ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು 

ಮಂಗಳೂರು (ಜೂ.15): ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯ ಉಳ್ಳಾಲ ಬೈಲಿನ ಮನೆಯೊಂದಕ್ಕೆ 7 ಲಕ್ಷ ರೂಪಾಯಿ ಕರೆಂಟ್‌ ಬಿಲ್‌ ಪಾವತಿಸುವಂತೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಗಮಿತ (ಮೆಸ್ಕಾಂ) ಸಿಬ್ಬಂದಿ ಬಿಲ್‌ ಕೊಟ್ಟು ಹೋಗಿದ್ದಾರೆ. ಇನ್ನು ತಿಂಗಳ ಕರೆಂಟ್‌ ಬಿಲ್‌ ಹಣದಲ್ಲಿ ಬಡವರು ಮನೆಯಲ್ಲೇ ಕಟ್ಟಿಕೊಳ್ಳಬಹುದಿತ್ತು ಎಂದು ಆಲೋಚನೆ ಮಾಡಿದ್ದಾರೆ.

ಮಂಗಳೂರು ನಗರದ ಹೊರವಲಯ ಉಳ್ಳಾಲ ಬೈಲಿನ ಸದಾಶಿವ ಆಚಾರ್ಯ ಎಂಬರಿಗೆ ಬರೋಬ್ಬರಿ 7.71 ಲಕ್ಷ ರೂ. ಕರೆಂಟ್‌ ಬಿಲ್‌ ನೀಡಲಾಗಿದೆ. ಮೆಸ್ಕಾಂ ಸಿಬ್ಬಂದಿ ಬುಧವಾರ ಮನೆಗೆ ಆಗಮಿಸಿ ಮೀಟರ್ ರೀಡ್ ಮಾಡಿ 7,71,072 ರೂ.‌ ಬಿಲ್ ಕೊಟ್ಟು ಹೋಗಿದ್ದಾರೆ. ಇನ್ನು ಮನೆತ ಮಾಲೀಕರು ಮೀಟರ್‌ ರೀಡರ್‌ ಮಾಡಿ ಬಿಲ್‌ ನೀಡಿದ ತಕ್ಷಣವೇ ಹಣವನ್ನು ನೋಡಿ ಬೆಸ್ತು ಬಿದ್ದಿದ್ದಾರೆ. ಕೂಡಲೇ ಮೀಟರ್‌ ರೀಡ್‌ ಮಾಡಿದ ಮೆಸ್ಕಾಂ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದರೆ, ನೀವು ಉಪಯೋಗಿಸಿದ ಕರೆಂಟ್‌ ಬಿಲ್‌ ನೀಡಿದ್ದೇವೆ. ಕಟ್ಟುವುದು ನಿಮ್ಮ ಜವಾಬ್ದಾರಿ ಎಂದು ಉಡಾಫೆ ವರ್ತನೆ ತೋರಿ ಅಲ್ಲಿಂದ ಪರಾರಿ ಆಗಿದ್ದಾನೆ. 

ಗೃಹಜ್ಯೋತಿ ಜಾರಿಗೂ ಮುನ್ನ ವಿದ್ಯುತ್‌ ಬೆಲೆ ಏರಿಕೆ ಶಾಕ್! ಬಿಲ್‌ ದುಪ್ಪಟ್ಟು ಬರಲು ಇಲ್ಲಿದೆ ಕಾರಣ

ಮೀಟರ್‌ ರೀಡರ್‌ನಿಂದ ಉಡಾಫೆ ವರ್ತನೆ: ಮನೆ‌ ಮಾಲೀಕ ಸದಾಶಿವ ಆಚಾರ್ಯ ಈ ಬಗ್ಗೆ ಮೀಟರ್ ರೀಡರ್ ಬಳಿ ಕೇಳಿದ್ದಕ್ಕೆ ಉಡಾಫೆ ವರ್ತನೆ ತೋರಿದ್ದಾನೆ. ಒಟ್ಟು ಒಂದು ತಿಂಗಳಲ್ಲಿ 99,338 ಯೂನಿಟ್ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ವಿದ್ಯುತ್‌ ಬಿಲ್‌ನಲ್ಲಿ ನಮೂದು ಮಾಡಲಾಗಿದೆ. ಇನ್ನು ನಮ್ಮ ಮನೆಗೆ ಪ್ರತೀ ತಿಂಗಳು 3 ಸಾವಿರ ಬಿಲ್ ಬರುತ್ತಿತ್ತು. ಆದರೆ, ಈಗ ಏಳು ಲಕ್ಷ ರೂ. ಬಿಲ್‌ ಬಂದಿರುವುದನ್ನು ನೋಡಿ ನನಗೆ ಅಚ್ಚರಿಯಾಗಿದೆ ಎಂದು ಸದಾಶಿವ ಆಚಾರ್ಯರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

