ಇಂದಿರಾ ಗಾಂಧಿ ಆಪರೇಶನ್ ಬ್ಲೂ ಸ್ಟಾರ್ ತಪ್ಪು ನಿರ್ಧಾರ, ಕಾಂಗ್ರೆಸ್‌ಗೆ ಮತ್ತೆ ಮುಜುಗರ ತಂದ ಚಿದಂಬರಂ, ಈ ಕಾರ್ಯಾಚರಣೆಗೆ ಇಂದಿರಾ ಗಾಂಧಿ ಬೆಲೆ ತೆರಬೇಕಾಯಿತು ಎಂದಿದ್ದಾರೆ. ಚಿದಂಬರಂ ಮಾತಿಗೆ ಹಲವು ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. 

ನವದೆಹಲಿ (ಅ.12) ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ಪದೇ ಪದೇ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. 2011ರ ಮುಂಬೈ ದಾಳಿ ಹಾಗೂ ಬಳಿಕ ಭಾರತ ಕೈಗೊಂಡ ನಿರ್ಧಾರಗಳ ಕುರಿತು ಇತ್ತೀಚೆಗೆ ಬಹಿರಂಗಪಡಿಸಿದ್ದ ಚಿದಂಬರಂ ಕಾಂಗ್ರೆಸ್‌ಗೆ ತೀವ್ರ ಇರಿಸುಮುರಿಸು ತಂದಿದ್ದರು. ನೆಟ್ಟಗೆ ಒಂದು ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಅನ್ನೋದು ಜಗಜ್ಜಾಹೀರು ಮಾಡಿದ್ದರು. ಇದರ ಬೆನ್ನಲ್ಲೇ ಪಿ ಚಿದಂಬರಂ ಮತ್ತೆ ಕಾಂಗ್ರೆಸ್‌ಗೆ ಮುಜುಗರ ತಂದಿದ್ದಾರೆ. ಈ ಬಾರಿ ಇಂದಿರಾ ಗಾಂಧಿ ತೆಗೆದುಕೊಂಡ ಆಪರೇಶನ್ ಬ್ಲೂ ಸ್ಟಾರ್ ನಿರ್ಧಾರ ತಪ್ಪು ಎಂದಿದ್ದಾರೆ. ಚಿದಂಬರಂ ಮಾತಿಗೆ ಹಲವು ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ನಿರ್ಧಾರವೇ ತಪ್ಪು, ಇದಕ್ಕೆ ಬೆಲೆ ತೆತ್ತ ಇಂದಿರಾ ಗಾಂಧಿ

ಅಮೃತರಸರದ ಸ್ವರ್ಣ ಮಂದಿರದಲ್ಲಿ ಖಲಿಸ್ತಾನ ಉಗ್ರ ಸಂಘಟನೆ ಹುಟ್ಟಿಗೆ ಕಾರಣವಾಗಿರುವ ಜರ್ನೈಲ್ ಸಿಂಗ್ ಬಿಂದ್ರನವಾಲೆ ಸೇರಿದಂತೆ ಹಲವು ಉಗ್ರರು ಸ್ವರ್ಣಮಂದಿರವನ್ನು ವಶಕ್ಕೆ ಪಡೆದು ಭಾರಿ ದಾಳಿಗೆ ಮುಂದಾಗಿತ್ತು. ಈ ವೇಳೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆ ನಡೆಸಿತ್ತು. ಈ ಮೂಲಕ ಉಗ್ರರ ಸದೆಬಡಿದು ಆಪರೇಶನ್ ಬ್ಲೂ ಸ್ಟಾರ್ ಮಂದಿರವನ್ನು ಕೈವಶ ಮಾಡಲಾಗಿತ್ತು. ಆದರೆ ಈ ನಿರ್ಧಾರ ತಪ್ಪು. ಇದರಿಂದ ಇಂದಿರಾ ಗಾಂಧಿ ಪ್ರಾಣ ತೆರಬೇಕಾಯಿತು. ಸಿಖ್ ಸಮುದಾಯದ ಆಕ್ರೋಶಕ್ಕೆ ಇಂದಿರಾ ಗಾಂಧಿ ಮೇಲೆ ದಾಳಿ ನಡೆಯಿತು ಎಂದು ಚಿದಂಬಂರಂ ಹೇಳಿದ್ದಾರೆ.

ತಪ್ಪು ದಾರಿ ಮೂಲಕ ಗೋಲ್ಡನ್ ಟೆಂಪಲ್ ವಶ

ಗೋಲ್ಡನ್ ಟೆಂಪಲ್‌ನಲ್ಲಿ ಆಶ್ರಯ ಪಡೆದಿದ್ದ ಉಗ್ರರ ಸದೆಬಡಿಯಲು ಸೇನೆ ನಡೆಸಿದ ಆಪರೇಶನ್ ಬ್ಲೂಸ್ಟಾರ್ ತಪ್ಪು ದಾರಿಯಾಗಿತ್ತು ಎಂದು ಚಿದಂಬರಂ ಹೇಳಿದ್ದಾರೆ. ಈ ತಪ್ಪು ನಿರ್ಧಾರಕ್ಕೆ ಇಂದಿರಾ ಗಾಂಧಿಯನ್ನು ಮಾತ್ರ ಗುರಿಯಾಗಿಸುವುದು ಸರಿಯಲ್ಲ. ಇಲ್ಲಿ ಭಾರತೀಯ ಸೇನೆ, ಗುಪ್ರಚರ ಇಲಾಖೆ, ಪೊಲೀಸರು ಜಂಟಿಯಾಗಿ ತೆಗೆದುಕೊಂಡು ನಿರ್ಧಾರ ಎಂದಿದ್ದಾರೆ.

Scroll to load tweet…

ಚಿದಂಬರಂ ವಿರುದ್ದ ಕಾಂಗ್ರೆಸ್ ಗರಂ

ಪಿ ಚಿದಂಬರಂ ಹೇಳಿಕೆಗೆ ಕಾಂಗ್ರೆಸ್ ಗರಂ ಆಗಿದೆ. ಕಾಂಗ್ರೆಸ್ ಈಗಲೂ ತಮ್ಮ ಚುನಾವಣಾ ಪ್ರಚಾರ, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸುವಾಗ ಈ ದೇಶಕ್ಕಾಗಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಪ್ರಾಣ ತ್ಯಾಗ ಮಾಡಿದ್ದಾರೆ ಅನ್ನೋ ಮಾತು ಉಚ್ಚರಿಸುತ್ತಾರೆ. ಇದೀಗ ಚಿದಂಬರಂ ಹೇಳಿಕೆಯಿಂದ ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ತಂದಿದ್ದಾರೆ. ಚಿದಂಬರಂ ಹದ್ದು ಮೀರಿ ಮಾತನಾಡುತ್ತಿದ್ದಾರೆ. ಹಿರಿಯ ನಾಯಕರಾಗಿ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಹಲವು ಕಾಂಗ್ರೆಸ್ ನಾಯಕರು ಸಲಹೆ ನೀಡಿದ್ದಾರೆ.

ಸತ್ಯ ಮಾತನಾಡುತ್ತಿದ್ದಾರೆ ಎಂದ ಬಿಜೆಪಿ

ಪಿ ಚಿದಂಬರಂ ಇತ್ತೀಚೆಗೆ ಸತ್ಯ ಮಾತನಾಡುತ್ತಿದ್ದಾರೆ. ಇದೀಗ ಕಾಂಗ್ರೆಸ್ ಚಿದಂಬರಂ ವಿರುದ್ದ ಕ್ರಮ ಕೈಗೊಳ್ಳುತ್ತಾ? ಇಷ್ಟು ದಿನ ಪ್ರಚಾರದಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕುರಿತು ತಪ್ಪು ಪ್ರಚಾರ ಮಾಡುತ್ತಿದ್ದ ಅಜೆಂಡಾವನ್ನು ಚಿದಂಬರಂ ಬಯಲು ಮಾಡಿದ್ದಾರೆ. ಚಿದಂಬರಂ ವಿರುದ್ದ ಕ್ರಮ ಯಾವಾಗಾ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಪ್ರಶ್ನಿಸಿದ್ದಾರೆ.

