ಖೈದಿಗಳನ್ನು ಬಿಡುಗಡೆ ಮಾಡಿಸಿದ್ದು ಪ್ರಚಾರಕ್ಕೆ ಅಲ್ಲ: ದುನಿಯಾ ವಿಜಯ್

By Kannadaprabha NewsFirst Published Jan 23, 2024, 9:23 AM IST
Highlights

ನಟ, ನಿರ್ದೇಶಕ ದುನಿಯಾ ವಿಜಯ್ ಅವರು ಈಗಷ್ಟೇ ತಮ್ಮ 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬಿಡುಗಡೆಗೆ ಸಜ್ಜಾಗಿರುವ ಅವರ ಭೀಮ ಚಿತ್ರದ ಟೀಸರ್ ಕೂಡ ಬಿಡುಗಡೆಯೂ ಆಗಿದೆ. ಈ ಹಿನ್ನಲೆಯಲ್ಲಿ ಅವರ ಮಾತುಗಳು. 

ಆರ್ ಕೇಶವಮೂರ್ತಿ

ಹುಟ್ಟುಹಬ್ಬ ಸಂಭ್ರಮದಿಂದ ನಿಮಗೆ ದಕ್ಕುವುದೇನು? 

ನನ್ನ ಹುಟ್ಟೂರಾದ ಆನೇಕಲ್‌ ಬಳಿಯ ಕುಂಬಾರನಹಳ್ಳಿಯಲ್ಲಿರುವ ‘ದುನಿಯಾ ರುಣ’ ಹೆಸರಿನ ತೋಟದಲ್ಲಿ ಅಭಿಮಾನಿಗಳ ಜತೆ ಸಮಯ ಕಳೆಯುವುದು. ಅವರಿಗಾಗಿ ಅಡುಗೆ ಮಾಡಿ ಬಡಿಸುವುದು, ನನಗೆ ಅವರು ಪ್ರೀತಿಯಿಂದ ಕೈ ತುತ್ತು ತಿನಿಸುವುದು. ಇದು ಪ್ರತಿ ವರ್ಷ ನನ್ನ ಹುಟ್ಟುಹಬ್ಬ ನನಗೆ ಉಳಿಸುವ ನೆನಪುಗಳು. \B\B

50 ವರ್ಷ ಆಗಿದೆ. ಬದುಕಿನಲ್ಲಿ ಫಿಫ್ಟಿ ಎಂಬುದು ಮಹತ್ವ ಅಲ್ಲವೇ? 

ಆ ಸಂಖ್ಯೆಯನ್ನು ನಾನು ತಲೆಗೆ ಹಾಕಿಕೊಂಡಿಲ್ಲ. ವಯಸ್ಸಿನ ಜತೆಗೆ ಆಲೋಚನೆಗಳು, ನಾವು ಮಾಡುವ ಕೆಲಸಗಳಲ್ಲಿ ಮತ್ತಷ್ಟು ಸ್ಪಷ್ಟತೆ, ನಿಖರತೆ ಕಾಣುತ್ತಿರುತ್ತೇವಂತೆ. ಹೀಗಾಗಿ 50ರ ನಂತರ ಇನ್ನಷ್ಟು ಜವಾಬ್ದಾರಿಯಿಂದ ಹೆಜ್ಜೆ ಹಾಕಬೇಕು, ಒಳ್ಳೆಯ ಚಿತ್ರಗಳನ್ನು ಮಾಡಬೇಕು, ಅಭಿಮಾನಿಗಳ ಜತೆ ಖುಷಿಯಿಂದ ಕಳೆಯಬೇಕು, ಸಿನಿಮಾ ಆಚೆಗೂ ನನ್ನಿಂದ ಆಗುವ ಒಳ್ಳೆಯ ಕೆಲಸಗಳನ್ನು ಮಾಡಬೇಕು. 