7 ಲಕ್ಷ ರೂ.ಗೆ ಮನೆಯನ್ನೇ ಕಟ್ಟಿಕೊಳ್ಳಬಹುದು: ನಮ್ಮ ಮನೆ ಕಟ್ಟಲು ಉಪಯೋಗಿಸಿದ ಹಣದ ಶೇ.30 ಹಣವನ್ನು ಕೇವಲ ಒಂದು ತಿಂಗಳ ವಿದ್ಯುತ್‌ ಬಿಲ್‌ಗಾಗಿ ಪಾವತಿ ಮಾಡಬೇಕಿದೆ ಎಂದು ಹೇಳಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿ ಬಡವರು 7 ಲಕ್ಷ ರೂ.ನಲ್ಲಿ ಸುಸಜ್ಜಿತ ಮನೆಯನ್ನೇ ನಿರ್ಮಿಸಿಕೊಂಡು ವಾಸವಿರಬಹುದು. ಅಂತಹದ್ದರಲ್ಲಿ ನಮ್ಮ ಮನೆಗೆ ಒಂದು ತಿಂಗಳ ಕರೆಂಟ್‌ ಬಿಲ್‌ ಇಷ್ಟು ಬಂದಿದೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಮೆಸ್ಕಾಂ ಸಿಬ್ಬಂದಿಯನ್ನು ವಿಚಾರಣೆ ಮಾಡಿದರೂ ಯಾರೊಬ್ಬರೂ ಸಮರ್ಪಕ ಉತ್ತರ ನೀಡುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.

ಕರೆಂಟ್ ಕದನ: ದರ ಏರಿಸಿದ್ದು ನಾವಲ್ಲ -ಬೊಮ್ಮಾಯಿ, ಬಿಜೆಪಿ ಏರಿಕೆ ಮಾಡಿದ್ದಕ್ಕೆ ದಾಖಲೆ ಇದೆ - ಸರ್ಕಾರ!

ವಿದ್ಯುತ್‌ ಸರಿಪಡಿಸಿಕೊಂಡ ಮೆಸ್ಕಾಂ ಸಿಬ್ಬಂದಿ: ಇನ್ನು ಮೆಸ್ಕಾಂನಿಂದ ಮೀಟರ್‌ ರೀಡಿಂಗ್‌ ಮಾಡಲು ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ, ಇವರು ಸಮರ್ಪಕವಾಗಿ ಮೀಟರ್‌ ರೀಡಿಂಗ್‌ ಮಾಡುವುದಿಲ್ಲ ಎಂಬ ದೂರುಗಳು ಕೂಡ ಕೇಳಿಬಂದಿದ್ದರು. ಈ ಹಿನ್ನೆಲೆಯಲ್ಲಿ ಲಕ್ಷಾಂತರ ರೂ, ವಿದ್ಯುತ್‌ ಬಿಲ್‌ ನೋಡಿ ಗಾಬರಿಯಾದ ಸದಾಶಿವ ಆಚಾರ್ಯ ಅವರು, ಮೆಸ್ಕಾಂ ಉಳ್ಳಾಲ ಉಪವಿಭಾಗ ಕಚೇರಿ ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನಂತರ ಪರಿಶೀಲನೆ ಮಾಡಿದ ಮೆಸ್ಕಾಂ ಅಧಿಕಾರಿಗಳು ಬಳಿಕ ವಿದ್ಯುತ್ ಬಿಲ್ ರೀಡರ್ ಯಡವಟ್ಟು ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ. ಗುತ್ತಿಗೆ ಏಜೆನ್ಸಿಗಳ ಮುಖಾಂತರ ವಿದ್ಯುತ್ ಬಿಲ್ ರೀಡಿಂಗ್ ಮಾಡುವಾಗ ತಪ್ಪಾಗಿದೆ ಎಂದಿದ್ದಾರೆ.  ಕೊನೆಗೆ ವಿದ್ಯುತ್‌ ಮೀಟರ್‌ ರೀಡಿಂಗ್‌ ಮಾಡಿ ನೋಡಿದಾಗ 2,833 ರೂ. ವಿದ್ಯುತ್ ಬಿಲ್ ಬಂದಿತ್ತು. ಮತ್ತೊಮ್ಮೆ ಸರಿಯಾದ ವಿದ್ಯುತ್‌ ಬಿಲ್‌ ಪಾವತಿಸುವಂತೆ ಮೆಸ್ಕಾಂ ಸಿಬ್ಬಂದಿ ಮನವಿ ಮಾಡಿದ್ದಾರೆ.