ಪಾತ್ರಗಳೇ ಪದಾರ್ಥಗಳಾಗುವ ಸಿನಿಮಾ ಭೀಮಸೇನ; ಕಾರ್ತಿಕ ಸರಗೂರು ಸಂದರ್ಶನ!

Kannadaprabha News   | Asianet News
Published : Oct 30, 2020, 09:15 AM ISTUpdated : Oct 30, 2020, 09:45 AM IST
ಪಾತ್ರಗಳೇ ಪದಾರ್ಥಗಳಾಗುವ ಸಿನಿಮಾ ಭೀಮಸೇನ; ಕಾರ್ತಿಕ ಸರಗೂರು ಸಂದರ್ಶನ!

ಸಾರಾಂಶ

ಭೀಮಸೇನ ನಳಮಹಾರಾಜ ಸಿನಿಮಾ ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿದೆ. ಪುಷ್ಕರ್‌ ಮಲ್ಲಿಕಾರ್ಜುನಯ್ಯ, ರಕ್ಷಿತ್‌ ಶೆಟ್ಟಿ, ಹೇಮಂತ್‌ ರಾವ್‌ ನಿರ್ಮಾಣದ ಈ ಸಿನಿಮಾದ ನಿರ್ದೇಶಕನ ಜತೆ ಮಾತುಕತೆ.

ಪ್ರಿಯಾ ಕೆರ್ವಾಶೆ

ಸಿನಿಮಾಕ್ಕೆ ರೆಸ್ಪಾನ್ಸ್‌ ಈಗಾಗ್ಲೇ ಗೊತ್ತಾಗಿರಬೇಕಲ್ವಾ?

ನಾನೇನೇ ಹೇಳಿದ್ರೂ ಕ್ಲೀಷೆಯಾಗುತ್ತೆ. ಆದರೂ ನೋಡಿದವ್ರೆಲ್ಲ ತುಂಬಾ ಚೆನ್ನಾಗಿದೆ ಅಂದಿದ್ದಾರೆ. ಸೋಷಿಯಲ್‌ ಮೀಡಿಯಾ ಇದ್ದದ್ದನ್ನು ಇದ್ದ ಹಾಗೇ ಹೇಳುತ್ತೆ. ಯಾರನ್ನೂ ಪ್ಲೀಸ್‌ ಮಾಡಲ್ಲ. ಅವ್ರು ಚೆನ್ನಾಗಿದೆ ಅಂತಿದ್ದಾರೆ ಅಂದಾಗ ಸಹಜವಾಗಿಯೇ ಧೈರ್ಯ ಬರುತ್ತೆ. ಏಕೆಂದರೆ ಅವರು ಬರೀ ಪ್ರೇಕ್ಷಕರಲ್ಲ, ಅವರು ವಿಮರ್ಶಕರೂ ಹೌದು.

ಸಿಕ್ಕಾಪಟ್ಟೆ ಬೋಲ್ಡ್‌ ಹುಡುಗಿ; ನಟಿ ಆರೋಹಿ 'ವೇದವಲ್ಲಿ' ಆಗಿದ್ದು ಹೇಗೆ? 

ನಿಮ್ಮ ಟ್ರೇಲರ್‌ ಸಾಕಷ್ಟುನಿರೀಕ್ಷೆ ಹುಟ್ಟಿಸಿತ್ತು. ಅದನ್ನು ನೋಡಿ ಸಿನಿಮಾದ ಬಗ್ಗೆ ನಿರೀಕ್ಷೆ ಇನ್ನಷ್ಟುಬೆಳೆಯಿತು. ಇದು ಪಾಸಿಟಿವ್‌ ಆಯ್ತಾ?

ಎರಡು ನಿಮಿಷದ ಟ್ರೇಲರ್‌ ಹುಟ್ಟಿಸಿದ ನಿರೀಕ್ಷೆಯನ್ನು ಎರಡು ಗಂಟೆಯ ಸಿನಿಮಾ ಪೂರೈಸೋದು ದೊಡ್ಡ ಚಾಲೆಂಜ್‌ ಆಗಿತ್ತು. ಜೊತೆಗೆ ಟ್ರೇಲರ್‌ ರಿಲೀಸ್‌ ಮಾಡಿದಾಗ ಬಹಳ ಜನ ನೀವು ಪೂರ್ತಿ ಸಿನಿಮಾ ಕತೆ ಹೇಳ್ಬಿಟ್ಟಿದ್ದೀರಾ ಅಂದ್ರು. ಆದರೆ ಈಗ ಅವರೇ ಹೇಳ್ತಿದ್ದಾರೆ. ಸಿನಿಮಾ ಕತೆ ಭಿನ್ನವಾಗಿದೆ ಅಂತ. ಇದು ನಮಗೂ ಜನಕ್ಕೂ ಪ್ಲೆಸೆಂಟ್‌ ಸರ್ಪೈಸ್‌.

