ಹೊಸ ಲುಕ್‌ನಲ್ಲಿ ಕನ್ನಡ ಧಾರಾವಾಹಿ 'ಹೂ ಮಳೆ' ಶ್ರೀರಾಮ್..!

By Suvarna NewsFirst Published Mar 22, 2021, 12:28 PM IST
Highlights

ಹೂಮಳೆ ಧಾರಾವಾಹಿ ನೋಡಿದವರಿಗೆ ಉದಯ್ ಎಂದರೆ ಕಣ್ಣಮುಂದೆ ಬರುವ ರೂಪವೇ ಶ್ರೀರಾಮ್ ಅವರದ್ದು. ಅಂದರೆ ಶ್ರೀರಾಮ ಚಂದ್ರನಲ್ಲ. ಉದಯ್ ಪಾತ್ರವನ್ನು ನಿರ್ವಹಿಸುತ್ತಿರುವ ನಟ ಶ್ರೀರಾಮ್ ಅವರು ಸುವರ್ಣ ನ್ಯೂಸ್.ಕಾಮ್ ಜೊತೆಗೆ ತಮ್ಮ ವಿವರಗಳನ್ನು ಹಂಚಿಕೊಂಡಿದ್ದಾರೆ. 
 

ಹೆಸರು ಶ್ರೀರಾಮ್. ಕಲಿತಿದ್ದು ಇಂಜಿನಿಯರಿಂಗ್. ಕಲಾವಿದರಾಗಲು ಬೇಸಿಕ್ ಅರ್ಹತೆ ಇಂಜಿನಿಯರಿಂಗ್ ಪದವಿ ಎನ್ನುವುದು ಚಿತ್ರೋದ್ಯಮದ ಜನಪ್ರಿಯ ಜೋಕ್.  ಅದನ್ನು ಮತ್ತೊಮ್ಮೆ ಸಾಬೀತು ಪಡಿಸುವಂತೆ ಇವರು ಕೂಡ ಆಯ್ಕೆ ಮಾಡಿದ್ದು ನಟನಾ ಬದುಕನ್ನೇ. ಹುಟ್ಟಿದ್ದು ದಕ್ಷಿಣ ಕನ್ನಡದ ಪುತ್ತೂರಿನಲ್ಲಿ. ಮಂಗಳೂರು ಕರಾವಳಿಯಲ್ಲಿ ಜನಿಸಿದವರಿಗೆ ಕಲೆ ಎನ್ನುವುದು ಯಕ್ಷಗಾನದಿಂದಲೇ ಜೊತೆಯಾಗಿರುತ್ತದೆ. ಶ್ರಿರಾಮ್ ಅವರಿಗೂ ಅಷ್ಟೇ ಯಕ್ಷರಂಗದಲ್ಲಿದ್ದ ತಾತನಿಂದಲೇ ಆಸಕ್ತಿ ಜೊತೆಯಾಗಿರಬಹುದು. ಹಾಗಾಗಿಯೇ ಇಂಜಿನಿಯರ್ ವೃತ್ತಿಗಾಗಿ ಬೆಂಗಳೂರು ಸೇರಿಕೊಂಡರೂ ರಂಗಭೂಮಿ ಕಡೆಗೆ ಆಕರ್ಷಿಸಲ್ಪಟ್ಟರು. ನಾಟಕ, ಸಿನಿಮಾಗಳ ಬಳಿಕ ಪ್ರಸ್ತುತ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ `ಹೂಮಳೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿರುವ ಶ್ರೀರಾಮ್ ಇಲ್ಲಿ ನಮ್ಮೊಂದಿಗೆ ಮಾತನಾಡಿದ್ದಾರೆ.

