ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆಗಳು 24*7 ತ್ರಿವಳಿ ತಜ್ಞ ವೈದ್ಯರ ಲಭ್ಯತೆ ಇದ್ದು ಪ್ರಸೂತಿ ಮತ್ತು ಫಿಜಿಶಿಯನ್ ತಜ್ಞರನ್ನು ಹೆಚ್ಚಾಗಿ ನೇಮಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕಡೂರು (ಅ.09): ರಾಜ್ಯದಲ್ಲಿ ತಾಯಂದಿರ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಬಾಣಂತಿಯರ ಆರೈಕೆ ಹೆಚ್ಚಿಸುವ ಸಲುವಾಗಿ ರಾಜ್ಯದ ಪ್ರತಿ ತಾಲೂಕು ಆಸ್ಪತ್ರೆಗಳು 24*7 ತ್ರಿವಳಿ ತಜ್ಞ ವೈದ್ಯರ ಲಭ್ಯತೆ ಇದ್ದು ಪ್ರಸೂತಿ ಮತ್ತು ಫಿಜಿಶಿಯನ್ ತಜ್ಞರನ್ನು ಹೆಚ್ಚಾಗಿ ನೇಮಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿ, ತಿಂಗಳಿಗೆ ಸರಾಸರಿ 30 ಅಥವಾ ಅದಕ್ಕಿಂತ ಹೆಚ್ಚಿನ ಹೆರಿಗೆ ಹೊರೆ ಹೊಂದಿದ ಸಮುದಾಯ ಆರೋಗ್ಯ ಕೇಂದ್ರಗಳ ಅನಸ್ತೇಶಿಯಾ, ಮಕ್ಕಳ ತಜ್ಞರು, ಪ್ರಸೂತಿ ತಜ್ಞರನ್ನು ತಾಲೂಕು ಆಸ್ಪತ್ರೆಗಳಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿತ್ತು.
ಅದರಂತೆ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರನ್ನು ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಂತೆ ಸರ್ಕಾರ ತೀರ್ಮಾನಿಸಿದ್ದು 24*7 ತ್ರಿವಳಿ ವೈದ್ಯರು ಕಾರ್ಯನಿರ್ವಹಿಸುತ್ತಾರೆ. ಇದರಿಂದ ಬಾಣಂತಿಯರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಲಾಗಿದೆ ಎಂದರು. ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಕಡೂರು ಮತ್ತು ಬೀರೂರಿನ ಸಾರ್ವಜನಿಕ ಆಸ್ಪತ್ರೆ ಉತ್ತಮ ಸೇವೆ ನೀಡಿ ಅಕ್ಕ-ಪಕ್ಕದ ಜಿಲ್ಲೆಗಳಲ್ಲಿ ಉತ್ತಮ ಹೆಸರುಗಳಿಸಿವೆ. ಕಡೂರು ಆಸ್ಪತ್ರೆಗೆ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ತಜ್ಞ ವೈದ್ಯರ ನೇಮಕ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಬೀರೂರು ಆಸ್ಪತ್ರೆಯನ್ನು ಸಾರ್ವಜನಿಕ ಆಸ್ಪತ್ರೆಯಾಗಿಯೇ ಮುಂದುವರಿಸಬೇಕಿದೆ.
ತಜ್ಞ ವೈದ್ಯರ ನೇಮಕವಾಗಬೇಕು
ಯಗಟಿ ಸಮುದಾಯ ಆರೋಗ್ಯ ಕೇಂದ್ರವಾಗಿದ್ದರೂ ಈವರೆಗೂ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕವಾಗಿಲ್ಲ. ಹಿರೇನಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೇಗೇರಿಸುವಂತೆ ಸದನದಲ್ಲಿ ಒತ್ತಾಯಿಸಲಾಗಿದೆ. ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ಇದ್ದರೂ ಕಾರ್ಯ ವಿಳಂಬವಾಗಿದೆ. ತುರ್ತಾಗಿ ತಜ್ಞ ವೈದ್ಯರ ನೇಮಕವಾಗಬೇಕು. ತಮ್ಮಗಳ ಹೆಸರಿನಲ್ಲಿ ರಾಜಕಾರಣದಲ್ಲಿ ಬೆಳೆದಿದ್ದು, ಅದೇ ರೀತಿ ತಮ್ಮ ಅವಧಿಯಲ್ಲಿ ಆರೋಗ್ಯ ಇಲಾಖೆ ತಾಲೂಕಿನ ಪ್ರಮುಖ ಆಸ್ಪತ್ರೆ ಅಪ್ಗ್ರೇಡ್ಗೆ ಮನವಿ ಮಾಡಿದರು.
ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತಾಯಿ ಮಕ್ಕಳ ಆಸ್ಪತ್ರೆ ಮಂಜೂರಾತಿಯ ಪ್ರಸ್ತಾವನೆಗೆ ಪರಿಶೀಲಿಸಿದರು. ಆಸ್ಪತ್ರೆ ಹೊರರೋಗಿಗಳ ವಿಭಾಗ ಮತ್ತು ಶುಚಿತ್ವ ಸೇರಿದಂತೆ ಉಗ್ರಾಣದ ವಿಭಾಗಕ್ಕೆ ಭೇಟಿ ನೀಡಿದರು. ಪುರಸಭಾ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸದಸ್ಯರಾದ ತೋಟದಮನೆ ಮೋಹನ್ಕುಮಾರ್, ಸೈಯಾದ್ಯಾಸೀನ್ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ಇಒ ಸಿ.ಆರ್. ಪ್ರವೀಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂಧಿ ಕಲ್ಲೇಶ್, ಬಾಸೂರು ಚಂದ್ರಮೌಳಿ, ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್, ಸಾರ್ವಜನಿಕ ಆಸ್ಪತ್ರೆ ಮೇಲ್ವಿಚಾರಕಿ ಡಾ. ಚಂದಾ, ಡಾ. ಗುರು ಮೂರ್ತಿ, ಡಾ. ಕಿರಣ್, ಡಾ. ಕೆ.ಎಂ. ದೀಪಕ್, ಡಾ. ಮೋಹನ್, ಚಂದ್ರೇಗೌಡ, ಯಗಟಿಗೋವಿಂದಪ್ಪ, ಕಂಸಾಗರ ರೇವಣ್ಣ, ಧರ್ಮರಾಜ್, ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತಿತರಿದ್ದರು.
