ರಾಮನಗರದ ಶಿಲ್ಹಾಂದರ ರೆಸಾರ್ಟ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ಶೋಷಣೆ ನಡೆದಿದೆ. ರೆಸಾರ್ಟ್ ಸಿಬ್ಬಂದಿಯೊಬ್ಬರು ಶೌಚಾಲಯದಲ್ಲಿ ಇಣುಕಿ ನೋಡಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ. ಮಹಿಳೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಮನಗರ (ಆ.22): ಬೆಂಗಳೂರು ಸನಿಹದ ರಾಮನಗರದ ಪಾದರಳ್ಳಿ ಬಳಿ ಇರುವ ಪ್ರತಿಷ್ಠಿತ ಶಿಲ್ಹಾಂದರ ರೆಸಾರ್ಟ್‌ನಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ಶೋಷಣೆ ನಡೆದಿದೆ ಎಂದು ವರದಿಯಾಗಿದೆ. ರೆಸಾರ್ಟ್‌ನ ಸಿಬ್ಬಂದಿಯೊಬ್ಬರು ಶೌಚಾಲಯದಲ್ಲಿ ಮಹಿಳೆ ಇರುವಾಗ ಇಣುಕಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Add Asianetnews Kannada as a Preferred SourcegooglePreferred

ಘಟನೆ ನಡೆದ ದಿನ ಬೆಂಗಳೂರಿನಿಂದ ಸುಮಾರು 20 ಮಂದಿ ಸ್ನೇಹಿತರ ಗುಂಪೊಂದು ರೆಸಾರ್ಟ್‌ಗೆ ಭೇಟಿ ನೀಡಿತ್ತು. ಮಧ್ಯಾಹ್ನ ಸ್ವಿಮ್ಮಿಂಗ್ ಪೂಲ್ ಬಳಿ ಇರುವ ಶೌಚಾಲಯಕ್ಕೆ ಮಹಿಳೆ ಹೋದಾಗ, ರೆಸಾರ್ಟ್ ಸಿಬ್ಬಂದಿ ಸಂದೀಪ್ ಎಂಬಾತ ಪಕ್ಕದ ಶೌಚಾಲಯದ ಮೂಲಕ ಇಣುಕಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಕೂಡಲೇ ಆತಂಕಿತರಾದ ಮಹಿಳೆ ಕೂಗಾಡಿದ್ದು, ತಕ್ಷಣವೇ ರೆಸಾರ್ಟ್ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆದರೆ, ರೆಸಾರ್ಟ್ ಆಡಳಿತ ಮಂಡಳಿ ಆರೋಪಗಳನ್ನು ನಿರಾಕರಿಸಿದೆ ಎಂದು ತಿಳಿದುಬಂದಿದೆ.

ಬಳಿಕ ಮಹಿಳೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಆರೋಪಿ ಸಂದೀಪ್‌ನನ್ನು ಬಂಧಿಸಿದ್ದಾರೆ.