ಬೆಂಗಳೂರಿನ ಬನಶಂಕರಿಯಲ್ಲಿ, ಮಾಜಿ ಚಾಲಕನೇ ತನ್ನ ಸಹಚರರೊಂದಿಗೆ ಜೊಮೆಟೊ ಬಾಯ್ ವೇಷದಲ್ಲಿ ಬಂದು ವೃದ್ಧೆಯೊಬ್ಬರ ಮನೆ ದರೋಡೆ ಮಾಡಿದ್ದಾನೆ. ಚಾಕು ಇರಿತಕ್ಕೊಳಗಾದ ವೃದ್ಧೆ ಕನಕಪುಷ್ಪಮ್ಮ ಸತ್ತಂತೆ ನಟಿಸಿ ಪ್ರಾಣ ಉಳಿಸಿಕೊಂಡಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರು ನಗರದ ಬನಶಂಕರಿ ಮೂರನೇ ಹಂತದ ಸಿಂಡಿಕೇಟ್ ಬ್ಯಾಂಕ್ ಕಾಲೋನಿಯಲ್ಲಿ ನಡೆದ ಭೀಕರ ದರೋಡೆ ಪ್ರಕರಣ ಈಗ ನಗರದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ. ಚಾಕುವಿನಿಂದ ಇರಿತಕ್ಕೊಳಗಾದರೂ ಅಪಾರ ಧೈರ್ಯ ತೋರಿದ ವೃದ್ಧೆ ಕನಕಪುಷ್ಪಮ್ಮ ಅವರು ಸತ್ತಂತೆ ನಟಿಸಿ ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ. ಈ ಘಟನೆಯ ಬಳಿಕ ಬನಶಂಕರಿ ಪೊಲೀಸರು ತ್ವರಿತ ಕ್ರಮ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ನಾಲ್ಕು ತಿಂಗಳು ಕೆಲಸ ಮಾಡಿದ ಚಾಲಕನ ಕೃತ್ಯ
ಬನಶಂಕರಿಯ ನಿವಾಸಿ ಕನಕಪುಷ್ಪಮ್ಮ (ವಯಸ್ಸು 65) ತಮ್ಮ ಮಗ ರಾಹುಲ್ ಜೊತೆ ವಾಸಿಸುತ್ತಿದ್ದರು. ರಾಹುಲ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದು, ಮನೆ ಕೆಲಸ ಮತ್ತು ವಾಹನ ಚಲಾಯಿಸುವುದಕ್ಕೆ ಚಾಲಕನನ್ನು ನೇಮಿಸಲಾಗಿತ್ತು. ಸುಮಾರು ನಾಲ್ಕು ತಿಂಗಳು ಕೆಲಸ ಮಾಡಿದ ಬಳಿಕ, ಆ ಚಾಲಕ ಕೆಲಸ ಬಿಟ್ಟ. ಆದರೆ ಮನೆಯನ್ನು ದೋಚುವುದು ಆತನ ಪ್ಲಾನ್ ಆಗಿತ್ತು. ಹೀಗಾಗಿ ಅನ್ನ ಹಾಕಿದ ಕನ್ನ ಹಾಕಲು ಮುಂದಾದ ಮನೆಗೆ ನುಗ್ಗಿ ಹಣ ದೋಚುವ ಪ್ಲಾನ್ ರೂಪಿಸಿದ್ದ.
ಜೊಮೆಟೊ ಬಾಯ್ ವೇಷದಲ್ಲಿ ಬಂದು ದಾಳಿ
ಘಟನೆಯ ದಿನ, ರಾತ್ರಿ ವೇಳೆ ಆರೋಪಿಗಳು ಜೊಮೆಟೊ ಡೆಲಿವರಿ ಬಾಯ್ ವೇಷ ತೊಟ್ಟು ಬನಶಂಕರಿಯ ಮನೆಯತ್ತ ಬಂದರು. ಬಾಗಿಲು ಬಡಿದು ಒಳಗೆ ನುಗ್ಗಿದ ತಕ್ಷಣ, ಪ್ರಮುಖ ಆರೋಪಿ ಚಾಲಕ ಮಡಿವಾಳ ಅಲಿಯಾಸ್ ಮ್ಯಾಡಿ ವೃದ್ಧೆ ಕನಕಪುಷ್ಪಮ್ಮ ಅವರ ಕತ್ತಿಗೆಗಗೆ ಚಾಕು ಇರಿದ, ಆದರೂ ಅದ್ಭುತ ಧೈರ್ಯ ತೋರಿದ ವೃದ್ಧೆ ಸತ್ತಂತೆ ನಟಿಸಿದರು. ಇದರಿಂದ ಅವರು ಇನ್ನಷ್ಟು ಇರಿತಕ್ಕೊಳಗಾಗದೆ ಜೀವ ಉಳಿಸಿಕೊಂಡರು. ಆರೋಪಿಗಳು ಮನೆಯಲ್ಲಿದ್ದ ಸುಮಾರು ₹8 ಲಕ್ಷ ನಗದು ದೋಚಿ ಓಡಿಹೋದರು.
ಸತ್ತಂತೆ ನಾಟಕವಾಡಿ ಬದುಕುಳಿದ ವೃದ್ದೆ:
ದರೋಡೆ ಸಮಯದಲ್ಲಿ ಕನಕಪುಷ್ಪ ಮೇಲೆ ದಾಳಿ ಮಾಡಿ ಎರಡು ಬಾರಿ ಕುತ್ತಿಗೆಗೆ ಚಾಕುವಿನಿಂದ ಕೊಯ್ದಿದ್ದ ಮಡಿವಾಳ ಮತ್ತು ಆತನ ಸಹೋದರ ಗುರು. ಈ ವೇಳೆ ಸತ್ತಿದ್ದಾರ ಒಮ್ಮೆ ನೋಡು ಎಂದು ಮಡಿವಾಳ ಗುರುಗೆ ಹೇಳಿದ್ದ. ಆಗ ಸತ್ತುಬಿದ್ದ ಹಾಗೆ ವೃದ್ದೆ ಕನಕಪುಷ್ಪ ನಾಟಕವಾಡಿದ್ದರು. ನಂತರ ಮನೆಯಲ್ಲಿದ್ದ 8.5 ಲಕ್ಷ ಕದ್ದೊಯ್ದಿದ್ದ. ಅಷ್ಟೊತ್ತಿಗೆ ಕೂಗಾಟ ಕೇಳಿ ಮನೆ ಬಳಿ ಸೇರಿದ್ದ ಸ್ಥಳಿಯರು. ಆಗ ಆರೋಪಿ ಗಣೇಶ್ ನನ್ನ ಹಿಡಿದುಕೊಂಡಿದ್ದ ಸ್ಥಳಿಯರು. ಗಣೇಶ್ ನನ್ನ ಹಿಡಿಯುತ್ತಿದ್ದಂತೆ ಉಳಿದ ಆರೋಪಿಗಳು ಎಸ್ಕೇಪ್ ಆಗಿದ್ದರು.
ಸ್ಥಳೀಯರು ತಕ್ಷಣ ಬನಶಂಕರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು ಮತ್ತು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದರು. ಅನಂತರ ನಡೆದ ವಿಚಾರಣೆಯಲ್ಲಿ ಉಳಿದ ಇಬ್ಬರ ಗುರುತು ಪತ್ತೆಯಾಗಿ, ಪೊಲೀಸರು ಮಡಿವಾಳ ಅಲಿಯಾಸ್ ಮ್ಯಾಡಿ, ವಿಠಲ್ ಮತ್ತು ಗಣೇಶ್ ಎಂಬ ಮೂವರನ್ನೂ ಬಂಧಿಸಿದರು. ಇದರಲ್ಲಿ ಆರೋಪಿ ಗುರು ಈತ ಈ ಯೋಜನೆಯ ಮಾಸ್ಟರ್ ಮೈಂಡ್. ಈತ ಎಸ್ಕೇಪ್ ಆಗಿದ್ದು ಬನಶಂಕರಿ ಪೊಲೀಸರಿಂದ ಹುಡುಕಾಟ ನಡೆಯುತ್ತಿದೆ.
