ಹಾಡುಗಾರ ವಿಶ್ವನಾಥರನ್ನು ಮೋಡಿಗಾರನಾಗಿಸಿತು ಬಿಗ್ ಬಾಸ್!

Suvarna News   | Asianet News
Published : Apr 21, 2021, 10:00 AM ISTUpdated : Apr 21, 2021, 10:40 AM IST
ಹಾಡುಗಾರ ವಿಶ್ವನಾಥರನ್ನು ಮೋಡಿಗಾರನಾಗಿಸಿತು ಬಿಗ್ ಬಾಸ್!

ಸಾರಾಂಶ

ವಿಶ್ವನಾಥ್ ಹಾವೇರಿ ಕನ್ನಡದ ಜನತೆಗೆ ಯುವ ಗಾಯಕರಾಗಿ ಪರಿಚಿತರಾದವರು. ಬಿಗ್ ಬಾಸ್ ಮನೆ ಸೇರಿಕೊಂಡ ಮೇಲೆ ಪ್ರತಿಯೊಬ್ಬ ಬಿಗ್‌ ಬಾಸ್‌ ವೀಕ್ಷಕರ ಮನೆಯ ಸದಸ್ಯನಂತಾಗಿರುವ ವಿಶ್ವನಾಥ್ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ಮಾತುಕತೆ ಇಲ್ಲಿದೆ.  

ಈ ಬಾರಿಯ ಬಿಗ್ ಬಾಸ್ ಸ್ಪರ್ಧೆಯಲ್ಲಿ ಎಳೆಯ ವಯಸ್ಸಿನ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟವರು ವಿಶ್ವನಾಥ್ ಹಾವೇರಿ. ಸುಂದರ ತರುಣ, ಆಕರ್ಷಕ ಗಾಯನ ಹೀಗೆ ಒಂದಷ್ಟು ಅಂಶಗಳು ಅವರನ್ನು ಮೆಚ್ಚಲು ಕಾರಣವಾಗಿದ್ದವು. ಅದರ ಜೊತೆಗೆ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದ ರೀತಿಯೂ ಪ್ರೇಕ್ಷಕರ ಪ್ರಶಂಸೆಗೊಳಗಾಗಿತ್ತು. ಹಾಗಾಗಿಯೇ ಈ ಹಿಂದೆ `ಹಾಡು ಕರ್ನಾಟಕ' ಕಾರ್ಯಕ್ರಮದಲ್ಲಿ ಸಿಕ್ಕಿದ್ದಕ್ಕಿಂಥ ಹೆಚ್ಚಿನ ಜನಪ್ರಿಯತೆ ವಿಶ್ವನಾಥ್ ಅವರಿಗೆ ಬಿಗ್ ಬಾಸ್ ತಂದುಕೊಟ್ಟಿದೆ. ಆದರೆ ಅರ್ಧದಲ್ಲೇ ನಿಲುಗಡೆಗೊಂಡ ತಮ್ಮ ಪಯಣದ ಬಗ್ಗೆ ಅವರು ಏನು ಹೇಳುತ್ತಾರೆ ಎನ್ನುವ ಕುರಿತಾದ ಮಾಹಿತಿ ಇಲ್ಲಿದೆ.

