ತಾಯಿ ಹಾಸನಾಂಬ ದೇವಿಯು ರಾಜ್ಯದ ಸುಭಿಕ್ಷೆ ಜೊತೆಗೆ ನಾಡಿನ ಜನತೆಗೆ ಶಾಂತಿ ನೆಮ್ಮದಿ ಕರುಣಿಸಲಿ. ಮುಂದಿನ ವರ್ಷ ಯಾವುದೇ ಹಾನಿಯಾಗದಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಾಸನ (ಅ.16): ತಾಯಿ ಹಾಸನಾಂಬ ದೇವಿಯು ರಾಜ್ಯದ ಸುಭಿಕ್ಷೆ ಜೊತೆಗೆ ನಾಡಿನ ಜನತೆಗೆ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥನೆ ಮಾಡಿರುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಶ್ರೀ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಇಂದು ಹಾಸನಾಂಬ ದೇವಿ ಮತ್ತು ಸಿದ್ದೇಶ್ವರಸ್ವಾಮಿ ದರ್ಶನ ಪಡೆದಿದ್ದು, ಉತ್ತಮ ಮಳೆ ಬೆಳೆಯಾಗಲಿ.

Add Asianetnews Kannada as a Preferred SourcegooglePreferred

ರೈತರು ಸಮೃದ್ಧಿಯಾಗಿರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ. ರೈತರು ಬೆಳೆದ ಬೆಳೆ ಕೈಗೆ ಸಿಗಬೇಕು. ಮುಂದಿನ ವರ್ಷ ಯಾವುದೇ ಹಾನಿಯಾಗದಂತೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು. ಅದೃಷ್ಟವಶಾತ್‌ ಉತ್ತಮ ಮಳೆಯಾಗಿದೆ. ಜಲಾಶಯಗಳು ತುಂಬಿವೆ. ಕೆಲವು ಕಡೆ ಪ್ರವಾಹ ಬಂದು ಬೆಳೆ ನಷ್ಟವಾಗಿದೆ. ರೈತರಿಗೆ ಸಹಾಯ ಮಾಡಲು ಎನ್.ಡಿ.ಆರ್.ಎಫ್‌ ಹಾಗೂ ಸರ್ಕಾರದ ವತಿಯಿಂದ ಒಂದು ಹೆಕ್ಟೇರ್‌ಗೆ ಖುಷ್ಕಿ ಬೆಳೆಗೆ ₹17000, ನೀರಾವರಿ ಬೆಳೆಗೆ ₹25500, ಬಹು ಬೆಳೆಗೆ ₹31000 ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದರು.

ದೇವಿ ದರ್ಶನಕ್ಕೆ ನಾಡಿನಾದ್ಯಂತ ಜನರು ಆಗಮಿಸುತ್ತಿದ್ದಾರೆ. ಪ್ರತಿಯೊಬ್ಬರು ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆಯಬೇಕು. ಯಾರು ನಿರಾಸೆಯಿಂದ ಹೋಗಬಾರದು. ಸಮಾಜದಲ್ಲಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಬಾಳಲಿ, ಯಾರನ್ನು ದ್ವೇಷಿಸಬಾರದು. ಎಲ್ಲಾ ಧರ್ಮಗಳಲ್ಲಿಯೂ ಕೂಡ ಇದನ್ನೇ ಹೇಳಿದೆ. ಸರ್ವಜನಾಂಗದ ಶಾಂತಿಯ ತೋಟದಂತೆ ಬಾಳಲು ಎಲ್ಲರಿಗೂ ಬುದ್ದಿ ನೀಡಲಿ. ಏಳು ಕೋಟಿ ಜನರಿಗೂ ಒಳ್ಳೆಯದಾಗಲಿ ಎಂದು ತಿಳಿಸಿದರು.

3-4 ಗಂಟೆ ಸಮಯ

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾತನಾಡಿ, ಬುಧವಾರ ಬೆಳಗ್ಗೆ 5 ಗಂಟೆಯವರೆಗೆ 884507 ಜನರು ದೇವಿ ದರ್ಶನ ಪಡೆದಿದ್ದಾರೆ. ದೇವಿ ದರ್ಶನಕ್ಕೆ ಆಗಮಿಸುತ್ತಿರುವವರ ಸಂಖ್ಯೆ ದ್ವಿಗುಣವಾಗಿರುವುದರಿಂದ ದರ್ಶನಕ್ಕೆ ಸರಾಸರಿ 3-4 ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಎಲ್ಲರಿಗೂ ಸುಗಮವಾಗಿ ದರ್ಶನ ಆಗುತ್ತಿದೆ ಎಂದು ತಿಳಿಸಿದರು. ಸಚಿವರಾದ ರಾಮಲಿಂಗಾರೆಡ್ಡಿ, ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ ಪಟೇಲ್, ಜಿಲ್ಲಾಧಿಕಾರಿ ಲತಾಕುಮಾರಿ ಇದ್ದರು.