'ಮತ್ತೆ ಮನ್ವಂತರ'ದಲ್ಲಿ ಬರಲಿದ್ದಾರೆ ಮೇಧಾ ವಿದ್ಯಾಭೂಷಣ್

Suvarna News   | Asianet News
Published : Aug 24, 2021, 07:01 PM IST
'ಮತ್ತೆ ಮನ್ವಂತರ'ದಲ್ಲಿ ಬರಲಿದ್ದಾರೆ ಮೇಧಾ ವಿದ್ಯಾಭೂಷಣ್

ಸಾರಾಂಶ

ವಿದ್ಯಾಭೂಷಣರ ಪುತ್ರಿ ಎನ್ನುವುದರಾಚೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಭರವಸೆ ಮೂಡಿಸುತ್ತಿರುವ ಪ್ರತಿಭಾವಂತೆ ಮೇಧಾ ವಿದ್ಯಾಭೂಷಣ್. ಪ್ರಸ್ತುತ ಟಿ ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ಪ್ರಸಾರ ಕಾಣಲಿರುವ ಹೊಸ ಧಾರಾವಾಹಿಯ ನಾಯಕಿಯೂ ಹೌದು. ಆ ಖುಷಿಯ ಅನುಭವಗಳ ಬಗ್ಗೆ ಮೇಧಾ ಇಲ್ಲಿ ಮಾತನಾಡಿದ್ದಾರೆ.

ದೇವರನಾಮಗಳ ಮೂಲಕ ಜನಪ್ರಿಯರಾಗಿ `ಹಾಡುವ ಸ್ವಾಮೀಜಿ’ ಎನಿಸಿದ ವಿದ್ಯಾಭೂಷಣರಂತೆ ಮೇಧಾ ಕೂಡ ಹಾಡುಗಾರಿಕೆಯಲ್ಲಿ ಭರವಸೆ ಮೂಡಿಸಿದವರು. ಹಾಗಂತ ನಟನೆಯೇನೂ ಅವರಿಗೆ ಹೊಸದೇನಲ್ಲ. ಶಾಲಾ ದಿನಗಳಿಂದಲೇ ರಂಗಭೂಮಿ ಕುರಿತಾದ ಆಸಕ್ತಿಗೆ ಮನೆಯವರು ನೀಡಿದ ಪ್ರೋತ್ಸಾಹ ಅವರಿಗೆ  ಇಂದು ಸಾಂಸ್ಕೃತಿಕ ಕ್ಷೇತ್ರದಲ್ಲಿಉತ್ತಮ ಅವಕಾಶಗಳನ್ನು ಪಡೆಯುವಂತೆ ಮಾಡಿದೆ.

- ಶಶಿಕರ ಪಾತೂರು

ಸಾಂಸ್ಕೃತಿಕ ರಂಗದಲ್ಲಿ ಆಸಕ್ತಿ ಮೂಡಲು ನಿಮಗೆ ತಂದೆಯವರೇ ಸ್ಫೂರ್ತಿ ಎನ್ನಬಹುದೇ?
ಖಂಡಿತವಾಗಿಯೂ. ಯಾಕೆಂದರೆ ನಾನು ಚಿಕ್ಕ ವಯಸ್ಸಿನಿಂದಲೂ ತಂದೆಯವರನ್ನು ನೋಡುತ್ತಲೇ ಬೆಳೆದಿದ್ದೀನಲ್ಲ. ಬಹುಶಃ ಅದೇ ಕಾರಣದಿಂದಲೇ ಇರಬಹುದು ನಾನು ನಮ್ಮಣ್ಣ ಇಬ್ಬರೂ ಬರೇ ಅಕಾಡೆಮಿಕ್ಸ್ ಅಥವಾ ಓದನ್ನಷ್ಟೇ ಮಾಡಿಕೊಂಡು ಬೆಳೆದವರಲ್ಲ. ನಾನು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ತಂದೆ, ತಾಯಿ `ರಂಗಶಂಕರ’ದಲ್ಲಿ, ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಹೀಗೆ ಎಲ್ಲೆಲ್ಲಿ ಒಳ್ಳೆಯ ನಾಟಕಗಳಾಗುತ್ತಿತ್ತೋ ಅಲ್ಲಿಗೆಲ್ಲ ಅವರು ಕರೆದುಕೊಂಡು ಹೋಗಿದ್ದಾರೆ. ನಾನು ಶಾಲಾ ನಾಟಕಗಳಲ್ಲಿ ಮಾಡೋದು ಮತ್ತು ಇಂಥ ನಾಟಕಗಳನ್ನು ನೋಡುವುದರ ಮುಖಾಂತರ ರಂಗಭೂಮಿಯ ನಂಟು ಬೆಳೆದಿತ್ತು. ಐದು ವರ್ಷದವಳಿದ್ದಾಗಲೇ ಸಂಗೀತ ಅಭ್ಯಾಸ ಶುರು ಮಾಡಿದೆ. ಕರ್ನಾಟಿಕ್ ಕ್ಲಾಸಿಕಲ್ ತರಬೇತಿ ಪಡೆದುಕೊಂಡಿದ್ದೇನೆ. ನಾಲ್ಕು ವರ್ಷ ಕಥಕ್ ಕೂಡ ಅಭ್ಯಾಸ ಮಾಡಿದ್ದೇನೆ. ಶಾಲೆಯಿಂದಲೇ ಇರುವ ರಂಗಾಭಿನಯವನ್ನು ಈಗಲೂ ಮುಂದುವರಿಸಿದ್ದೇನೆ.

