ಪ್ರವಾಸೋದ್ಯಮ ಐಶಾರಾಮಿ ಜನರ ಖುಷಿಯ ಉದ್ಯಮವಲ್ಲ. ರಾಷ್ಟ್ರ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಮ್ಮ ರಾಜ್ಯವು 3ನೇ ಸ್ಥಾನದಲ್ಲಿರುವುದು ಅತ್ಯಂತ ಗರ್ವದ ಸಂಗತಿಯಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದ್ದಾರೆ.

ಗದಗ (ಸೆ.28): ರಾಷ್ಟ್ರ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಮ್ಮ ರಾಜ್ಯವು 3ನೇ ಸ್ಥಾನದಲ್ಲಿರುವುದು ಅತ್ಯಂತ ಗರ್ವದ ಸಂಗತಿಯಾಗಿದೆ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ. ಜಿಲ್ಲಾಡಳಿತ, ಜಿಪಂ ಪ್ರವಾಸೋದ್ಯಮ ಇಲಾಖೆ, ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಸರಗೋಡದಿಂದ ಕಾರವಾರದವರೆಗೆ 320 ಕಿ.ಮೀ. ಸುಂದರ ಪ್ರವಾಸಿ ತಾಣವಾಗಿದೆ. ಪ್ರವಾಸೋದ್ಯಮ ಐಶಾರಾಮಿ ಜನರ ಖುಷಿಯ ಉದ್ಯಮವಲ್ಲ.

ಜನರ ಮನಸ್ಸಿನಲ್ಲಿ ಬದಲಾವಣೆ ತರುವ ಶಕ್ತಿಯನ್ನು ಹೊಂದಿರುವ ವಿಷಯವಾಗಿದೆ. ಕೋಶ ಓದು, ದೇಶ ಸುತ್ತು ಎನ್ನುವ ಗಾದೆ ಇದೆ. ದೇಶ ಸುತ್ತುವುದರಿಂದ ಬದುಕಿನಲ್ಲಿ ಬದಲಾವಣೆ ಆಗಲು ಸಾಧ್ಯವಾಗುತ್ತದೆ ಎಂದರು. ಭಾರತ ಪ್ರವಾಸೋದ್ಯಮ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ವಿದೇಶದಲ್ಲಿ ಜೋಗ ಜಲಪಾತ, ಲಕ್ಕುಂಡಿಯ ಬಸ್ತಿ, ಬಾದಾಮಿ, ಐಹೊಳೆಯಲ್ಲಿರುವ ಐತಿಹಾಸಿಕ ದೇವಸ್ಥಾನಗಳು ಕಾಣಸಿಗುವುದಿಲ್ಲ. ಜಿಲ್ಲೆಯ 48 ತಾಣ ಸೇರಿ ರಾಜ್ಯದ 1200 ತಾಣಗಳು ಒಳಗೊಂಡು ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಗದಗನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ರಾತ್ರಿ ವೇಳೆ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡುವ ಚಿಂತನೆ ಇದೆ ಎಂದರು.

ಮತಗಳ್ಳತನದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ

ಬಿಜೆಪಿ ಮತಗಳ್ಳತನದಿಂದ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಸಹಿ ಸಂಗ್ರಹ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕಿದೆ ಎಂದು ಹೇಳಿದರು. ರಾಹುಲ್ ಗಾಂಧಿ ಬ್ಲ್ಯಾಕ್ ಬೋರ್ಡ್‌ನಲ್ಲಿ ಮಾಹಿತಿ ನೀಡುತ್ತಿದ್ದಂತೆ ಚುನಾವಣಾ ಆಯೋಗಕ್ಕೆ ನಡುಕ ಶುರುವಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಮಾತನಾಡುತ್ತಿಲ್ಲ, ಬಿಜೆಪಿ ಮಾತನಾಡುತ್ತಿದೆ ಎಂದು ಹೇಳಿದರು. 2008ರ ಚುನಾವಣೆಯಲ್ಲಿ ಸೋತಿದ್ದೆವು. ಜನರ ಆಶೀರ್ವಾದಕ್ಕೆ ತಲೆಬಾಗಿ ನಡೆದೆವು. ಜನರ ಧ್ವನಿಗೆ ತಲೆ ಬಾಗಿದ್ದೆವು. 2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಚುನಾವಣಾಧಿಕಾರಿಗಳು ಹಾಗೂ ತಹಸೀಲ್ದಾರ್ ಅವರು ತಪ್ಪು ಮಾಡಿದ್ದರು.

