ಭಾರತೀಯರಿಗೆ ಉದ್ಯೋಗವು ಕೇವಲ ಸಂಬಳಕ್ಕಾಗಿ ಅಲ್ಲ, ಗುರುತಿಸುವಿಕೆ, ಭದ್ರತೆ ಮತ್ತು ಸೇರಿದವರ ಭಾವನೆಗಾಗಿಯೂ ಎಂದು ಹೊಸ ಅಧ್ಯಯನ ಬಹಿರಂಗಪಡಿಸಿದೆ.
ಬೆಂಗಳೂರು: ಉದ್ಯೋಗವು ಭಾರತೀಯರಿಗೆ ಕೇವಲ ಸಂಬಳಕ್ಕಾಗಿ ಅಲ್ಲ, ಗುರುತಿಸುವಿಕೆ, ಭದ್ರತೆ ಮತ್ತು ಸೇರಿದವರ ಭಾವನೆಗಾಗಿ ಸಹ ಎನ್ನುವುದನ್ನು ಹೊಸ ಸಂಶೋಧನೆ ಸ್ಪಷ್ಟಪಡಿಸಿದೆ. ಅವತಾರ್ ಗ್ರೂಪ್ ಹಾಗೂ EY ಗ್ಲೋಬಲ್ ಡೆಲಿವರಿ ಸರ್ವೀಸಸ್ (EY GDS) ಜಂಟಿಯಾಗಿ ನಡೆಸಿದ ‘ವೈ ವೀ ವರ್ಕ್’ ಅಧ್ಯಯನವು, ಭಾರತದ ವೃತ್ತಿಪರರ ಮನಸ್ಥಿತಿಯ ಬಗ್ಗೆ ಮಹತ್ವದ ಒಳನೋಟಗಳನ್ನು ಒದಗಿಸಿದೆ.
ಏಪ್ರಿಲ್ ಮತ್ತು ಜುಲೈ 2025ರ ನಡುವೆ ನಡೆದ ಈ ಅಧ್ಯಯನದಲ್ಲಿ ದೇಶದಾದ್ಯಂತದ 10,255 ವೃತ್ತಿಪರರು ಭಾಗವಹಿಸಿದ್ದರು. ಇದರಲ್ಲಿ ಮಿಲೇನಿಯಲ್ಸ್ 69%, ಜೆನ್ Z 16% ಹಾಗೂ ಜೆನ್ X 14% ಪ್ರತಿನಿಧಿಸಿದ್ದರು. 61% ಪುರುಷರು, 38% ಮಹಿಳೆಯರು ಹಾಗೂ 1% ತಮ್ಮ ಲಿಂಗವನ್ನು ಬಹಿರಂಗಪಡಿಸದವರು ಇದ್ದರು. ಈ ವಿಶಾಲ ಸಮೀಕ್ಷೆಯಿಂದ ಬಂದಿರುವ ಫಲಿತಾಂಶಗಳು ಭಾರತೀಯ ಕಾರ್ಮಿಕರ ಹೊಸ ಮನೋಭಾವವನ್ನು ಹೊರಹಾಕುತ್ತವೆ. 92% ಜನರು “ಉತ್ತಮ ಕೆಲಸ ಮಾಡಿದರೆ ಗುರುತಿಸಿಕೊಳ್ಳಬೇಕು, ಗೌರವಿಸಲ್ಪಡಬೇಕು” ಎಂಬುದನ್ನು ತಮ್ಮ ದೊಡ್ಡ ಪ್ರೇರಣೆ ಎಂದು ಹೇಳಿದ್ದಾರೆ.
90% ಜನರು ಕುಟುಂಬದ ಭವಿಷ್ಯವನ್ನು ಭದ್ರಪಡಿಸಲು ಕೆಲಸ ಮಾಡುತ್ತಾರೆ ಎಂದಿದ್ದಾರೆ. 81% ಜನರಿಗೆ ವೃತ್ತಿಜೀವನವು “ಪೂರ್ಣ ಸಾಮರ್ಥ್ಯ ತಲುಪುವ ವೇದಿಕೆ” ಎಂದು ಅನಿಸುತ್ತದೆ . ಮಹಿಳೆಯರಲ್ಲಿ ಇದು ಪುರುಷರಿಗಿಂತ ಹೆಚ್ಚು ಬಲವಾಗಿದೆ. ಜೊತೆಗೆ, 91% ಜನರು ಸವಾಲಿನ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಿದ್ಧರಾಗಿದ್ದಾರೆ, 85% ಪ್ರತಿಕ್ರಿಯೆ ಸ್ವೀಕರಿಸಲು ತೆರೆದಿದ್ದಾರೆ ಮತ್ತು 81% ಕೌಶಲ್ಯ ವೃದ್ಧಿಗೆ ತಾವೇ ಪ್ರಯತ್ನಿಸುತ್ತಿದ್ದಾರೆ.
ಈ ವಿವರಗಳನ್ನು “ರಿಸ್ಕ್–ರೆಸಿಲಿಯನ್ಸ್–ರಿವಾರ್ಡ್” ಎಂಬ ಚೌಕಟ್ಟಿನಲ್ಲಿ ಅರ್ಥೈಸಲಾಗಿದೆ. ಅಂದರೆ, ಇಂದಿನ ವೃತ್ತಿಜೀವನದಲ್ಲಿ ಅಪಾಯವು (Risk) ಸದಾ ಇರುತ್ತದೆ, ಅದನ್ನು ಎದುರಿಸಲು ಹೊಂದಿಕೊಳ್ಳುವ ಸಾಮರ್ಥ್ಯ (Resilience) ಅಗತ್ಯ, ಮತ್ತು ಕೊನೆಗೆ ಯಶಸ್ಸಿನ ಬಹುಮಾನ (Reward) ಕೇವಲ ಹಣವಲ್ಲ, ಗೌರವ, ಸೇರಿದವರ ಭಾವನೆ ಮತ್ತು ಉದ್ದೇಶವನ್ನೂ ಒಳಗೊಂಡಿರುತ್ತದೆ.