ಓಟಿಟಿಯಲ್ಲೇ ಸಿನಿಮಾ ರಿಲೀಸ್‌ ಮಾಡಿದ ಅನುಭವ ಹೇಗಿತ್ತು?

ಥಿಯೇಟರ್‌ನಲ್ಲಿ ಸಿನಿಮಾ ನೋಡುವ ಸಂಭ್ರಮ ಕಾತರ ಓಟಿಟಿಯಲ್ಲಿ ನಿರೀಕ್ಷೆ ಮಾಡಲಾಗದು. ಓಟಿಟಿ ಪ್ರೇಕ್ಷಕರಿಗೆ ಯಾವುದೇ ಬಂಧನವಿಲ್ಲ. ಆದರೂ ತಮ್ಮ ನಿತ್ಯದ ಅಷ್ಟೂಡೈವರ್ಶನ್‌ಗಳ ನಡುವೆಯೂ ಜನ ನಮ್ಮ ಸಿನಿಮಾ ನೋಡ್ತಾರೆ ಅಂದ್ರೆ ಅದಕ್ಕೆ ನಮ್ಮ ಕತೆಯೂ ಒಂದು ಕಾರಣ. ಮೊದಲು ಬಿಗ್‌ ಸ್ಕ್ರೀನ್‌ ಇತ್ತು, ನಂತರ ಕಿರು ತೆರೆ ಬಂತು, ಈಗ ಅಲ್ಟಾ್ರ ಸ್ಮಾಲ್‌ ಸ್ಕ್ರೀನ್‌ ಅರ್ಥಾತ್‌ ಓಟಿಟಿ ಬಂದಿದೆ. ಇದು ಭಿನ್ನತೆ, ಹೊಸತರ ಸಮ್ಮಿಶ್ರಣ.

ಜನ ನಿಮ್ಮ ಸಿನಿಮಾ ನೋಡಲು ಐದು ಕಾರಣ

1. ಅಡುಗೆ ಬಗೆಗಿನ ಸಿನಿಮಾ. ದಿನದ ಮೂರೂ ಹೊತ್ತೂ ನಾವು ತಪ್ಪದೇ ಮಾಡೋ ಕಾರ್ಯ ಊಟ ಮಾಡೋದು. ಹಾಗಾಗಿ ಅಡುಗೆ ನಮ್ಮೆಲ್ಲರನ್ನೂ ಕೂಡಿಸುವ ದೊಡ್ಡ ಬಂಧ. ಇಲ್ಲಿ ಅಡುಗೆಯನ್ನು ಅಡುಗೆಯಾಗಿಯೇ ಪ್ರೆಸೆಂಟ್‌ ಮಾಡಿದ್ದೀವಿ.

'ಭೀಮಸೇನ ನಳಮಹಾರಾಜ' ನಾಗಿ ಬರ್ತಿದ್ದಾರೆ ಅರವಿಂದ್ ಅಯ್ಯರ್; ಕುಕ್ಕಿಂಗ್ ಗೊತ್ತಾ ಇವರಿಗೆ?

2. ಅಡುಗೆ ಮಾಡುವ ಪ್ರಕ್ರಿಯೆ ಗಮನಿಸಿ, ತುರಿಯೋದು, ಹೆಚ್ಚೋದು, ಕೊಚ್ಚೋದು, ತರಿಯೋದು, ಹುರಿಯೋದು, ಬೇಯಿಸೋದು.. ಈ ಸಿನಿಮಾ ಅಡುಗೆ ತೋರಿಸ್ತಾ ತೋರಿಸ್ತಾ ಪಾತ್ರಗಳು ತಾವೇ ಆ ಪದಾರ್ಥಗಳಾಗುತ್ತಾ ಹೋಗುತ್ತವೆ. ಕೊಚ್ಚುತ್ತವೆ, ನೀರಲ್ಲಿ ಮುಳುತ್ತವೆ, ಮತ್ತೆಲ್ಲೋ ಬೇಯುತ್ತವೆ..