- ಶಶಿಕರ ಪಾತೂರು

 `ಬಿಗ್ ಬಾಸ್‌'ನಲ್ಲಿ ಎಳೆವಯಸ್ಸಿನ ಸ್ಪರ್ಧಿ ನೀವಾಗಿದ್ರಿ. ಆದರೆ ಎಲಿಮಿನೇಶನ್‌ ವೇಳೆಯೂ ಸಮಚಿತ್ತವಾಗಿರುವಷ್ಟು ಪಕ್ವತೆ ಎಲ್ಲಿಂದ ಬಂತು?
ಪ್ರಮುಖವಾಗಿ ಅಲ್ಲಿ ಪಕ್ವತೆ ತೋರಿಸುವಷ್ಟು ವಯಸ್ಸು ನನ್ನದಾಗಿದೆ ಎಂದುಕೊಂಡಿದ್ದೇನೆ.  ಇನ್ನು ಹೇಳಬೇಕೆಂದರೆ ನನ್ನ ಅಪ್ಪ ಅಮ್ಮ ನನ್ನನ್ನು ಬೆಳೆಸಿರುವ ರೀತಿಯೂ ಅದಕ್ಕೆ ಕಾರಣ ಇರಬಹುದು. ಇಷ್ಟುಬೇಗ ಎಲಿಮಿನೇಶನ್‌ ಆಗುವ ಬಗ್ಗೆ ನನಗೆ ನಿರೀಕ್ಷೆ ಇರಲಿಲ್ಲ ನಿಜ. ಹಾಗಾಗಿಯೇ ನಾನು ಕಾನ್ಫಿಡೆಂಟಲ್ಲಿದ್ದೆ. ಆದರೆ ಎಲಿಮಿನೇಟ್ ಆಗುವುದು ಪಕ್ಕ ಎಂದು ಗೊತ್ತಾದಮೇಲೆ ಹತಾಶೆ ತೋರಿಸಿ ಏನು ಪ್ರಯೋಜನ? ಆ ಮನೆಯಲ್ಲಿನ ಕೊನೆಯ ಐದು ನಿಮಿಷಗಳನ್ನು ಹೇಗೆ ಖುಷಿಯಿಂದ ಕಳೆಯಬೇಕು ಎನ್ನುವುದಷ್ಟೇ ವಿಷಯವಾಗಿತ್ತು. ನನಗೆ.

ಗೌತಮಿ ಜಾಧವ್ ತೆರೆದಿಟ್ಟ ಸತ್ಯ ಸಮಾಚಾರ

ಹೊಸದಾಗಿ ಬಂದ ಚಂದ್ರಚೂಡ್ ಅವರಿಗಿಂತ ಕಡಿಮೆ ಓಟ್ ಬಿತ್ತು ಎಂದು ನಂಬಲು ಕಷ್ಟ ಆಯ್ತಾ?
ಹೌದು. ಮಾತ್ರವಲ್ಲ, ಕಳೆದ ವಾರ ಎಲಿಮಿನೇಶನ್‌ ಹಂತದಲ್ಲಿದ್ದ ಶಮಂತ್ ಈ ಬಾರಿ ಎಲಿಮಿನೇಟ್ ಆಗಬಹುದು ಎಂದುಕೊಂಡಿದ್ದೆ. ಕೊನೆಯಲ್ಲಿ ನಾನು ಮತ್ತು ಚಂದ್ರಣ್ಣ ಮಾತ್ರ ಉಳಿದುಕೊಂಡಿದ್ದೆವು. ಆಗ ಚಂದ್ರಚೂಡ್ ಅವರಿಗಿಂತಲೂ ನನಗೆ ಕಡಿಮೆ ವೋಟ್ ಬಂದಿದೆ ಎನ್ನುವುದು ನಂಬೋದಿಕ್ಕೆ ಕಷ್ಟ ಆಯಿತು. ಆದರೆ ನಾನು ಅದನ್ನು ಒಪ್ಪಿಕೊಳ್ಳಲೇಬೇಕಾಗಿತ್ತು.

