ಪರಿಸರ ಸಂರಕ್ಷಣೆ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಕೃಷಿಯಂತಹ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಸಂಸದ ಡಾ। ಕೆ.ಸುಧಾಕರ್‌ ಅವರನ್ನು ಈ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಆಹ್ವಾನಿಸಲಾಗಿದೆ.

ಚಿಕ್ಕಬಳ್ಳಾಪುರ (ಆ.24): ಜರ್ಮನಿಯ ಬಾನ್‌ನಲ್ಲಿ ಆ.24ರಿಂದ 29ರವರೆಗೆ ನಡೆಯಲಿರುವ ಪ್ರತಿಷ್ಠಿತ ಗ್ಲೋಬಲ್ ಚೇಂಜ್‌ಮೇಕರ್ ಅಕಾಡೆಮಿ ಫಾರ್ ಪಾರ್ಲಿಮೆಂಟೇರಿಯನ್ಸ್ (ಜಿ-ಸಿಎಪಿ)- 2025ರಲ್ಲಿ ಭಾಗವಹಿಸಲು ಸಂಸದ ಡಾ। ಕೆ.ಸುಧಾಕರ್‌ ಅವರಿಗೆ ಆಹ್ವಾನ ಬಂದಿದ್ದು, ಅವರು ಭಾಗವಹಿಸಲಿದ್ದಾರೆ.

ಯುನೈಟೆಡ್ ನೇಷನ್ಸ್ ಸಿಸ್ಟಮ್ ಸ್ಟಾಫ್ ಕಾಲೇಜು, ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (ಯುಎನ್‌ಸಿಸಿಡಿ) ಮತ್ತು ಜಿ20 ಗ್ಲೋಬಲ್ ಲ್ಯಾಂಡ್ ಇನಿಶಿಯೇಟಿವ್ ಸಂಯುಕ್ತಾಶ್ರಯದಲ್ಲಿ ಆಯೋಜನೆಯಾಗಿರುವ ಈ ಜಾಗತಿಕ ಸಮಾವೇಶವು ವಿವಿಧ ದೇಶಗಳ ಕಾನೂನು ರೂಪಿಸುವವರನ್ನು ಒಂದುಗೂಡಿಸಲಿದೆ. ಇಲ್ಲಿ ಸುಸ್ಥಿರ ಅಭಿವೃದ್ಧಿ, ಭೂ ರಕ್ಷಣೆ, ಹವಾಮಾನ ನಿರ್ವಹಣೆ ಮತ್ತು ನೀತಿಗಳ ಆವಿಷ್ಕಾರದಂತಹ ವಿಷಯಗಳ ಕುರಿತು ಚರ್ಚೆಯಾಗಲಿದೆ.

ಸಂಸದರ ಕೊಡುಗೆ ಪರಿಗಣನೆ: ಪರಿಸರ ಸಂರಕ್ಷಣೆ, ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ, ಗ್ರಾಮೀಣಾಭಿವೃದ್ಧಿ ಮತ್ತು ಸುಸ್ಥಿರ ಕೃಷಿಯಂತಹ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಸಂಸದ ಡಾ। ಕೆ.ಸುಧಾಕರ್‌ ಅವರನ್ನು ಈ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಡಾ। ಕೆ.ಸುಧಾಕರ್‌ ಈ ಆಹ್ವಾನ ಪಡೆದ ಭಾರತದ ಏಕೈಕ ಸಂಸತ್ ಸದಸ್ಯರಾಗಿದ್ದಾರೆ.

ಈ ಕುರಿತು ಸಂಸದ ಡಾ। ಕೆ.ಸುಧಾಕರ್ ಮಾತನಾಡಿ, ‘ಈ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು ಬಹಳ ಹೆಮ್ಮೆಯ ಸಂಗತಿ. ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ಹವಾಮಾನ ನಿರ್ವಹಣೆ, ಭೂ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ವಿಷಯಗಳಲ್ಲಿ ಮಹತ್ವಕಾಂಕ್ಷೆಯ ಗುರಿಗಳನ್ನು ಹೊಂದಿದೆ’ ಎಂದರು.

ಕೇಂದ್ರದ ಸಾಧನೆಗಳ ಮಾಹಿತಿ: ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆಯಿಂದ ಆರಂಭವಾಗಿ ಅರಣ್ಯೀಕರಣದ ಕಾರ್ಯಕ್ರಮಗಳವರೆಗೂ ನಮ್ಮ ಸರ್ಕಾರದ ಯಶಸ್ಸಿನ ಗಾಥೆಯನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ಬಂಜರು ಭೂಮಿ ಮತ್ತು ಹವಾಮಾನ ಬದಲಾವಣೆಯ ವಿರುದ್ಧ ಭಾರತದ ಹೋರಾಟವನ್ನು ಮತ್ತಷ್ಟು ಬಲಪಡಿಸಲು, ಜಾಗತಿಕ ಮಟ್ಟದಲ್ಲಿ ಅನುಷ್ಠಾನಗೊಳಿಸುತ್ತಿರುವ ಅತ್ಯುತ್ತಮ ಕ್ರಮಗಳನ್ನು ಕಲಿಯಲು ಇದು ಸಹಾಯಕವಾಗಿದೆ ಎಂದು ತಿಳಿಸಿದ್ದಾರೆ.

ಹವಾಮಾನ ನಿರ್ವಹಣೆ: ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್‌ಡಿಜಿ) ಕೊಡುಗೆ ನೀಡುವ ಪರಿಣಾಮಕಾರಿ ನೀತಿಗಳನ್ನು ರೂಪಿಸಲು ಸಂಸದರಿಗೆ ಗ್ಲೋಬಲ್ ಚೇಂಜ್‌ಮೇಕರ್ ಅಕಾಡೆಮಿ ನೆರವಾಗುತ್ತದೆ. ಈ ಕುರಿತು ಅಕಾಡೆಮಿಯು ಸಂಸದರಿಗೆ ಜ್ಞಾನ ಮತ್ತು ಸಾಧನಗಳ ಸಹಾಯ ಒದಗಿಸುತ್ತದೆ. ಪ್ರಮುಖವಾಗಿ ಭೂ ರಕ್ಷಣೆ, ಹವಾಮಾನ ನಿರ್ವಹಣೆ ಮತ್ತು ಜನ ಸಮುದಾಯಗಳು ಪರಿಸರಕ್ಕೆ ತಕ್ಕಂತೆ ಹೊಂದಿಕೊಂಡು ಬದುಕುವ ಬಗ್ಗೆ ಮಾಹಿತಿ ನೀಡುತ್ತದೆ.