ಅಧ್ಯಯನದ ಫಲಿತಾಂಶಗಳ ಬಗ್ಗೆ ಅವತಾರ್ ಗ್ರೂಪ್ ಸ್ಥಾಪಕಿ–ಅಧ್ಯಕ್ಷೆ ಡಾ. ಸೌಂದರ್ಯ ರಾಜೇಶ್ ಹೇಳಿದ್ದು ಹೀಗೆ
“ಭಾರತೀಯರು ಈಗ ಸಂಬಳಕ್ಕಿಂತ ಹೆಚ್ಚು ಗುರುತಿಸುವಿಕೆ, ಗೌರವ ಮತ್ತು ಉದ್ದೇಶಕ್ಕಾಗಿ ಕೆಲಸ ಮಾಡುತ್ತಾರೆ. ಇಂದಿನ ಯುಗದಲ್ಲಿ ಅಪಾಯ ಎಲ್ಲೆಡೆ ಇದೆ, ಆದರೆ ಸ್ಥಿತಿಸ್ಥಾಪಕತೆ ಹೊಸ ಶಕ್ತಿ. ಬಹುಮಾನ ಎಂದರೆ ಕೇವಲ ಹಣವಲ್ಲ, ಜನರಿಗೆ ಸುರಕ್ಷತೆ ಮತ್ತು ಸ್ಫೂರ್ತಿ ನೀಡುವ ವಾತಾವರಣವೂ ಹೌದು.
ಈ ಅಧ್ಯಯನವು ಉದ್ಯೋಗಿಗಳ ನಿಜವಾದ ಪ್ರೇರಣೆಗಳನ್ನು ಬಿಚ್ಚಿಡುತ್ತದೆ. ಮುಂದಿನ ದಿನಗಳಲ್ಲಿ ನಾಯಕರು ಕೇವಲ ತಾಂತ್ರಿಕ ಬದಲಾವಣೆಗಷ್ಟೇ ಅಲ್ಲ, ಮಾನವೀಯ ಮೌಲ್ಯಗಳನ್ನು ಕೇಂದ್ರದಲ್ಲಿಟ್ಟುಕೊಂಡ ಕೆಲಸದ ಸ್ಥಳಗಳನ್ನು ನಿರ್ಮಿಸಬೇಕಾಗಿದೆ. ಗುರುತಿಸುವಿಕೆ ಮತ್ತು ಸೇರಿಕೊಳ್ಳುವಿಕೆ ಭವಿಷ್ಯದ ಕೆಲಸದ ಸ್ಥಳಗಳಲ್ಲಿ ಪ್ರಮುಖ ಅಂಶಗಳಾಗುತ್ತವೆ ಎಂದು EY GDSನ ಮುಖ್ಯ ಯೋಗಕ್ಷೇಮ ಅಧಿಕಾರಿ ಜಯಾ ವಿರ್ವಾನಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಅಧ್ಯಯನವನ್ನು ಅನಾವರಣಗೊಳಿಸಿದ ಮೈಅವತಾರ್ ಕರಿಯರ್ ಕಾನ್ಫರೆನ್ಸ್ (MACC) 2025 ಬೆಂಗಳೂರು ನಗರದ ನಿಂಹಾನ್ಸ್ ಕಾನ್ವೆನ್ಷನ್ ಸೆಂಟರ್ನಲ್ಲಿ ನಡೆಯಿತು. ಉದ್ಯಮ ನಾಯಕರನ್ನು, HR ವೃತ್ತಿಪರರನ್ನು ಹಾಗೂ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿದ ಈ ವೇದಿಕೆಯಲ್ಲಿ ಬ್ರಿಗೇಡ್ ಎಂಟರ್ಪ್ರೈಸಸ್ನ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರಾ ಶಂಕರ್, ಸ್ಟೇಟ್ ಸ್ಟ್ರೀಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿ ಮಂಜುಶ್ರೀ ದತ್ತ, IBMನ ಚೀಫ್ ಆರ್ಕಿಟೆಕ್ಟ್ ಗೀತಾ ಅಡಿನಾರಾಯಣ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಿತು.
- 1. ಸಂಸ್ಥೆಯ ಪ್ರಶಸ್ತಿ: ಕೆಬಿಆರ್ ಎನರ್ಜಿ, ಪ್ರಶಸ್ತಿಯನ್ನು ಸ್ವೀಕರಿಸಿದವರು ಗೀತಾ ರಾಮಮೂರ್ತಿ (MD, KBR India)
- 2. ಕ್ಯಾರಿಯರ್ ಐಕಾನ್ಸ್ ಪ್ರಶಸ್ತಿ: ಶಿಲ್ಪಿ ಮಿತ್ರ (Microsoft India) ಮತ್ತು ಸೋಭಿತಾ ನೀಲನಾಥ್ (Salesforce India)
- 3. ಪ್ರೇರಣಾದಾಯಕ ದ್ವಿತೀಯ ವೃತ್ತಿ ಪ್ರಶಸ್ತಿ: ಪ್ರೀತಿ ಸೆಂಥಿಲ್ಕುಮಾರ್ (Zuci Systems)
