ಕತೆನೇ ಹೀರೋ, ನಾವೆಲ್ಲ ಪ್ರೇಕ್ಷಕರು: 'ಪರಂವಃ' ನಿರ್ದೇಶಕ ಸಂತೋಷ್ ಕೈದಾಳ

By Kannadaprabha NewsFirst Published Jul 21, 2023, 9:33 AM IST
Highlights

ಸಂತೋಷ್ ಕೈದಾಳ ನಿರ್ದೇಶನದ ಪರಂವಃ ಚಿತ್ರ ಇಂದು (ಜು.21) ತೆರೆಗೆ ಬರುತ್ತಿದೆ. ಪ್ರೇಮ್ ಸಿಡ್ಗಲ್ ಹಾಗೂ ಮೈತ್ರಿ ಜೆ ಕಶ್ಯಪ್ ಜೋಡಿ ನಟನೆಯ ಈ ಸಿನಿಮಾದ ನಿರ್ದೇಶಕ ಸಂತೋಷ್ ಕೈದಾಳ ಜೊತೆ ಮಾತುಕತೆ

ಆರ್.ಕೇಶವಮೂರ್ತಿ

ಈ ಚಿತ್ರದ ಕತೆ ಏನು?

ಹಳ್ಳಿಯ ಹಿನ್ನೆಲೆಯಿಂದ ಬಂದ ವೀರಗಾಸೆ ಕುಟುಂಬದ ಹುಡುಗನ ಜೀವನದಲ್ಲಿ ಏನೆಲ್ಲ ಆಗುತ್ತದೆ ಎಂಬುದು ಕತೆ. ಇಲ್ಲಿ ಕೇವಲ ವೀರಗಾಸೆ ಮಾತ್ರ ಇಲ್ಲ, ಬೇರೆ ರೀತಿಯ ಕ್ರೈಮ್ ಜಗತ್ತು ಕೂಡ ಇದೆ. ಜತೆಗೆ ಒಂದು ಪ್ರೇಮ ಕತೆಯೂ ಸಾಗುತ್ತದೆ.

ಇಂಥ ಕತೆಗೆ ಪರಂವಃ ಎನ್ನುವ ಶೀರ್ಷಿಕೆ ಯಾಕೆ?

ಚಿತ್ರದ ಮುಖ್ಯ ಥೀಮ್‌ ವೀರಗಾಸೆ. ಶಿವನಿಗೆ ಆಪ್ತವಾದ ಕಲೆಯ ಪ್ರಕಾರ. ವೀರಗಾಸೆ ಕಲಾವಿದನಾಗಬೇಕು ಎಂದುಕೊಳ್ಳುವ ಹುಡುಗ ಚಿತ್ರದ ಹೀರೋ. ಶಿವನ ಡಮರುಗಕ್ಕೆ ಪರಂವಃ ಅಂತಾರೆ. ಅದೇ ಹೆಸರು ಸೂಕ್ತ ಅನಿಸಿ ಇಟ್ಟಿದ್ದೇವೆ.

ಪವರ್‌ಫುಲ್‌ ಟೈಟಲ್‌ ಹಾಗೂ ಕತೆಯನ್ನು ಹೊಸಬರ ಜತೆ ಮಾಡಿದ್ದೀರಲ್ಲ?

ನಮ್ಮ ಚಿತ್ರದಲ್ಲಿ ಸ್ಟಾರ್ ನಟರು ಇಲ್ಲ ಎನ್ನುವ ಕೊರಗು ಇಲ್ಲ. ಯಾಕೆಂದರೆ ಇಲ್ಲಿ ಕತೆಯೇ ಹೀರೋ. ಚಿತ್ರದ ನಾಯಕ ಪ್ರೇಮ್ ಸೇರಿದಂತೆ ಬಹುತೇಕರು ಹೊಸಬರೇ ಆದರೂ ಕತೆಗೆ, ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇಂಥ ಕಂಟೆಂಟ್ ಅನ್ನು ನಂಬಿ 200 ಜನ ನಿರ್ಮಾಪಕರು ಹಣ ಹಾಕಿದ್ದಾರೆ. ಅವರೆಲ್ಲರೂ ಈ ಚಿತ್ರದ ತಾರೆಗಳೇ.

ರಮ್ಯಾ ಲೇಡಿ ಸೂಪರ್‌ಸ್ಟಾರ್, ಅವರ ಮೇಲೆ ಬೇಜಾರಿಲ್ಲ: 'ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ' ನಿರ್ದೇಶಕ ನಿತಿನ್

ಯಾವುದೇ ಹಿನ್ನೆಲೆ ಇಲ್ಲ, ಆರ್ಥಿಕ ಬಲ ಇಲ್ಲ. ಆದರೂ ಸಿನಿಮಾ ಮಾಡುವ ಧೈರ್ಯ ಬಂದಿದ್ದು ಹೇಗೆ?

ಹೊಸಬರು, ಹಳಬರು, ಸ್ಟಾರ್ ನಟರು ಇತ್ಯಾದಿ ಯಾವ ಭೇದವೂ ಮಾಡದೆ ಒಳ್ಳೆಯ ಸಿನಿಮಾ ನೋಡಿ ಗೆಲ್ಲಿಸುವ ಪ್ರೇಕ್ಷಕರೇ ನಮ್ಮಂಥ ಚಿತ್ರಗಳ ಬಲ. ಅವರ ಮೇಲೆ ನಂಬಿಕೆ ಇಟ್ಟು ಚಿತ್ರ ರೂಪಿಸಿದ್ದೇವೆ.

ಒಳ್ಳೆ ಗಂಡನಾಗ್ತೀನಿ, ಆದರೆ ಸಿನಿಮಾ ವಿಚಾರಕ್ಕೆ ತಲೆ ಹಾಕಬಾರದು; ಭಾವಿ ಪತ್ನಿಗೆ ಪ್ರಥಮ್ ರಿಕ್ವೆಸ್ಟ್!

ಈ ಚಿತ್ರದ ಹಾಡು, ಟೀಸರ್ ತುಂಬಾ ಮಂದಿ ಸ್ಟಾರ್ ನಟರಿಗೆ ತೋರಿಸಿದ್ದೀರಲ್ಲ?

ಅಶ್ವಿನಿ ಪುನೀತ್‌ರಾಜ್‌ಕುಮಾರ್‌, ಧ್ರುವ ಸರ್ಜಾ, ದುನಿಯಾ ವಿಜಯ್, ಪ್ರೇಮ್, ಪ್ರಜ್ವಲ್‌ ದೇವರಾಜ್‌, ಅಭಿಷೇಕ್‌ ಅಂಬರೀಶ್, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಚಿತ್ರಕ್ಕೆ ಬೆಂಬಲ ಸೂಚಿಸಿದರು. ಕತೆ ಕೇಳಿ ಮೆಚ್ಚಿಕೊಂಡರು. ಹಾಡುಗಳಿಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಇದೆಲ್ಲ ನಮ್ಮ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ಸಹಾಯ ಆಗಲಿದೆ ಎನ್ನುವ ನಂಬಿಕೆ ಇದೆ. ಮೊದಲ ವಾರದಲ್ಲೇ ಬಂದು ಸಿನಿಮಾ ನೋಡಿ ಎಂದು ಪ್ರೇಕ್ಷಕರಲ್ಲಿ ಮನವಿ ಮಾಡುತ್ತಿದ್ದೇವೆ.

click me!