ರಗಡ್‌ ಲುಕ್‌ಗೆ ಹೆದರಿಕೊಳ್ತಾರೆ ಆದ್ರೆ ನೀವು ಎಮೋಷನಲ್‌ ವ್ಯಕ್ತಿ; ದುನಿಯಾ ವಿಜಯ್‌ 50ನೇ ಹುಟ್ಟುಹಬ್ಬಕ್ಕೆ ಮಗಳ ಪೋಸ್ಟ್‌

ಪರಪ್ಪನ ಅಗ್ರಹಾರ ಜೈಲಿನಿಂದ ಖೈದಿಗಳನ್ನು ಬಿಡುಗಡೆ ಮಾಡಿಸಿದ್ದು ಸಿನಿಮಾ ಪ್ರಚಾರಕ್ಕಾ? 

ಖಂಡಿತ ಅಲ್ಲ. ನನ್ನ ಮನಸ್ಸಿಗೆ ಖುಷಿ ಕೊಡುವ ಜತೆಗೆ ನನ್ನ ಕರ್ತವ್ಯ ಎಂದು ಮಾಡುವ ಕೆಲಸಗಳಿಂದ ನಾನು ಸಿನಿಮಾ ಪ್ರಚಾರ ಬಯಸಲಾರೆ. ಬಂಧನದಲ್ಲಿರುವ ಕೆಲವರ ಜೀವನದಲ್ಲಾದರೂ ಬೆಳಕು ಕಾಣಲಿ ಅನಿಸಿ ಈ ಕೆಲಸ ಮಾಡಿದೆ.

ಭೀಮ ಸಿನಿಮಾ ಎಲ್ಲಿವರೆಗೂ ಬಂದಿದೆ? 

ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌ ಕೂಡ ಮುಗಿದೆ. ಟೀಸರ್ ಬಂದಿದೆ. ನೋಡಿದವರು ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುತ್ತೇವೆ. ಚಿತ್ರದ ನಿರ್ಮಾಕರಾದ ಕೃಷ್ಣ ಸಾರ್ಥಕ್ ಹಾಗೂ ಜಗದೀಶ್ ಗೌಡ ಅವರು ಖುಷಿ ಆಗಿದ್ದಾರೆ. 

ಎರಡನೇ ಬಾರಿಗೆ ನಿರ್ದೇಶಕರಾಗಿ ನೀವು ಕಂಡಿದ್ದೇನು? 

ತಾಂತ್ರಿಕವಾಗಿ ಅಪ್‌ಡೇಟ್‌ ಆಗಿದ್ದೇನೆ. ಕಲಿಕೆ ನಿರಂತರ. ಆ ನಿಟ್ಟಿನಲ್ಲಿ ಹೇಳುವುದಾದರೆ ಸಲಗ ಸಿನಿಮಾಗಿಂತ ಭೀಮ ಚಿತ್ರದಲ್ಲಿ ಅಪ್‌ಡೇಟ್‌ ನಿರ್ದೇಶಕನನ್ನು ನೀವು ನೋಡಬಹುದು.

ಭೀಮ ಯಾವ ರೀತಿಯ ಸಿನಿಮಾ? 

ಮಕ್ಕಳು ಹೇಗೆ ಹೆತ್ತವರನ್ನು ಯಾಮಾರಿಸುತ್ತಿದ್ದಾರೆ, ಅವರ ಬದುಕು ಎಂಥ ದಾರಿಯಲ್ಲಿದೆ ಎಂದು ಹೇಳುತ್ತಲೇ ಎಚ್ಚರಿಕೆಯ ಗಂಟೆಯಂತೆ ‘ಭೀಮ’ ಸಿನಿಮಾ ಮೂಡಿ ಬಂದಿದೆ.