3. ಇದು ಶೇ.100 ಕನ್ನಡ ಸಿನಿಮಾ. ಇಲ್ಲಿ ದೇಸಿ ಸೊಗಡಿನ ಭಾಷೆ, ಸಂಗೀತ, ಪರಿಸರವಿದೆ. ಕರ್ನಾಟಕದ ಮಣ್ಣಿನ ಗುಣ ಘಮವಿದೆ.

4. ಕರ್ನಾಟಕಕ್ಕೇ ವಿಶಿಷ್ಟವಾದ ಆಹಾರ ಮತ್ತು ಆಹಾರ ಪರಂಪರೆ ತೋರಿಸೋ ಪ್ರಯತ್ನವಿದು.

5. ಎಲ್ಲವೂ ಪರ್ಸನಲ್‌ ಆಗಿರುವ ಇಂದಿನ ದಿನಗಳಲ್ಲಿ, ಕುಟುಂಬವಿಡೀ ಜೊತೆಗಿರುವ ಕ್ಷಣಗಳು ಕಡಿಮೆ. ಇದು ಇಡೀ ಸಂಸಾರವನ್ನೇ ಸ್ಕ್ರೀನ್‌ ಎದುರು ಕೂರಿಸುವ ಸಿನಿಮಾ. ಎಪ್ಪತ್ತರ ಹಿರಿಯರೂ ಎನ್‌ಜಾಯ್‌ ಮಾಡಬಹುದು, ಐದು ವರ್ಷದ ಮಗುವೂ ನೋಡಬಹುದು.

ಬೆಂದ್ರೆ ಬೇಂದ್ರೆ ಆಗ್ತಾರೆ; 'ಭೀಮಸೇನ ನಳಮಹಾರಾಜ'ನ ಹಿಂದೆ ನಿಂತ ನಿರ್ದೇಶಕ ಹೇಮಂತ್! 

ಅಂಥಾ ಕತೆ ಏನಿದೆ?

ಒಂದು ಕುಟುಂಬದಲ್ಲಿ ಹೇಗೆ ಬೇರೆ ಬೇರೆ ವ್ಯಕ್ತಿತ್ವ ಇರುವ ಜನರಿರುತ್ತಾರೋ, ಅದೇ ರೀತಿ ಅಡುಗೆಗೆ ಉಪ್ಪು, ಹುಳಿ, ಖಾರ, ಸಿಹಿ, ಒಗರು ಎಲ್ಲಾ ರಸಗಳು ಸೇರಿದರೇ ಅದು ರುಚಿಕಟ್ಟಾಗುತ್ತದೆ. ಹಾಗೇನೇ ಒಂದು ಕುಟುಂಬದಲ್ಲಿ ಬೇರೆ ಬೇರೆ ವಯಸ್ಸಿನ, ಬೌದ್ಧಿಕತೆಯ ವ್ಯಕ್ತಿತ್ವದವರಿರುತ್ತಾರೆ. ಎಲ್ಲರೂ ಕೊಡು ಕೊಳ್ಳುವಿಕೆಯ ಮೂಲಕ ಒಟ್ಟಾಗಿದ್ದರೇ ಕುಟುಂಬಕ್ಕೆ ಸೊಗಸು. ಆ ತತ್ವ ಅಡುಗೆಯ ಮೂಲಕ ಸಂಸಾರಕ್ಕೆ ಅನ್ವಯವಾಗುವಂಥಾದ್ದು. ಆ ತತ್ವವನ್ನು ಸಿನಿಮಾ ಎತ್ತಿಹಿಡಿಯುತ್ತದೆ.

ತಡ ಆಗಲಿಕ್ಕೆ ಏನು ಕಾರಣ?

ಹಲವಾರು ಕಾರಣ. ಆದರೂ ಲೇಟಾಯ್ತು ಅನ್ನೋದು ವಾಸ್ತವ. ಅಡುಗೆಯನ್ನು ಸಿಕ್ಕಾಪಟ್ಟೆಉರಿಯಲ್ಲೂ ಮಾಡಬಹುದು, ಸಣ್ಣ ಉರಿಯಲ್ಲೂ ಮಾಡಬಹುದು. ನನ್ನ ಹೆಂಡ್ತಿ ಹೇಳ್ತಿರುತ್ತಾಳೆ, ಸಣ್ಣ ಉರಿಯಲ್ಲಿ ಮಾಡಿದ ಅನ್ನ ಹೆಚ್ಚು ಒದಗುತ್ತೆ ಅಂತ. ಹಾಗೇ ನಮ್ಮ ಸಿನಿಮಾ ಒದಗಿದೆ ಅಂತ ಹೇಳಲಿಕ್ಕೆ ಇಷ್ಟಪಡ್ತೀನಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು