ದೇವರು ಹೇಳಿದ್ರೂ ನಾನು ಕೇಳುವನಲ್ಲ: ವಿ.ಸೋಮಣ್ಣ ಅಚ್ಚರಿಯ ಮಾತು
ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಅವರು, ದೇವರೇ ಬಂದು ಹೇಳಿದರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ತಮ್ಮ ರಾಜಕೀಯ ಜೀವನದ ಹೆಜ್ಜೆಗುರುತು ಎಂದು ಬಣ್ಣಿಸಿದ್ದಾರೆ.

ಕೇಂದ್ರ ರಾಜ್ಯ ಸಚಿವರಾಗಿರುವ ವಿ.ಸೋಮಣ್ಣ ಚುನಾವಣಾ ರಾಜಕೀಯ ನಿವೃತ್ತಿಯ ಮಾತುಗಳನ್ನಾಡಿದ್ದಾರೆ. ಇಂದು ತುಮಕೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿ.ಸೋಮಣ್ಣ, ಮುಂದೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದರು. ಈ ಮೂಲಕ ಚುನಾವಣಾ ರಾಜಕೀಯದ ಬಗ್ಗೆ ಹೇಳಿದ್ದಾರೆ. ವಿ.ಸೋಮಣ್ಣ ಅವರು ತುಮಕೂರು ಕ್ಷೇತ್ರದ ಸಂಸದರಾಗಿದ್ದಾರೆ.
ಕೇಂದ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಹಾಗೂ ತುಮಕೂರು ಜಿಲ್ಲಾಭಿವೃದ್ಧಿ ವಿಚಾರದ ಕುರಿತು ಮಾತನಾಡುವ ಸಂದರ್ಭದಲ್ಲಿ ವಿ.ಸೋಮಣ್ಣ, ಮತ್ತೆ ಚುನಾವಣೆಗೆ ನಿಂತ್ಕೊ ಅಂತ ದೇವರು ಬಂದು ಹೇಳಿದರು ನಾನು ಕೇಳುವನಲ್ಲ ಎಂದು ಹೇಳಿದರು. ತುಮಕೂರು-ಬೆಂಗಳೂರು ನಾಲ್ಕು ಪಥದ ರೈಲ್ವೆ ಸರ್ವೆ ಆಯ್ತು ಡಿಪಿಆರ್ ಶುರು ಮಾಡಿಸಿದ್ದೀನಿ.ಇದರ ಜೊತೆಗೆ ಎನ್ ಹೆಚ್ 4ರ ತಿಮ್ಮರಾಜನಹಳ್ಳಿ ಕೆಐಡಿಬಿಯವರ ಜೊತೆ ಮಾತನಾಡಿದ್ದೇನೆ ಎಂದರು.
ಇನ್ನೊಂದು ಐವತ್ತು ವರ್ಷಕ್ಕೆ ತೊಂದರೆ ಆಗಬಾರದು. ನಾನು ಇನ್ನು ಐವತ್ತು ವರ್ಷ ಇರ್ತೀನೇನಪ್ಪಾ ಎಂದು ಸುದ್ದಿಗೋಷ್ಠಿ ಮಧ್ಯೆಯೇ ತಮಾಷೆ ಮಾಡಿದರು. ಇಂತಹ ಅಭಿವೃದ್ಧಿ ಕೆಲಸಗಳೆಲ್ಲಾ ನಮ್ಮ ರಾಜಕೀಯ ಜೀವನದಲ್ಲಿ ಹೆಜ್ಜೆ ಗುರುತು ಎಂದು ತಿಳಿಸಿದರು.
ತುಮಕೂರು ವಿಶ್ವವಿದ್ಯಾಲಯಕ್ಕೆ ಶ್ರೀಗಳ ಹೆಸರು
ಕರ್ನಾಟಕ ರತ್ನ, ತ್ರಿವಿಧ ದಾಸೋಹಿಗಳು, ಶ್ರೇಷ್ಠ ಸಂತರು ಹಾಗೂ ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯರಾದ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮೀಜಿಗಳವರ ಹೆಸರನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು, ರಾಜ್ಯದ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ 2 ಸೋಲು
ಬೆಂಗಳೂರಿನ ಗೋವಿಂದರಾಜಪುರ ವಿಧಾನಸಭಾ ಕ್ಷೇತ್ರವನ್ನು ವಿ. ಸೋಮಣ್ಣ ಪ್ರತಿನಿಧಿಸುತ್ತಿದ್ದರು. ಆದ್ರೆ 2023ರ ವಿಧಾನಸಭಾ ಚುನಾವಣೆ ಬಿಜೆಪಿ ಸೋಮಣ್ಣ ಅವರನ್ನು ಚಾಮರಾಜನಗರ ಮತ್ತು ವರುಣಾ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡಿತ್ತು. ಆದ್ರೆ ಎರಡೂ ಕ್ಷೇತ್ರಗಳಲ್ಲಿ ವಿ.ಸೋಮಣ್ಣ ಸೋಲು ಕಂಡಿದ್ದರು.
2024ರ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದುಕೊಳ್ಳುವಲ್ಲಿ ಸೋಮಣ್ಣ ಯಶಸ್ವಿಯಾಗಿ ಚುನಾವಣೆ ಗೆದ್ದು ಸಂಸದರಾಗಿದ್ದರು. ಇದರೊಂದಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡು ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