ನಾನು ಪತಿಯೊಟ್ಟಿಗೇ ಇದ್ದೇನೆ ; ನೆಟ್ಟಿಗರ ಕಾಮೆಂಟ್‌ಗೆ ದುನಿಯಾ ವಿಜಯ್ ಪತ್ನಿ ಕೀರ್ತಿ ಸ್ಪಷ್ಟನೆ

ಪೊಲೀಸು, ಕ್ರೈಮು, ರಕ್ತನೇ ಹೆಚ್ಚಿದೆ ಅನಿಸುತ್ತದಲ್ಲ? 

ಸಿನಿಮಾ ನೋಡಿದ ಮೇಲೆ ನಿಮ್ಮ ಈ ಅಭಿಪ್ರಾಯ ಬದಲಾಗುತ್ತದೆ. ಇದು ಇವತ್ತಿನ ಯುವ ಸಮುದಾಯದ ಕತೆ. ಪೋಷಕರು ಮತ್ತು ಮಕ್ಕಳು ನೋಡಲೇಬೇಕಾದ ಚಿತ್ರವಿದು. ಡಾರ್ಕ್‌ ವೇನಲ್ಲಿ ಒಳ್ಳೆಯದನ್ನು ಹೇಳಿದ್ದೇವೆ. ಕತ್ತಲಲ್ಲಿ ಕಾಣುವ ಬೆಳಕಿನ ಕಿಂಡಿ ‘ಭೀಮ’.

ನಿಮ್ಮ ನಿರ್ದೇಶನದಲ್ಲಿ ಬೇರೆ ಹೀರೋಗಳ ಸಿನಿಮಾಗಳು ಬರಬಹುದಾ? 

ನಾನು ಬರೆಯುವ ಕತೆಗೆ ನಾನಲ್ಲದೆ ಬೇರೆ ಹೀರೋ ಅಗತ್ಯ ಇದ್ದಾಗ ಖಂಡಿತ ಅಂಥ ನಟರಿಗೆ ಕತೆ ಹೇಳಿ ಸಿನಿಮಾ ಮಾಡುತ್ತೇನೆ. \B\B

ಭೀಮ ನಂತರ ಯಾವ ಸಿನಿಮಾ? 

ಜಡೇಶ್ ಕೆ ಹಂಪಿ ಅವರ ಜತೆಗೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದರ ಜತೆಗೆ ನಿಖಿಲ್‌ ಕುಮಾರ್‌ ನಾಯಕನಾಗಿರುವ ಚಿತ್ರದಲ್ಲಿನ ನನ್ನ ಪಾತ್ರದ ಶೂಟಿಂಗ್ ಶುರುವಾಗಲಿದೆ. ಲೈಕಾ ಪ್ರೊಡಕ್ಷನ್‌ ನಿರ್ಮಾಣದ ಮತ್ತೊಂದು ಚಿತ್ರ ಸೆಟ್ಟೇರಲಿದೆ. 

ನೀನು ಯಾರಾದರೆ ನನಗೇನು? ಯೋಗ್ಯತೆ ಉಳಿಸಿಕೊಳ್ಳಬೇಕು; ಮಕ್ಕಳ ಬಗ್ಗೆ ದುನಿಯಾ ವಿಜಯ್

ನಿಮ್ಮ ಮಗಳು ಚಿತ್ರರಂಗಕ್ಕೆ ಬರುತ್ತಿದ್ದಾರಲ್ಲ?

ಹೌದು. ನನ್ನ ನಟನೆಯ ಚಿತ್ರದಿಂದಲೇ ನನ್ನ ಮಗಳು ಮೋನಿಕಾ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಮಕ್ಕಳ ಆಯ್ಕೆಯನ್ನು ಒಬ್ಬ ತಂದೆಯಾಗಿ ನಾನು ಗೌರವಿಸಬೇಕು. ಆದರೆ, ಅವರು ಆಯ್ದುಕೊಳ್ಳುವ ಕ್ಷೇತ್ರದಲ್ಲಿ ಅವರೇ ಕಷ್ಟಪಟ್ಟು, ಪ್ರತಿಭೆ ಮೂಲಕ ನಿಲ್ಲಬೇಕು.

click me!