ನಾಗಿಣಿ ಖ್ಯಾತಿಯ ನಿನಾದ್ ಜೊತೆಗೆ ಮಾತುಕತೆ

ತುಂಬ ರಫ್ ಆಗಿ ಮಾತನಾಡುತ್ತಿರುವಂತೆ ಗೋಚರಿಸುವ ನಿಧಿ ಸುಬ್ಬಯ್ಯ ಅವರಿಂದ ನಿಮಗೆ ನೋವಾದ ಸಂದರ್ಭವೇ ಇಲ್ಲವೇ?
ನಿಧಿ ಸುಬ್ಬಯ್ಯ ಅವರು ನೇರವಾಗಿ ಮಾತನಾಡುತ್ತಾರೆ. ಅವರು ಸತ್ಯವನ್ನೇ ಮಾತನಾಡುತ್ತಾರೆ. ಅದು ಅರ್ಥವಾದ ಮೇಲೆ ನನಗೆ ನೋವಾಗುವ ಅಗತ್ಯ ಇರಲಿಲ್ಲ. ಯಾಕೆಂದರೆ ಇರುವುದನ್ನೇ ಹೇಳುತ್ತಿದ್ದ ಕಾರಣ ಅರ್ಥ ಮಾಡಿಕೊಂಡು ಮುಂದುವರಿಯುತ್ತಿದ್ದೆ. ಒಟ್ಟಿನಲ್ಲಿ ಹರ್ಟ್ ಆಗುವುದಕ್ಕಿಂತ ಅರ್ಥ ಮಾಡಿಕೊಳ್ಳುವುದೇ ಜಾಣ್ಮೆಆಗಿತ್ತು. ನಾನು ಅವರಿಂದ ಕಲಿತಿದ್ದೇ ಜಾಸ್ತಿ. ಹಾಗಾಗಿಯೇ ನಿಧಿಯವರಿಗೆ ನಾನು ಅಕ್ಕನ ಸ್ಥಾನ ನೀಡಿರುವುದಾಗಿ ಹೇಳಿದ್ದೇನೆ. 

ನೀವು ಎಲಿಮಿನೇಟಾಗಿ ಬಂದಿರುವ ಬಗ್ಗೆ ಮನೆ ಮಂದಿಯ ಪ್ರತಿಕ್ರಿಯೆ ಹೇಗಿದೆ?
ನನ್ನನ್ನು ಕರೆದುಕೊಂಡು ಹೋಗಲು  ನಮ್ಮ ಅಪ್ಪಾಜಿ ಇಲ್ಲಿಗೆ ಬಂದಿದ್ದರು. ಅವರು ನಾನು ಹೇಳಿದ ಹಾಗೆ ಇಲ್ಲಿಯ ತನಕ ಸಿಕ್ಕ ಅವಕಾಶವೇ ದೊಡ್ಡದು ಎನ್ನುವ ಮನೋಭಾವ ಹೊಂದಿದ್ದಾರೆ. ನಾನು ಬಂದಿದ್ದೇನೆ ಎನ್ನುವುದು ಯಾರಿಗೂ ನಿರಾಶೆಯಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ  ಮನೆಯೊಳಗೆ ಯಾವುದೇ ಕಾಂಟ್ರವರ್ಸಿ ಇಲ್ಲದೆ, ಯಾರಿಗೂ ಕೆಟ್ಟದ್ದು ಮಾತನಾಡದೇ ಹೊರಗೆ ಬಂದಿರುವುದಕ್ಕೆ ಮನೆಮಂದಿಗೆ ಮತ್ತು ಸ್ನೇಹಿತರಿಗೆ ಖುಷಿ ಇದೆ. 

ಕನ್ನಡತಿಯ ಪ್ರತಿಭೆ ಪ್ರತಿಮಾ ಎನ್ನುವ ಸಮೀಕ್ಷಾ

ನೀವು ಮನೆಯಿಂದ ಹೊರಡುವಾಗ ಹಾಡಿದ ಗೀತೆಯ ಬಗ್ಗೆ ಹೇಳಿ?
ಅದು ತಾಯಿಯ ಕುರಿತಾದ ಹಾಡು. ನಮ್ಮ ಮ್ಯೂಸಿಕ್ ಬ್ಯಾಂಡ್‌ನಲ್ಲಿರುವ ಅಣ್ಣ ಸಾಮ್ಯುಯೆಲ್ ಅವರು ಬರೆದಿರುವ ಗೀತೆ ಅದು. ನಾನು ರಾಗ ಸಂಯೋಜನೆ ಮಾಡಿದ್ದೇನೆ. ಅಲ್ಲಿದ್ದಾಗ ಎಲ್ಲರೂ ಮುಖ್ಯವಾಗಿ ತಾಯಿಯನ್ನು ನಮ್ಮ ಮನೆಯನ್ನು ಮನೆಯನ್ನು ಮಿಸ್ ಮಾಡಿಕೊಳ್ಳುತ್ತಿರುತ್ತೇವೆ. ಹೊರಗೆ ಬಂದ ಮೇಲೆ ನಾನು ಇಡೀ ಬಿಗ್ ಬಾಸ್ ಮನೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು