ಮಾಲೂರಿನಲ್ಲಿ ಗಂಡಸರು ಇದ್ದ ಕಾರಣ ಎರಡು ಸಲ ಸೋಲಿಸಿದ್ದೇವೆ. 2028ಕ್ಕೆ ನಿನ್ನ 3 ಬಾರಿಗೆ ಸೋಲಿಸುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಅವರು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅವರಿಗೆ ಸವಾಲು ಹಾಕಿದರು.
ಮಾಲೂರು (ಸೆ.24): ಮಾಲೂರಿನಲ್ಲಿ ಗಂಡಸರು ಇದ್ದ ಕಾರಣ ಎರಡು ಸಲ ಸೋಲಿಸಿದ್ದೇವೆ. 2028ಕ್ಕೆ ನಿನ್ನ 3 ಬಾರಿಗೆ ಸೋಲಿಸುತ್ತೇನೆ ಎಂದು ಶಾಸಕ ಕೆ.ವೈ.ನಂಜೇಗೌಡ ಅವರು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ ಅವರಿಗೆ ಸವಾಲು ಹಾಕಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಭಯ ಪಡುವ ಮನುಷ್ಯನಾಗಿದ್ದರೆ ನಾಮ ಪತ್ರ ಸಲ್ಲಿಸುತ್ತಿರಲಿಲ್ಲ. 2001 ರಲ್ಲಿ ಹೊಸಕೋಟೆಯಲ್ಲಿ ಮಂಜುನಾಥ್ಗೆ ಏನಾಗಿತ್ತು ಅಂತ ಗೊತ್ತಿದೆ. ಶೂಟ್ ಅಟ್ ಸೈಟ್ ಆರ್ಡರ್, 6 ವರ್ಷ ಗಡಿಪಾರು ಆಗಿದ್ದನ್ನು ಹೊಸಕೋಟೆ ಜನ ಹೇಳುತ್ತಿದ್ದಾರೆ ಎಂದರು.
ಜಮೀನು ಒತ್ತುವರಿ ಆರೋಪ
ಹೊಸಕೋಟೆ ತಾಲೂಕಿನ ಕೋಡಿಹಳ್ಳಿ ಸರ್ವೇ 1 ಮತ್ತು 62 ಎಕರೆ ಯಾರು ಒತ್ತುವರಿ ಮಾಡಿಕೊಂಡಿದ್ದಾರೆ. ಮಾಲೂರಲ್ಲಿ ನನ್ನ ವಿರುದ್ಧ ನೇಪಾಳ ರೀತಿಯಲ್ಲಿ ದಂಗೆ ಏಳಲಿದ್ದಾರೆ ಎನ್ನುವ ಮಾಜಿ ಶಾಸಕರು ಒಂದು ಮಾತು ಅರ್ಥ ಮಾಡಿಕೊಳ್ಳಬೇಕು. ತಾವು ಜನ ಸೇವಕ ಹಾಗೂ ರೈತನ ಮಗ. ಕುಮಾರಣ್ಣಗೆ ಮಂಜುನಾಥ್ ಮೋಸ ಮಾಡಲಿಲ್ಲವೇ ಎಂದ ಶಾಸಕರು, ಮರು ಮತ ಎಣಿಕೆ ಬಳಿಕ ಆತನ ಜೊತೆ ಯಾರು ಇರಲ್ಲ ಎಂದರು.
ಹೊಸಕೋಟೆ-ಕೋಡಿಹಳ್ಳಿ ಭಾಷೆ ಮಾಲೂರು ಜನತೆಗೆ ಅರ್ಥವಾಗಿದೆ. ಮರುಎಣಿಕೆ ಆದೇಶಕ್ಕೆ ಸಂಭ್ರಮ ಆಚರಣೆ ಮಾಡಿದವರಿಗೆ ಹುಚ್ಚು ಹಿಡಿದಿದೆ ಎಂಬ ಪದ ಬಳಕೆ ಮಾಡಿದೆ. ಆದರೆ ನೀನು ನನ್ನನ್ನು ಏಕವಚನದಲ್ಲಿ ಸಂಬೋಧಿಸುವ ಜತೆಯಲ್ಲಿ ನನ್ನ ಮನೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದು ನಿನ್ನ ವ್ಯಕ್ತಿತ್ವ ತೋರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗಾಪುರ ಕಿಟ್ಟಿ, ರಾಮಮೂರ್ತಿ, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ, ರಾಜಪ್ಪ, ಆನೇಪುರ ಹನುಮಂತಪ್ಪ, ಮುನಿರಾಜು, ಮೈ.ನಾರಾಯಣಸ್ವಾಮಿ, ನಯೀಂ, ಶಬ್ಬೀರ್, ನವೀನ್ ಇನ್ನಿತರರು ಇದ್ದರು.
