ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಬೆಂಗಳೂರು (ಜೂ. 20): ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಎರಡು ದಿನಗಳ ಭೇಟಿಗಾಗಿ ಸೋಮವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಇಂದು ಬೆಳಗ್ಗೆ 11.55 ಗಂಟೆಗೆ ಯಲಹಂಕ ಐಎಎಫ್ ಸ್ಟೇಷನ್ಗೆ ವಿಶೇಷ ವಿಮಾನದ ಮೂಲಕ ಆಗಮಿಸಲಿರುವ ಅವರು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಹೆಬ್ಬಾಳದ ಮೇಖ್ರಿ ವೃತ್ತದ ಬಳಿಯ ಎಚ್ಕ್ಯೂಟಿಸಿ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಐಐಎಸ್ಸಿಗೆ ತೆರಳಿ ಬ್ರೈನ್ ರೀಸಚ್ರ್ ಸೆಂಟರ್ ಉದ್ಘಾಟನೆ ಹಾಗೂ ಬಾಗ್ಚಿ ಪಾರ್ಥಸಾರಥಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಗಮನಕ್ಕೆ ಬೆಂಗಳೂರು ಸಿದ್ಧತೆ ನಡೆಸಲಾಗಿದೆ. ಮೋದಿ ಹಾದುಹೋಗಲಿರುವ ಮಾರ್ಗದಲ್ಲಿ ಅವರನ್ನು ಕರೆದೊಯ್ಯುವ ವ್ಯವಸ್ಥೆ ಹಾಗೂ ಭದ್ರತೆ (Tight Scurity) ಒದಗಿಸಲಾಗಿದೆ. ಪ್ರಧಾನಿಗಳು ಸಂಚರಿಸುವ ರಸ್ತೆಗಳನ್ನು ಸಂಪೂರ್ಣ ಡಾಂಬರೀಕರಣ ಮಾಡಿ ಸಿಂಗಾರ ಮಾಡಲಾಗಿದೆ. ಜತೆಗೆ ಮೋದಿ ಸಂಚರಿಸುವ ಮಾರ್ಗದಲ್ಲಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದು, ರಸ್ತೆಯುದ್ದಕ್ಕೂ ಸಿಸಿಟಿವಿ ಅಳವಡಿಕೆ ಸೇರಿದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.