ಲೈಂಗಿಕ ಸಮ್ಮತಿ ವಯಸ್ಸನ್ನು 18 ರಿಂದ 16ಕ್ಕೆ ಇಳಿಸುವ ಕುರಿತು ಭಾರಿ ಚರ್ಚೆಯಾಗುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್ಗೆ ತನ್ನ ಅಭಿಪ್ರಾಯ ಹೇಳಿದೆ. ಇಷ್ಟೇ ಅಲ್ಲ ಕೆಲ ಆತಂಕ ವ್ಯಕ್ತಪಡಿಸಿದೆ.
ನವದೆಹಲಿ (ಆ.08) ಸುಪ್ರೀಂ ಕೋರ್ಟ್ನಲ್ಲಿ ದೇಶದ ಲೈಂಗಿಕ ಸಮ್ಮತಿ ವಯಸ್ಸಿನ ಕುರಿತು ವಾದ ಪ್ರತಿವಾದಗಳು ನಡೆಯುತ್ತಿದೆ. ಈ ವಿಚಾಕದ ಕುರಿತು ಕೇಂದ್ರ ಸರ್ಕಾರ ಸ್ಪಷ್ಟ ನಿಲುವ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಆತಂಕ ವ್ಯಕ್ತಪಡಿಸಿದೆ. ಭಾರತದಲ್ಲಿ ಲೈಂಗಿಕ ಸಮ್ಮತಿ ವಯಸ್ಸು 18 ರಿಂದ 16ಕ್ಕೆ ಇಳಿಕೆ ಮಾಡಬೇಕು ಅನ್ನೋ ವಾದವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಸುಪ್ರೀಂ ಕೋರ್ಟ್ಗೆ ಕುರಿತು ನಿಲುವ ಸ್ಪಷ್ಟಪಡಿಸಿರುವ ಕೇಂದ್ರ ಸರ್ಕಾರ ಇದು ಅತ್ಯಂತ ಅಪಾಯಾಕಾರಿ ಎಂದಿದೆ.
ಸಾಲಿಸಿಟರ್ ಜನರಲ್ ಐಶ್ವರ್ಯ ವಾದ
ಉಭಯ ಸಮ್ಮತಿಯ ಲೈಂಗಿಕ ಕ್ರಿಯೆಗೆ ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸುವುದನ್ನು ಕೇಂದ್ರ ಸರ್ಕಾರ ವಿರೋಧಿಸಿದೆ. ಸುಪ್ರೀಂ ಕೋರ್ಟ್ನಲ್ಲಿ ಈ ವಿಷಯದ ಬಗ್ಗೆ ತೀವ್ರವಾಗಿ ವಾದಿಸಿದ ಕೇಂದ್ರ, ಪ್ರಕರಣದ ಸ್ವರೂಪಕ್ಕೆ ಅನುಗುಣವಾಗಿ ನ್ಯಾಯಾಲಯವು ಸ್ವತಂತ್ರ ನಿಲುವು ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರು ಕೇಂದ್ರ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.
ಮಕ್ಕಳ ಹಕ್ಕುಗಳ ಕಾನೂನು ದುರ್ಬಲ
‘ಉಭಯ ಸಮ್ಮತಿಯ ಲೈಂಗಿಕ ಕ್ರಿಯೆಯ ವಯಸ್ಸನ್ನು 18ಕ್ಕೆ ನಿಗದಿಪಡಿಸುವಾಗ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗಿದೆ’ ಎಂದು ಐಶ್ವರ್ಯ ಭಾಟಿ ತಿಳಿಸಿದರು. ಅಪ್ರಾಪ್ತ ವಯಸ್ಕರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವುದು ಇದರ ಉದ್ದೇಶ. ಹದಿಹರೆಯದವರ ಪ್ರೇಮ ಸಂಬಂಧಗಳಿಗಾಗಿ ಮಕ್ಕಳ ಹಕ್ಕುಗಳ ಕಾನೂನುಗಳನ್ನು ದುರ್ಬಲಗೊಳಿಸಬಾರದು ಎಂದು ಭಾಟಿ ನ್ಯಾಯಾಲಯವನ್ನು ಕೋರಿದರು. ವಯಸ್ಸಿನ ಮಿತಿಯಲ್ಲಿ ರಿಯಾಯಿತಿ ನೀಡುವುದು ಅಪಾಯಕಾರಿ ಎಂದು ಕೇಂದ್ರವು ನ್ಯಾಯಾಲಯದಲ್ಲಿ ವಾದಿಸಿತು. ಈ ಕ್ರಮವು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಮತ್ತಷ್ಟು ಅವಕಾಶ ನೀಡುತ್ತದೆ ಎಂದು ಕೇಂದ್ರ ಸೇರಿಸಿತು.
ಪೋಕ್ಸೋ ಕಾಯ್ದೆ ದುರ್ಬಲಗೊಳ್ಳಲಿದೆ
ವಯಸ್ಸಿನ ಮಿತಿಯಲ್ಲಿ ರಿಯಾಯಿತಿ ನೀಡುವುದು ದಶಕಗಳಿಂದ ಬಲವಾಗಿರುವ ದೇಶದ ಮಕ್ಕಳ ಹಕ್ಕುಗಳ ಕಾನೂನುಗಳನ್ನು ಹಿಂದಕ್ಕೆ ತಳ್ಳುತ್ತದೆ. ಪೋಕ್ಸೊ ಕಾಯ್ದೆ 2012 ಮತ್ತು ಬಾಲ ನ್ಯಾಯ ಕಾಯ್ದೆಯ ಮೂಲ ಸ್ವರೂಪಕ್ಕೆ ಈ ಕ್ರಮವು ಧಕ್ಕೆ ತರುತ್ತದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಹೇಳಿದರು.
ಇಂದಿರಾ ಜೈಸಿಂಗ್ ವಾದವೇನು?
ಸುಪ್ರೀಂ ಕೋರ್ಟ್ನ ಹಿರಿಯ ವಕೀಲೆ ಮತ್ತು ಅಮಿಕಸ್ ಕ್ಯೂರಿ ಇಂದಿರಾ ಜೈಸಿಂಗ್ ಅವರು ಲೈಂಗಿಕ ಕ್ರಿಯೆಗೆ ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸಬೇಕು ಎಂಬ ವಾದವನ್ನು ಬೆಂಬಲಿಸಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಇಂದಿರಾ ಜೈಸಿಂಗ್ ಅವರು ಮಂಡಿಸಿದ ವಾದಗಳನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ತೆಗೆದುಕೊಂಡಿದೆ. ಪ್ರಸ್ತುತ ಕಾನೂನು ಹದಿಹರೆಯದವರ ನಡುವಿನ ಉಭಯ ಸಮ್ಮತಿಯ ಲೈಂಗಿಕ ಸಂಬಂಧಗಳನ್ನು ಅಪರಾಧವೆಂದು ಪರಿಗಣಿಸುತ್ತದೆ ಎಂಬುದು ಇಂದಿರಾ ಜೈಸಿಂಗ್ ಅವರ ವಾದ.
