’ ಚಿತ್ರದಲ್ಲಿ ಅವಕಾಶ ಕೇಳಿಕೊಂಡು ಹೋದಾಗ ಪರಿಚಯ ಆದ ಅವಿ ಅವರಿಗೆ ನಿರ್ಮಾಪಕರನ್ನು ಪರಿಚಯ ಮಾಡಿಸಿದೆ. ಹೀಗೆ ‘ಕಲಿವೀರ’ ಚಿತ್ರ ಶುರುವಾಯಿತು. ನಾನು ಹೀರೋ ಆದೆ.

ಆಗಸ್ಟ್ 6ರಂದು ತೆರೆಗಪ್ಪಳಿಸಲಿದ್ದಾನೆ ಕಲಿವೀರ

6. ಕಲಿವೀರ ಚಿತ್ರದ ಕತೆ ಏನು?

ಒಂದು ಬುಡಕಟ್ಟು ಜನಾಂಗದ ಕತೆ. ತಮಗೆ ಅನ್ಯಾಯ ಆಗುತ್ತಿರುವುದರ ವಿರುದ್ಧ ಹೇಗೆ ಹೋರಾಟ ಮಾಡಿ ಗೆಲ್ಲುತ್ತಾರೆ ಎಂಬುದನ್ನು ಹೇಳುವ ಸಿನಿಮಾ. ನಾಯಕನ ಹೆಸರು ಕಲಿ. ಅವನು ತನ್ನ ಜನಾಂಗದ ಪರವಾಗಿ ನಿಂತು ಹೋರಾಟ ಮಾಡುವ ಹಾದಿಯಲ್ಲಿ ವೀರನಾಗುವ ಪಾತ್ರ ನನ್ನದು.

 

 

click me!