- ಶಶಿಕರ ಪಾತೂರು 

'ಹೂ ಮಳೆ' ಸೇರಿದಂತೆ ಧಾರಾವಾಹಿಗಳಲ್ಲಿ ನೀವು ಮಾಡಿರುವ ಪಾತ್ರಗಳ ಬಗ್ಗೆ ಹೇಳಿ
ಪ್ರಸ್ತುತ ಹೂಮಳೆಯಲ್ಲಿ ನನ್ನದು ಒಂದು ವಿಭಿನ್ನವಾದ ಪಾತ್ರ. ನಾಯಕಿಯ ಅಣ್ಣನ ಪಾತ್ರ. ಕಾರ್ಪೋರೇಟರ್ ಕಾವೇರಿಯ ಹಿರಿಯ ಮಗ. ನನ್ನ ಪಾತ್ರದ ಹೆಸರು ಉದಯ. 
ಟ್ರಾವೆಲ್ ಏಜೆನ್ಸಿ ನಡೆಸುತ್ತಿರುತ್ತೇನೆ. ಅದಕ್ಕೂ ಮೊದಲು ಟಿ.ಎನ್ ಸೀತಾರಾಮ್ ಅವರ ನಿರ್ದೇಶನದ `ಮಗಳು ಜಾನಕಿ' ಧಾರಾವಾಹಿಯಲ್ಲಿ ಒಂದು ಪಾತ್ರ ಮಾಡಿದ್ದೆ. ಸುಧಾ ಬೆಳವಾಡಿಯವರ ಮಗನಾಗಿ ನಟಿಸಿದ್ದ ನನ್ನ ಪಾತ್ರ ಇನ್ನಷ್ಟು ಅವಕಾಶ ಪಡೆದುಕೊಳ್ಳುವ ಹಂತದಲ್ಲಿ ಧಾರಾವಾಹಿಯೇ ಕೊನೆಯಾಯಿತು. ಅದಕ್ಕೂ ಮೊದಲು `ರಾಧಾ ರಮಣ' ಧಾರಾವಾಹಿಯಲ್ಲಿ ಮೂರು ವರ್ಷಗಳ ಕಾಲ ಸುಮೇಧ್ ಎನ್ನುವ ಪಾತ್ರವನ್ನು ಮಾಡಿದ್ದೆ.

ಕನ್ನಡತಿಯ  `ತಾಪಸಿ' ಈ ದೀಪಾ ಶ್ರೀ

ರಂಗಭೂಮಿಯಿಂದ ಸಿನಿಮಾರಂಗ ಪ್ರವೇಶಿಸಿದ ಅನುಭವ ಹೇಗಿತ್ತು? 
ಡ್ಯಾನ್ಸ್ ಮಾಡುತ್ತಿದ್ದೆ.ರಂಗಭೂಮಿಯಲ್ಲಿ ಎರಡು ವರ್ಷಗಳ ಕಾಲ ಅನುಭವ ಪಡೆದೆ. `ರೆಡ್', `ಕಲಾಕುಂಜ', `ಸರ್ವಸ್ವ' ಮೊದಲಾದ ರಂಗ ತಂಡಗಳೊಂದಿಗೆ ಆರೇಳು ನಾಟಕಗಳಲ್ಲಿ ನಟಿಸಿದ್ದೆ. ಅಂದು ನನ್ನ ಜೊತೆಗಿದ್ದ`ಉಗ್ರಂ' ಮಂಜು ಮತ್ತು `ಭಜರಂಗಿ' ಲೋಕಿ ಅವರಂತೆ ನನಗೂ ಸಿನಿಮಾಗಳಲ್ಲಿ ಅವಕಾಶವೇನೋ ದೊರೆಯಿತು. ಆದರೆ ಹೇಳಿಕೊಳ್ಳುವಂಥ ಬ್ರೇಕ್ ಸಿಗಲಿಲ್ಲ ಎನ್ನುವುದು ಸತ್ಯ. `ದಿ ಪ್ಲ್ಯಾನ್' ಎನ್ನುವುದು ನನ್ನ ಮೊದಲ ಚಿತ್ರ. ಅನಂತನಾಗ್ ಅವರು ಪ್ರಮುಖ ಪಾತ್ರದಲ್ಲಿದ್ದ ಸಿನಿಮಾ ಅದು. ಬಳಿಕ `ಪೆಟ್ಟ್ ಕಮ್ಮಿ' ಎನ್ನುವ ತುಳು ಚಿತ್ರದಲ್ಲಿಯೂ ನಟಿಸಿದೆ. `ಗಿಮಿಕ್' ಚಿತ್ರದಲ್ಲಿ ಗಣೇಶ್ ಅವರೊಂದಿಗೆ ಸಣ್ಣದೊಂದು ಪಾತ್ರ ಮಾಡಿದ್ದೇನೆ. ಸಣ್ಣ ಪಾತ್ರವಾದರೂ ಕೂಡ ಚಿತ್ರ ನೋಡಿದವರು ನೆನಪಿರಿಸುವಂಥ ಪಾತ್ರ ಅದಾಗಿತ್ತು. ಮುಂದೆ ಕೃಷ್ಣ ಬೆಳ್ತಂಗಡಿಯವರ ನಿರ್ದೇಶನದಲ್ಲಿ ತೆರೆಕಾಣಲಿರುವ `ರಿಪ್ಪರ್' ಚಿತ್ರದಲ್ಲಿ ಒಬ್ಬ ಪ್ರೇಮಿಯ ಪಾತ್ರ ಮಾಡಿದ್ದೇನೆ.