ಆಪರೇಶನ್ ಬ್ಲೂ ಸ್ಟಾರ್

ಆಪರೇಶನ್ ಬ್ಲೂ ಸ್ಟಾರ್ ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ. 1984ರ ಜೂನ್ 1 ರಿಂದ ಜೂನ್ 10ರ ವರೆಗೆ ಈ ಕಾರ್ಯಾಚರಣೆ ನಡೆದಿತ್ತು. ಪಂಜಾಬ್ ಪ್ರತ್ಯೇಕ ರಾಷ್ಟ್ರ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟ ಜರ್ನೈಲ್ ಸಿಂಗ್ ಬಿಂದ್ರನ್‌ವಾಲೆ ನಾಯಕತ್ವದ ಶಸಸ್ತ್ರ ಪಡೆ ಸರ್ಕಾರದ ವಿರುದ್ಧ ಯುದ್ಧ ಸಾರಿತ್ತು. ಸಿಖ್ ಹೋರಾಟಗಾರ ಗುಂಪಿನ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು. ಇದರಿಂದ ಅಮೃತರದ ಗೋಲ್ಡನ್ ಟೆಂಪಲ್‌ಗೆ ನುಗ್ಗಿದ ಬಿಂದ್ರನ್‌ವಾಲೆ ಸೇರಿದಂತೆ ಶಸಸ್ತ್ರ ಗುಂಪು, ಹಲವರನ್ನು ಒತ್ತೆಯಾಳಾಗಿಟ್ಟುಕೊಂಡು ಕಾರ್ಯಾಚರಣೆ ಆರಂಭಿಸಿತು. ಕೇಂದ್ರ ಸರ್ಕಾರ ನೀಡಿದ ಮಾತುಕತೆ ಆಹ್ವಾನವನ್ನು ತಿರಸ್ಕರಿಸಿ ಬೇಡಿಕೆಗೆ ಪಟ್ಟು ಹಿಡಿದಿತ್ತು. ಇಂದಿರಾ ಗಾಂಧಿ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ ಭಾರತೀಯ ಸೇನೆ ಹಾಗೂ ಭದ್ರತಾ ಪಡೆ ಕಾರ್ಯಾಚರಣೆಗೆ ಮುಂದಾಗಿತ್ತು. ಇಂದಿರಾ ಗಾಂಧಿ ಗ್ರೀನ್ ಸಿಗ್ನಲ್ ನೀಡಿದ್ದರು. ಹೀಗಾಗಿ ಆಪರೇಶನ್ ಬ್ಲೂ ಸ್ಟಾರ್ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಬಿಂದ್ರನ್‌ವಾಲೆ ಸೇರಿದಂತೆ ಉಗ್ರರ ಸದಬಡಿದಿತ್ತು. ಸ್ವರ್ಣಮಂದಿರನ್ನು ಉಗ್ರರಿಂದ ಮುಕ್ತಿಗೊಳಿಸಿತ್ತು. ಆದರೆ ಸ್ವರ್ಣಮಂದಿರದೊಳಗೆ ಭಾರತೀಯ ಸೇನೆ ನುಗ್ಗಿಸಿದ ಇಂದಿರಾ ಗಾಂಧಿ ವಿರುದ್ಧ ಸಿಖ್ ಸಮುದಾಯ ಆಕ್ರೋಶಗೊಂಡಿತ್ತು. ಸಿಖ್ ಸಮುದಾಯದ ಕೆಲ ಕ್ರಾಂತಿಕಾರಿಗಳು ಇಂದಿರಾ ಗಾಂಧಿ ವಿರುದ್ಧ ಸೇಡು ತೀರಿಸಲು ಮುಂದಾಗಿದ್ದರು. ಇದರ ಭಾಗವಾಗಿ ಇಂದಿರಾ ಗಾಂಧಿಯ ಭದ್ರತೆ ಜವಾಬ್ದಾರಿ ಹೊತ್ತಿದ್ದ ಸಿಖ್‌ರಿಂದಲೇ ಹತ್ಯೆಯಾದರು.