ಶಿಸ್ತಿಗೆ ಮತ್ತೊಂದು ಹೆಸರು ಆರ್‌ಎಸ್‌ಎಸ್‌. ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂಸೇವಕರು ದುಡಿಯುತ್ತಿದ್ದಾರೆ. ಆರ್‌ಎಸ್‌ಎಸ್‌ ನಿಷೇಧ ಯಾರಿಂದಲೂ ಸಾಧ್ಯವಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ.

ವಿಜಯಪುರ (ಅ.12): ಪ್ರಕೃತಿ ವಿಕೋಪ, ರೈಲು ದುರಂತ, ಕೋವಿಡ್, ಅಪಘಾತಗಳಲ್ಲಿ ಸಹಾಯಕ್ಕೆ ನಿಲ್ಲೋದು ಆರ್‌ಎಸ್‌ಎಸ್‌. ರಾಷ್ಟ್ರಪ್ರೇಮ, ದೇಶಭಕ್ತಿ, ಶಿಸ್ತಿಗೆ ಮತ್ತೊಂದು ಹೆಸರು ಆರ್‌ಎಸ್‌ಎಸ್‌. ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಯಂಸೇವಕರು ದುಡಿಯುತ್ತಿದ್ದಾರೆ. ಆರ್‌ಎಸ್‌ಎಸ್‌ ನಿಷೇಧ ಯಾರಿಂದಲೂ ಸಾಧ್ಯವಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಿಡಿ ಕಾರಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಕಾರ್ಯಚಟುವಟಿಕೆ ನಿಷೇಧಕ್ಕೆ ಸಿಎಂಗೆ ಪ್ರಿಯಾಂಕ ಖರ್ಗೆ ಪತ್ರ ಬರೆದ ವಿಚಾರದ ಕುರಿತು ಟ್ವೀಟ್‌ ಮೂಲಕ ಶಾಸಕ ಯತ್ನಾಳ ಆಕ್ರೋಶ ಹೊರ ಹಾಕಿರುವ ಯತ್ನಾಳ ಇದು ಬೌದ್ಧಿಕ ದಿವಾಳಿತನ ಎಂದು ಪ್ರಿಯಾಂಕ ಖರ್ಗೆ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿದ್ದಾರೆ.

Add Asianetnews Kannada as a Preferred SourcegooglePreferred

ನಿಷೇಧ ಮಾಡೋದಿದ್ದರೆ ದೇಶದ್ರೋಹಿ ಎಸ್‌ಡಿಪಿಐ ಸಂಘಟನೆ ನಿಷೇಧಿಸಲಿ. ಅನ್ಯಕೋಮಿನ ಹಬ್ಬಗಳ ದಿನ ತಲವಾರ್‌ ಹಿಡಿದು, ಹೆಲ್ಮೆಟ್ ಧರಿಸದೆ ಓಡಾಡುವ ಪುಂಡರ ಹೆಡೆಮುರಿ ಕಟ್ಟಲಿ. ಬಕ್ರೀದ್ ಇತರೆ ಹಬ್ಬಗಳಂದು ನಡೆಯುವ ಪ್ರಾಣಿ ಬಲಿ ನಿಷೇಧಿಸಲಿ. ಗಣಿತ, ವಿಜ್ಞಾನ, ಆಂಗ್ಲ ಹೇಳಿಕೊಡದೆ, ಧರ್ಮದ ಬಗ್ಗೆ ತಪ್ಪು ಕಲ್ಪನೆ ನೀಡುವ ಮದರಸಾ ನಿಷೇಧಿಸಲಿ ಎಂದು ಆಗ್ರಹಿಸಿದರು. ಪ್ರಿಯಾಂಕ ಖರ್ಗೆ ರಾಜಕೀಯ ಪ್ರೇರಿತ ಹೇಳಿಕೆ ನಿಲ್ಲಿಸಲಿ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಗಮನ ಕೊಡಲಿ. ಮೊದಲು ಕಲಬುರಗಿ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಿ ಎಂದು ಯತ್ನಾಳ ಸವಾಲು ಹಾಕಿದ್ದಾರೆ.

ಜೆಸಿಬಿ ಸರ್ಕಾರ ಅಧಿಕಾರಕ್ಕೆ ಬರಲಿದೆ

ಸನಾತನ ಧರ್ಮ ಹಿಂದುಗಳ ಸ್ವಾಭಿಮಾನ ರಕ್ಷಣೆ ಮಾಡುವವರು ಮುಖ್ಯಮಂತ್ರಿ ಆಗಬೇಕಿದೆ ಎಂದು ಹೇಳಿದರು. 2028ರಿಂದ ಜೆಸಿಬಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಹಿಂದುಗಳ ಮೇಲೆ ದಬ್ಬಾಳಿಕೆ ಮಾಡುವವರನ್ನು ಜೆಸಿಬಿಗಳ ಮೂಲಕ ನಿರ್ನಾಮ ಮಾಡಲಾಗುವುದು ಎಂದು ಹರಿಹಾಯ್ದರು. ರಾಜ್ಯದಲ್ಲಿ ಜೆಸಿಬಿ ಸರ್ಕಾರ ಬಂದರೆ ಮೊದಲು ಪೊಲೀಸರಿಗೆ ಎಕೆ 47 ಗನ್ ನೀಡಲಾಗುವುದು. ನಮ್ಮ ಸರ್ಕಾರ ಬಂದರೆ ಡಿಜೆಗೆ ಹಣ ಕೊಡಬೇಕಿಲ್ಲ. ಮಸೀದಿ ಮುಂದೆ ಕುಣಿಯುವುದಕ್ಕೆ ನಿರ್ಬಂಧ ಇಲ್ಲ ಎಂದ ಅವರು, ಯತ್ನಾಳ್‌ಗಾಗಿ ಜನ ಸೇರುತ್ತಿಲ್ಲ ಬದಲಾಗಿ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಜನ ಸೇರುತ್ತಿದ್ದಾರೆ.

ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ 108, 110 ಸೀಟು ಅಲ್ಲ 150 ಸೀಟು ಗೆದ್ದು ಸರ್ಕಾರ ರಚನೆ ಮಾಡುತ್ತೇವೆ. ಕರ್ನಾಟಕದಲ್ಲಿ ಇನ್ಮುಂದೆ ನಾಟಕ ಮಾಡುವ ಕಂಪನಿಗಳು ಬಂದ್ ಆಗುತ್ತವೆ ಎಂದು ಕಿಡಿಕಾರಿದರು. ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ. ಆದರೆ, ಜೆಸಿಬಿ ಸರ್ಕಾರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವವರ ಆಟ ನಡೆಯುವುದಕ್ಕೆ ಬಿಡುವುದಿಲ್ಲ. ಔರಂಗಜೇಬನ ಕಟೌಟ್ ಹಾಕುವವರ ಆಟ 2028 ರಿಂದ ನಡೆಯುವುದಿಲ್ಲ. ಔರಂಗಜೇಬನ ಕಟೌಟ್ ಹಾಕಿದವರ ಮನೆಗಳ ಮೇಲೆ ಕೇಸರಿ ಧ್ವಜ ಹಾರುತ್ತದೆ. ಗಣಪತಿ ಮೆರವಣಿಗೆ ಮೇಲೆ ಕಲ್ಲು ಎಸೆದರೆ ಜೆಸಿಬಿ ಗರ್ಜನೆ ಮಾಡುತ್ತದೆ ಎಂದು ಹೇಳಿದರು.