18 ಸಾವಿರ ಮತಗಳನ್ನು ಗದಗ ಮತಕ್ಷೇತ್ರದಲ್ಲಿ ಡಿಲಿಟ್ ಮಾಡಲಾಗಿತ್ತು. ಈ ಬಗ್ಗೆ ನಾನು ಧ್ವನಿ ಎತ್ತಿದ್ದೆ. ಇಂತಹ ಮತಗಳ್ಳತನವನ್ನು ರಾಜಕೀಯ ಇತಿಹಾಸದಲ್ಲಿ ನೋಡಿರಲಿಲ್ಲ. ಚುನಾವಣಾ ಮತಪಟ್ಟಿಯನ್ನು ನೋಡಲು ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರನ್ನು ಜಾಗೃತಿ ಮಾಡಿದ್ದು ಸಂತಸದ ವಿಷಯ ಎಂದರು. ಜಿ.ಎಸ್. ಪಾಟೀಲ ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಚುನಾವಣಾ ಸುಧಾರಣಾ ಕ್ರಮದ ಬಗ್ಗೆ 2018ರಲ್ಲಿ ವಿಧಾನಸಭೆ ಸ್ಪೀಕರ್ ಕಾಗೇರಿ ಚರ್ಚೆ ನಡೆಸಿದ್ದರು. ಚುನಾವಣೆಯಲ್ಲಿನ ದೇಣಿಗೆ, ಇವಿಎಂನಲ್ಲಿನ ಹ್ಯಾಕಿಂಗ್, ಮತಪಟ್ಟಿಗಳಲ್ಲಿ ತಪ್ಪು ಮಾಹಿತಿ ಬಗ್ಗೆ ಪ್ರಸ್ತಾಪಿಸಲಾಗಿತ್ತು.

19 ಲಕ್ಷ ಇವಿಎಂ ಮಷಿನ್ ಕಳ್ಳತನವಾಗಿದೆ ಅಂತ ಚುನಾವಣಾ ಆಯೋಗದಲ್ಲಿ ದಾಖಲಾತಿ ಇದೆ. ಇದರ ಬಗ್ಗೆ ಉತ್ತರಿಸಬೇಕಿದೆ ಎಂದರು. ಡಿ.ಆರ್. ಪಾಟೀಲ ಮಾತನಾಡಿ, ರಾಹುಲ್ ಗಾಂಧಿ ಅವರನ್ನು ಭಯಪಡಿಸುವ ಕೆಲಸವನ್ನು ಆಯೋಗ ಮಾಡುತ್ತಿದೆ. ವಿರೋಧ ಪಕ್ಷದ ನಾಯಕ ಪ್ರಶ್ನೆ ಮಾಡಿದರೆ ಅಫಿಡವಿಟ್‌ ಕೇಳಲಾಗುತ್ತದೆ. ಚುನಾವಣಾ ಆಯೋಗಕ್ಕೆ ಸಿದ್ದರಾಮಯ್ಯ ಸರ್ಕಾರ ಕಪಾಳಮೋಕ್ಷ ಮಾಡಿದ್ದಾರೆ. ಹೊಸ ಮತಪಟ್ಟಿ ಮಾಡಲು ನಾವು ಸಿದ್ಧತೆ ನಡೆಸಿದ್ದೇವೆ. ಸ್ಥಳೀಯ ಚುನಾವಣೆಗೆ ಇವಿಎಂ ಮಷಿನ್ ರದ್ದುಗೊಳಿಸಿ ಬ್ಯಾಲೆಟ್ ಪೇಪರ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.