ಗಾಯಗೊಂಡ ವೃದ್ಧೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಗಂಭೀರ ಗಾಯಗೊಂಡಿದ್ದ ಕನಕಪುಷ್ಪಮ್ಮ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಬಂಧಿತರ ವಿಚಾರಣೆಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಪ್ರಮುಖ ಆರೋಪಿ ಮಡಿವಾಳ ಕಳೆದ ನಾಲ್ಕು ತಿಂಗಳು ವೃದ್ಧೆಯ ಮನೆಯಲ್ಲಿ ಕೆಲಸ ಮಾಡಿದ್ದಾನೆ. ಮನೆಯ ಒಳಹೊರಗಿನ ಎಲ್ಲ ವಿವರಗಳನ್ನು ಪೂರ್ತಿ ತಿಳಿದಿದ್ದ ಆತ, ಕೆಲಸದಿಂದ ತೆಗೆದ ರಾತ್ರಿ ಸ್ನೇಹಿತರಾದ ವಿಠಲ್ ಮತ್ತು ಗಣೇಶ್ ಜೊತೆಗೂಡಿ ಕಳ್ಳತನದ ಪ್ಲಾನ್ ರೂಪಿಸಿದ್ದಾನೆ. ಮನೆಗೆ ನುಗ್ಗಿ ದಾಳಿ ನಡೆಸಿ, ಹಣ ಕದ್ದ ನಂತರ ಅವರು ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ, ನೆರೆಹೊರೆಯವರ ತಕ್ಷಣದ ಪ್ರತಿಕ್ರಿಯೆಯಿಂದ ಅವರ ಪ್ಲಾನ್ ವಿಫಲವಾಯಿತು.
ಪೊಲೀಸರ ತನಿಖೆ ಮುಂದುವರಿದಿದೆ
ಸದ್ಯ ಬನಶಂಕರಿ ಪೊಲೀಸರು ಆರೋಪಿಗಳಿಂದ ವಿಚಾರಣೆ ನಡೆಸುತ್ತಿದ್ದು, ದೋಚಿದ ಹಣದ ಪತ್ತೆಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ಘಟನೆಯು ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಇತ್ತೀಚಿನ ಪ್ರಮುಖ ದರೋಡೆ ಪ್ರಕರಣಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡುತ್ತಾ, ಅಜ್ಞಾತ ವ್ಯಕ್ತಿಗಳನ್ನು ಮನೆಗೆ ಒಳಗೆ ಬಿಡದಂತೆ ಹಾಗೂ ಆಹಾರ ಸರಬರಾಜು ಅಥವಾ ಕೂರಿಯರ್ ಹೆಸರಿನಲ್ಲಿ ಬರುವವರ ಗುರುತನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ವೃದ್ಧೆ ಕನಕಪುಷ್ಪಮ್ಮ ಅವರ ಧೈರ್ಯ ಮತ್ತು ನೆರೆಹೊರೆಯವರ ಸಮಯಪ್ರಜ್ಞೆಯಿಂದ ಒಂದು ಭೀಕರ ದರೋಡೆ ಪ್ರಕರಣ ದೊಡ್ಡ ಅನಾಹುತದಿಂದ ತಪ್ಪಿದೆ. ಬನಶಂಕರಿ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದು ಶ್ಲಾಘನೀಯ ಕ್ರಮ. ಈ ಘಟನೆ ನಗರದಲ್ಲಿ ಹೆಚ್ಚುತ್ತಿರುವ ದರೋಡೆ ಪ್ರಕರಣಗಳ ಬಗ್ಗೆ ಜನರಲ್ಲಿ ಎಚ್ಚರಿಕೆ ಮೂಡಿಸಿದೆ.
