ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಮೋರಿ ಸ್ವಚ್ಛತೆ ವಿಚಾರವಾಗಿ ಸ್ಥಳೀಯರೊಂದಿಗೆ ಜಗಳವಾಡಿದ ವಕೀಲ ಜಗದೀಶ್ ಮತ್ತು ಅವರ ಮಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.  ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ  ದೂರು ದಾಖಲು ಮಾಡಲಾಗಿದೆ.

ಬೆಂಗಳೂರು: ಮೋರಿ (ಚರಂಡಿ) ಸ್ವಚ್ಛತೆಗೆ ಸಂಬಂಧಿಸಿದ ವಿಚಾರದಲ್ಲಿ ಸ್ಥಳೀಯ ವ್ಯಕ್ತಿಯೊಂದಿಗೆ ಜಗಳವಾಡಿ ಕಿರಿಕ್ ಮಾಡಿದ ಪ್ರಕರಣದಲ್ಲಿ ವಕೀಲ ಜಗದೀಶ್ ಮತ್ತು ಅವರ ಪುತ್ರ ಆರ್ಯನ್ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಅಧಿಕೃತ ದೂರು ದಾಖಲೆಯಾಗಿದೆ.

ಪುತ್ರ ಆರ್ಯನ್ ಕೂಡ ಕಿರಿಕ್

ಸ್ಥಳೀಯ ನಿವಾಸಿ ಹನುಮಂತಯ್ಯ ಅವರು ತಮ್ಮ ಮನೆಯಿಂದ ಹತ್ತಿರದ ಪ್ರದೇಶದಲ್ಲಿ ಮಗನೊಂದಿಗೆ ಮೋರಿ ಶುದ್ಧೀಕರಣದ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ವಕೀಲ ಜಗದೀಶ್ ಮತ್ತು ಅವರ ಪುತ್ರ ಆರ್ಯನ್ ಸ್ಥಳಕ್ಕೆ ಬಂದು ಹನುಮಂತಯ್ಯ ಮತ್ತು ಅವರ ಮಗನಿಗೆ ಅಡ್ಡಿ ಪಡಿಸಿ, ಮೋರಿ ಕಸ ತೆರವುಗೊಳಿಸದಂತೆ ಕಿರಿಕ್ ಮಾಡಿದರು ಎಂದು ದೂರುದಾರರು ತಿಳಿಸಿದ್ದಾರೆ.

ಅವಾಚ್ಯ ಶಬ್ಧಗಳಿಂದ ನಿಂದನೆ

ಘಟನೆ ವೇಳೆ ಮಾತಿಗೆ ಮಾತು ಬೆಳೆದು ವಾಗ್ವಾದ ಉಂಟಾಯಿತು. ಬಳಿಕ ಆರೋಪಿಗಳು ಹನುಮಂತಯ್ಯ ಹಾಗೂ ಅವರ ಮಗನೊಂದಿಗೆ ಎಳೆದಾಡಿ, ಹಲ್ಲೆ ನಡೆಸಿ ಮತ್ತು ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಹಲ್ಲೆಯಲ್ಲಿ ಹನುಮಂತಯ್ಯ ಅವರ ಬಲಗಾಲಿನ ಬೆರಳಿಗೆ ಗಾಯವಾದದ್ದು ಕೂಡ ದೂರುಪತ್ರದಲ್ಲಿ ವಿವರಿಸಲಾಗಿದೆ.

ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಘಟನೆಯ ನಂತರ ಹನುಮಂತಯ್ಯ ಅವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ವಕೀಲ ಜಗದೀಶ್ ಮತ್ತು ಅವರ ಪುತ್ರ ಆರ್ಯನ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆ

ಸಮೀಪದ ಪ್ರದೇಶದಲ್ಲಿ ಈ ಘಟನೆ ಚರ್ಚೆಗೆ ಗ್ರಾಸವಾಗಿದ್ದು, ವಕೀಲರೇ ಸ್ಥಳೀಯರೊಂದಿಗೆ ಇಂತಹ ವರ್ತನೆ ತೋರಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಪೊಲೀಸರು ದೂರು ಆಧರಿಸಿ ತನಿಖೆ ಕೈಗೊಂಡಿದ್ದು, ಮುಂದಿನ ಹಂತದಲ್ಲಿ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.