ಉತ್ತರ ಭಾಗಕ್ಕೆ ಈಗಾಗಲೇ ಸಿಎಂ ಭೇಟಿ ನೀಡಿದ್ದಾರೆ. ಕೊಡಗು ಜಿಲ್ಲೆಯ ಬೆಳೆಗಾರರಿಗೂ ಮಳೆ ಹಾನಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಪ್ರತಿಕ್ರಿಯಿಸಿದ್ದಾರೆ.
ಮಡಿಕೇರಿ (ಅ.03): ಕೊಡಗು ಜಿಲ್ಲೆಯ ಬೆಳೆಗಾರರಿಗೂ ಮಳೆ ಹಾನಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಪ್ರತಿಕ್ರಿಯಿಸಿದ್ದಾರೆ. ಮಡಿಕೇರಿಯಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಿಂದ ಹಾನಿ ಉಂಟಾಗಿದೆ ಈ ಹಿನ್ನೆಲೆ ಉತ್ತರ ಭಾಗಕ್ಕೆ ಈಗಾಗಲೇ ಸಿಎಂ ಭೇಟಿ ನೀಡಿದ್ದಾರೆ. ಎರಡೂವರೆ ಸಾವಿರ ಕೋಟಿ ಮಳೆಯಿಂದ ಹಾನಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಪರಿಹಾರಕ್ಕಾಗಿ ಮೌಲ್ಯಮಾಪನ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲೂ ಕಾಫಿ ಬೆಳೆಗಾರರಿಗೆ ಮಳೆಯಿಂದ ನಷ್ಟ ಆಗಿದೆ. ಹೀಗಾಗಿ ಅಧಿಕಾರಿಗಳು ಸಮೀಕ್ಷೆ ನಡೆಸಲಿದ್ದು, ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದ್ದಾರೆ ಬಳಿಕ ಬೆಳೆಗಾರರಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗುತ್ತದೆ. ಕಾಫಿ ಬೆಳೆಗಾರರಿಗೆ ಪರಿಹಾರ ಒದಗಿಸಲು ಕೇಂದ್ರ ಸರಕಾರ ಹಾಗೂ ಕಾಫಿ ಬೋರ್ಡ್ ಕೂಡ ಸಹಕಾರ ನೀಡಬೇಕು ಎಂದು ಮಡಿಕೇರಿಯಲ್ಲಿ ಸಚಿವ ಬೋಸರಾಜು ಹೇಳಿದರು.
ಸಮೀಕ್ಷೆಯಿಂದ ಯಾವುದೇ ತೊಂದರೆ ಇಲ್ಲ
ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಿಂದ ಯಾವುದೇ ಜಾತಿ ಧರ್ಮಕ್ಕೆ ತೊಂದರೆ ಕೊಡುವ ಪ್ರಶ್ನೆ ಇಲ್ಲ. ಇದು ಜನರ ಆತ್ಮಸಾಕ್ಷಿಗೆ ಬಿಟ್ಟಿರುವ ವಿಷಯ ಎಂದು ಹೇಳಿದ್ದಾರೆ. ರಾಜ್ಯದ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಬೇಕಾಗಿದೆ. ಅದರ ಆಧಾರದಲ್ಲಿ ಯಾವ ಯಾವ ಸಮುದಾಯಕ್ಕೆ ಏನು ಯೋಜನೆ ರೂಪಿಸಬೇಕೆಂದು ಚಿಂತಿಸಬೇಕಾಗಿದೆ. ಇದು ಸರ್ಕಾರದ ಉದ್ದೇಶ. ಅದಕ್ಕಾಗಿ ಈ ಸಮೀಕ್ಷೆ ಅನುಕೂಲ ಆಗಲಿದೆ. ಸಮೀಕ್ಷೆಯಲ್ಲಿ 1.75 ಲಕ್ಷ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮೀಕ್ಷೆಯಿಂದ ರಾಜ್ಯದ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಅನುಕೂಲ ಆಗಲಿದೆ. ಸಮೀಕ್ಷೆ ಸಂದರ್ಭ ಇಂತಹದ್ದೇ ಜಾತಿ, ಧರ್ಮ ನಮೂದಿಸಿ ಅಂತ ಸರ್ಕಾರ ಹೇಳಿಲ್ಲ. ಅದು ಪ್ರತಿಯೊಬ್ಬರ ಮನಸ್ಸಿಗೆ ಬಿಟ್ಟಿದ್ದು. ಅವರ ಮನಸ್ಸಿನಲ್ಲಿರುವ ಜಾತಿ ಧರ್ಮಗಳನ್ನು ದಾಖಲಿಸುತ್ತಾರೆ. ಬಿಜೆಪಿಯವರಿಗೆ ಗೊಂದಲ ಸೃಷ್ಟಿವುದೇ ಕೆಲಸ. ಅಭಿವೃದ್ಧಿ ಕೆಲಸಗಳನ್ನು ಹಾಳು ಮಾಡುವುದೇ ಅವರ ಉದ್ದೇಶ. ಜನರು ಈಗ ಬುದ್ಧಿವಂತರಿದ್ದಾರೆ. ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನರು ಸರಿಯಾದ ಉತ್ತರ ಕೊಡುತ್ತಾರೆ ಎಂದರು.