ವಿಷ್ಣು ಸರ್ ನೆನೆಪು ಮೂಡಿಸಿದ ಅನಿರುದ್ಧ್- ಸುಧಾರಾಣಿ

ಬಣ್ಣದ ಲೋಕದಲ್ಲಿ ನಿಮ್ಮ ಗುರಿ ಏನು?
ಬಣ್ಣದ ಲೋಕದಲ್ಲಿ ಒಳ್ಳೆಯ ಸಿನಿಮಾಗಳೇ ನನ್ನ ಗುರಿ. ಮುಂದೆಯೂ ನನಗೆ ಸಿನಿಮಾಗಳಲ್ಲಿ ವೆರೈಟಿ ಶೇಡ್ ಪಾತ್ರಗಳನ್ನು ಮಾಡುವ ಆಸಕ್ತಿ ಇದೆ. ಹಾಗಂತ ಬರಬೇಕಾದ ಆಫರ್‌ಗಾಗಿ ಅಲೆದಾಡಿಕೊಂಡಿರುವುದು ಸಾಧ್ಯವಿಲ್ಲ. ಯಾಕೆಂದರೆ ಮುಂದಿನ ತಿಂಗಳಲ್ಲೇ ನಾನು ವೈವಾಹಿಕ ಜೀವನಕ್ಕೆ ಕಾಳಿಡುತ್ತಿದ್ದೇನೆ. ಭಾವೀ ಪತ್ನಿ ಫಾರ್ಮ ಸಂಸ್ಥೆಯಲ್ಲಿ ರೀಸರ್ಚ್ ಸೈಂಟಿಸ್ಟ್ ಆಗಿದ್ದಾರೆ. ಇತ್ತ ನನಗೂ ಚಿತ್ರರಂಗದಲ್ಲೊಂದು ಭದ್ರ ಬುನಾದಿ ಇರಲೇಬೇಕಾಗಿದೆ. ಈ ಹಿಂದೆ ಸಿನಿಮಾರಂಗದಲ್ಲೇ ಮುಂದುವರಿಯಬೇಕು ಎನ್ನುವ ಹಠದಿಂದ ಕ್ಯಾಮೆರಾ ಅಸಿಸ್ಟೆಂಟ್ ಆಗಿಯೂ ಕೆಲಸ ಮಾಡಿದ್ದೆ. ಈಗ ಚಿತ್ರೀಕರಣಕ್ಕಾಗಿ ಕ್ಯಾಮೆರಾ ಬಾಡಿಗೆಗೆ ನೀಡುವಷ್ಟು ಬದಲಾಗಿದ್ದೇನೆ. ಹಾಗಂತ ಸಿನಿಮಾಗಳಲ್ಲಿ ನಟಿಸುವ  ಕುರಿತಾದ ಗುರಿಯನ್ನು ಬಿಟ್ಟಿಲ್ಲ. ಒಳ್ಳೆಯ ಪಾತ್ರಕ್ಕಾಗಿ ಸಿಕ್ಸ್ ಪ್ಯಾಕ್‌ ಎಲ್ಲ ಮಾಡಿ ತಯಾರಾಗಿದ್ದೇನೆ. ಕಲಾವಿದನಾದ ಮೇಲೆ ಎಲ್ಲರಿಗೂ ಅಭಿನಯದಲ್ಲೇ ಅಂತಿಮ ತೃಪ್ತಿ. ನನಗೂ ಅದೇ ನಿರೀಕ್ಷೆ ಇದೆ.

ರವಿಚಂದ್ರನ್ ಚಿತ್ರ ನಿರ್ದೇಶಿಸುವ ಆಸಕ್ತಿ ಇದೆ - ಜೀತು ಜೋಸೆಫ್

click me!