ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ನವೆಂಬರ್ನಲ್ಲಿ ಸಂಪುಟ ಪುನರ್ ರಚನೆಯಾಗುವ ಸುಳಿವು ನೀಡಿದ್ದು, ಶೇ.50ರಷ್ಟು ಸಚಿವರು ಬದಲಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಇದೇ ವೇಳೆ, ದೆಹಲಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಮಿತ್ ಶಾ ಭೇಟಿಯ ವದಂತಿಯನ್ನು ತಳ್ಳಿಹಾಕಿದ್ದಾರೆ.
ನವದೆಹಲಿ: ರಾಜ್ಯದ ರಾಜಕೀಯದಲ್ಲಿ ಹಲವು ಪ್ರಮುಖ ಬೆಳವಣಿಗೆಗಳು ದಾಖಲಾಗಿದ್ದು, ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಒಂದು ರೌಂಡ್ ದೆಹಲಿಗೆ ಹೋಗಿ ಬಂದಿದ್ದಾರೆ. ಇದೀಗ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಬಗ್ಗೆ ಮುಖ್ಯಸಚೇತಕ ಸಲೀಂ ಅಹಮದ್ ಅವರು ಮಾಹಿತಿ ಬಹಿರಂಗಪಡಿಸಿದ್ದಾರೆ.
ಶೀಘ್ರದಲ್ಲೇ ಸಂಪುಟ ಪುನರ್ ರಚನೆ
ವಿಧಾನಪರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ಅವರು ನವದೆಹಲಿಯಲ್ಲಿ ಮಾತನಾಡಿ, ನವೆಂಬರ್ ತಿಂಗಳಲ್ಲಿ ಸಂಪುಟ ಪುನರ್ ರಚನೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು. ಒಟ್ಟು ಶೇ.50ರಷ್ಟು ಸಚಿವರು ಬದಲಾವಣೆಯಾಗುವ ಸಾಧ್ಯತೆ ಇದೆ. ಸಚಿವ ಸ್ಥಾನದಿಂದ ಹೊರಬರುವವರಿಗೆ ಪಕ್ಷದ ಸಂಘಟನೆ ಕೆಲಸ ವಹಿಸಲಾಗುತ್ತದೆ ಎಂದು ಅವರು ಹೇಳಿದರು. ಮುಂದುವರೆದು ಮಾತನಾಡಿ ಎರಡು ದಶಕಗಳಿಂದ ಕಿತ್ತೂರು ಕರ್ನಾಟಕ ಭಾಗದಲ್ಲಿ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈ ಬಾರಿ ನನಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಮತಾಂತರ ವಿವಾದ – ರಾಜಣ್ಣ ಹೇಳಿಕೆ ಕುರಿತು ಪ್ರತಿಕ್ರಿಯೆ
ಮತಾಂತರ ಕುರಿತಾಗಿ ಮಾಜಿ ಸಚಿವ ಕೆ.ಎನ್. ರಾಜಣ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ ಸಲೀಂ ಅಹಮದ್ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ, ಅದು ಪಕ್ಷ ಅಥವಾ ಸರ್ಕಾರದ ಅಭಿಪ್ರಾಯವಲ್ಲ ಎಂದು ಸ್ಪಷ್ಟಪಡಿಸಿದರು. ರಾಜಣ್ಣ ಅವರು “ಜಾತಿಗಳಿಗೆ ಕ್ರಿಶ್ಚಿಯನ್ ಧರ್ಮದ ಹೆಸರು ಸೇರಿಸುವುದರಿಂದ ಮತಾಂತರಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದ್ದರು.
ಅಮಿತ್ ಶಾ ಭೇಟಿಯ ವದಂತಿ ತಳ್ಳಿ ಹಾಕಿದ ಡಿಕೆಶಿ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ನಾನು ಅಮಿತ್ ಶಾ ಅವರನ್ನು ಭೇಟಿಯಾಗಿಲ್ಲ. ಕೆಲವರಿಗೆ ನನ್ನ ವಿಷಯ ನೆನಪಿಸಿಕೊಳ್ಳದಿದ್ದರೆ ನಿದ್ದೆ ಬರುವುದಿಲ್ಲವಂತೆ. ನಾನು ಅಮಿತ್ ಶಾ ಅವರನ್ನು ಭೇಟಿಯಾಗಲು ತಲೆ ಕೆಟ್ಟಿದ್ಯಾ? ಎಂದು ಹೇಳಿದರು. ಇದೇ ವೇಳೆ ಅವರು ಮಾಜಿ ಸಚಿವ ರಾಜಣ್ಣ ಅವರ ಮತಾಂತರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಮೇಕೆದಾಟು ಹಾಗೂ ಆಲಮಟ್ಟಿ ವಿಚಾರ
ಮೇಕೆದಾಟು ಪ್ರಕರಣದ ವಿಚಾರಣೆ ನಾಳೆಗೆ ನಿಗದಿಯಾಗಿದ್ದರೂ, ಸಂವಿಧಾನಿಕ ಪೀಠ ವಿಚಾರಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅದು ಮುಂದೂಡಿಕೆಯಾಗಿದೆ. ಡಿಕೆಶಿ ಈ ಕುರಿತು ಪ್ರತಿಕ್ರಿಯೆ ನೀಡುತ್ತಾ, ನಮ್ಮ ಕೇಸ್ ಬಂದಿತ್ತು, ಮುಂದೆ ಹೋಗಿದೆ ಎಂದರು. ಆಲಮಟ್ಟಿ ಜಲಾಶಯದ ಎತ್ತರ ಕುರಿತಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ ಈ ವಿಷಯಕ್ಕೆ ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರು ಉತ್ತರ ಕೊಡಬೇಕು. ಬೊಮ್ಮಾಯಿ, ಶೆಟ್ಟರ್, ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಇವರುಗಳೇ ಇದರ ಕುರಿತು ಮಾತನಾಡಬೇಕು, ಅವರು ಸ್ಪಷ್ಟನೆ ನೀಡಬೇಕು ಎಂದು ಹೇಳಿದರು.
ದೆಹಲಿಯಲ್ಲಿ ಕೆ.ಸಿ. ವೇಣುಗೋಪಾಲ್ ಜೊತೆ ಮಾತುಕತೆ
ದೆಹಲಿಯ ಇಂದಿರಾ ಭವನದಲ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಮುಖಂಡ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿಯಾಗಿ ಅರ್ಧಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು. ಈ ಭೇಟಿ ಹಿನ್ನೆಲೆ, ಸಂಪುಟ ಬದಲಾವಣೆ ಹಾಗೂ ಮುಂದಿನ ರಾಜಕೀಯ ತಂತ್ರದ ಕುರಿತು ಚರ್ಚೆಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