ಸೀತಾರಾಮ್ ಸೀರಿಯಲ್‌ನಲ್ಲಿ ವಿದ್ಯಾಭೂಷಣರ ಮಗಳು ನಾಯಕಿ

ತಂದೆಯ ಯಾವ ಆದರ್ಶವನ್ನು ನಿಮ್ಮಲ್ಲಿಅಳವಡಿಸಲೇಬೇಕು ಎಂದು ಪ್ರಯತ್ನಿಸಿದ್ದೀರಿ?
ತಂದೆಯ ಆದರ್ಶಗಳೆಲ್ಲವೂ ಮಕ್ಕಳಿಗೆ ಮಾದರಿಯೇ. ಅದರಲ್ಲಿ ಮುಖ್ಯವಾಗಿ ಹೇಳುವುದಾದರೆ ವಿನಯವಂತಿಕೆ. 'ಜೀವನದಲ್ಲಿ ನಾವು ಏನೇ ಪಡೆದುಕೊಂಡಿರಬಹುದು. ಉದಾಹರಣೆಗೆ ದುಡ್ಡು, ಹೆಸರು ಮೊದಲಾದವು. ಆದರೆ ಎಲ್ಲದಕ್ಕಿಂತಲೂ ಕೊನೆಗೆ ಮುಖ್ಯವೆನಿಸುವುದು ನಾವು ಎಷ್ಟು ಮಂದಿಯ ಪ್ರೀತಿ ಪಡೆದಿದ್ದೇವೆ ಎನ್ನುವುದು ಮಾತ್ರ. ಯಾಕೆಂದರೆ ನಾವೆಷ್ಟೇ ಎತ್ತರಕ್ಕೆ ಬೆಳೆದರೂ ಅದು ಯಾವುದೂ ನಮ್ಮದಲ್ಲ, ಬೇರೆಯವರಿಂದ ನಮಗೆ ಸಿಕ್ಕಿರುವ ಭಾಗ್ಯ ಎಂದು ಅಂದುಕೊಂಡು ಎಲ್ಲರಲ್ಲಿಯೂ ನಮ್ಮಿಂದ ಸಾದ್ಯವಾದಷ್ಟು ಒಳ್ಳೆಯವರಾಗಿ, ವಿಧೇಯತೆಯಿಂದ ಇರಬೇಕು. ಸೊಕ್ಕು, ಅಹಂಕಾರ ಎಲ್ಲವೂ ಇರಲೇಬಾರದು. ವಿನಯವಂತೂ ಇರಲೇಬೇಕು' ಎನ್ನುವುದನ್ನು ಕಲಿತಿದ್ದೇನೆ.

