Anti Conversion Bill: ವಿಧಾನಸಭೆಯಲ್ಲಿ ಅಂಗೀಕಾರ, ನಾವು ಗೆದ್ದರೆ ಮತಾಂತರ ಕಾಯ್ದೆ ರದ್ದು: ಸಿದ್ದು

Dec 24, 2021, 9:47 AM IST

ಬೆಂಗಳೂರು (ಡಿ. 24): ಗದ್ದಲ, ಕೋಲಾಹಲ, ವಾಕ್ಸಮರ, ತೀವ್ರ ಪ್ರತಿಭಟನೆ, ಹೈಡ್ರಾಮಾ ನಡುವೆಯೇ ಬಹುನಿರೀಕ್ಷಿತ ಹಾಗೂ ಚರ್ಚಿತ ಮತಾಂತರ ನಿಷೇಧ ಮಸೂದೆ (ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ -2021) (Anti Conversion Bill) ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು.

ಆರ್‌ಎಸ್‌ಎಸ್‌ನಿಂದಾಗಿಯೇ (RSS) ಸದನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಿದ್ದೇವೆ. ಇಷ್ಟುಮಾತ್ರವಲ್ಲ ಇನ್ನೂ ಇಂತಹ ಮೂರು ಕಾಯಿದೆಗಳನ್ನು ಮಂಡಿಸುತ್ತೇವೆ. ನಾವು ಯಾವುದೇ ಧರ್ಮದ ಸುದ್ದಿಗೆ ಹೋಗುವುದಿಲ್ಲ. ನಮ್ಮ ಧರ್ಮದ ಸುದ್ದಿಗೆ ಬಂದರೆ ಚಿಂದಿ ಚಿಂದಿ ಮಾಡುತ್ತೇವೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಎಚ್ಚರಿಕೆ ನೀಡಿದರು.

ಕಾಂಗ್ರೆಸ್‌ ಪಕ್ಷ 2023ರಲ್ಲಿ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರ ತಂದಿರುವ ಧಾರ್ಮಿಕ ಸ್ವಾತಂತ್ರ್ಯ ಮಸೂದೆಯನ್ನು ರದ್ದುಗೊಳಿಸಲಾಗುವುದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ಜತೆಗೆ ಈ ಮಸೂದೆಯ ಹಿಂದೆ ಆರ್‌ಎಸ್‌ಎಸ್‌ ಅಜೆಂಡಾ ಅಡಗಿದೆ ಎಂದು ಗುಡುಗಿದ್ದಾರೆ.