ಹಾಡುವ ಸ್ವಾಮೀಜಿಯ ಮಗಳು ಈ ಮೇಧಾ

ಟಿ.ಎನ್ ಸೀತಾರಾಮ್ ಅವರ ಕಡೆಯಿಂದ ನಟನೆಗೆ ಆಫರ್ ಬಂದಾಗ ಮನೆಯಲ್ಲಿನ ಪ್ರತಿಕ್ರಿಯೆ ಹೇಗಿತ್ತು?
ಸೀತಾರಾಮ್‌ ಸರ್ ಈ ಬಗ್ಗೆ ಮಾತನಾಡಿದಾಗ ನಾನು ಮನೆಯಲ್ಲಿ ಇರಲಿಲ್ಲ. ನನ್ನಲ್ಲಿ ಕೇಳಿ ಹೇಳುವುದಾಗಿ ಅಮ್ಮ ಹೇಳಿದ್ದಾರೆ. ನಾನು ಒಪ್ಪಿದ ಮೇಲೆ ಪಾತ್ರಕ್ಕಾಗಿ ಅವರು ಆಡಿಶನ್ ಮಾಡಿಸಿದ್ದಾರೆ ಎನ್ನುವುದು ಬೇರೆ ವಿಚಾರ. ಆದರೆ ನನಗೆ ಅಮ್ಮ ಹೇಳಿದಾಗ ಇದೊಂದು ದೊಡ್ಡ ಜವಾಬ್ದಾರಿ  ಅದನ್ನು ನಿಭಾಯಿಸಲು ಸಾಧ್ಯವಾ ಎನ್ನುವ ಆತಂಕ ಆಗಿದ್ದು ನಿಜ. ಆಗ ನನ್ನ ತಾಯಿ, ತಂದೆಯೇ ಪಕ್ಕದಲ್ಲಿ ಕುಳಿತು ಈ ಅವಕಾಶವನ್ನು ಬಿಡಬೇಡ ಎಂದು ಸಲಹೆ ನೀಡಿದ್ದರು. ಗೊತ್ತಿಲ್ಲವಾದರೆ ಕಲಿತು ಮಾಡು ಎಂದು ಉತ್ತೇಜನ ಕೊಟ್ಟರು. ನನ್ನ ಮನೆಯಲ್ಲಿ ಯಾವುದಕ್ಕೂ ನಿಬಂಧನೆ ಹಾಕಿದವರಲ್ಲ.

ಯಾರಿಗೆ ಬಂತು ಸ್ವಾತಂತ್ರ್ಯ?- ರಿಯಲ್ ಸ್ಟಾರ್ ನಿರಾಶೆ

ಮುಂದೆ ನಿಮ್ಮನ್ನು ಸಿನಿಮಾ ನಟಿಯಾಗಿಯೂ ನೋಡಬಹುದೇ?
ನಿಜ ಹೇಳಬೇಕೆಂದರೆ ಧಾರಾವಾಹಿ ಅಥವಾ ಸಿನಿಮಾ ನಟಿಯಾಗುವುದು ನನ್ನ ಗುರಿಯಲ್ಲ. ಆದರೆ ಹೇಗೆ `ಮತ್ತೆ ಮನ್ವಂತರ’ ಎನ್ನುವ ಆಫರ್ ನನ್ನನ್ನು ಒಪ್ಪುವಂತೆ ಮಾಡಿತೋ ಅದೇ ರೀತಿ ಉತ್ತಮ ಪಾತ್ರವುಳ್ಳ ಸಿನಿಮಾ ಬಂದಾಗ ಒಪ್ಪಿಕೊಳ್ಳಲೂಬಹುದು. ಇವೆಲ್ಲ ಏನೇ ಇದ್ದರೂ ನನ್ನ ಜೀವನದ ಒಂದು ಭಾಗ ಮಾತ್ರ. ಆದರೆ ಒಟ್ಟು ಜೀವನದಲ್ಲಿ ಸಂಗೀತಕ್ಕಷ್ಟೇ ಪ್ರಧಾನ್ಯತೆ. ಸಂಗೀತ ನನ್ನ ಬದುಕು. ಸಂಗೀತವನ್ನು ತ್ಯಜಿಸಲು ನಾನು ಯಾವತ್ತಿಗೂ ತಯಾರಿಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು