7 Wonders Of Karnataka: 7 ಅದ್ಭುತಗಳು ಅಭಿಯಾನಕ್ಕೆ ‘ಗಾಂಧೀಜಿ’ ಸಾಥ್‌!

Jun 18, 2022, 10:57 AM IST

ಬೆಂಗಳೂರು (ಜೂ, 18): ‘ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌’ನ ‘ಕರ್ನಾಟಕದ ಏಳು ಅದ್ಭುತಗಳು’ ಅಭಿಯಾನಕ್ಕೆ ಗದಗ ಜಿಲ್ಲೆಯ ರೋಣ ತಾಲೂಕಿನ ಕರ್ಕಿಕಟ್ಟಿಗ್ರಾಮದ ಮುತ್ತಣ್ಣ ಚನ್ನಬಸಪ್ಪ ತಿರ್ಲಾಪುರ (53) ವಿಭಿನ್ನವಾಗಿ ಸಾಥ್‌ ನೀಡಿದ್ದಾರೆ. ಮಹಾತ್ಮಾ ಗಾಂಧೀಜಿ ವೇಷ ಧರಿಸಿ ಊರೂರು ಸುತ್ತಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಿ, ನಮ್ಮೂರಿನ ಅದ್ಭುತಗಳ ಬಗ್ಗೆ ಜಗತ್ತಿಗೆ ತಿಳಿಸೋಣ ಎಂದು ಪ್ರಚಾರ ಮಾಡುತ್ತಿದ್ದಾರೆ. 

ಕರ್ನಾಟಕದ 7 ಅದ್ಭುತಗಳು ಅಭಿಯಾನಕ್ಕೆ ನಟ ರಮೇಶ್ ಅರವಿಂದ್ ಮೆಚ್ಚುಗೆ

ಮೂಲತಃ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಗ್ರಾಮದ ಮುತ್ತಣ್ಣ ಕಲಿತಿರುವುದು ಬರೀ 7ನೇ ತರಗತಿ. ಜೀವನ ನಿರ್ವಹಣೆಗೆಂದು ಕರ್ಕಿಕಟ್ಟಿಗ್ರಾಮಕ್ಕೆ ಹೋಗಿ ನೆಲೆಸಿದ್ದಾರೆ. ಕರ್ಕಿಕಟ್ಟಿಯಲ್ಲಿ ಚಿಕ್ಕದೊಂದು ಹೋಟೆಲ್‌ ಹೊಂದಿದ್ದಾರೆ. ಕನ್ನಡ ಭಾಷೆ, ಸಾಹಿತಿಗಳ ಬಗ್ಗೆ ವಿಶೇಷ ಆಸ್ತೆಯನ್ನು ಹೊಂದಿರುವ ಇವರು, ತಮ್ಮ ಹೋಟೆಲ್‌ನ ಗೋಡೆಗಳ ಮೇಲೆ ಸ್ವಾತಂತ್ರ್ಯ ಹೋರಾಟಗಾರರದ್ದು, ಸಾಹಿತಿಗಳ ಭಾವಚಿತ್ರ, ಅವರ ಪದ್ಯಗಳನ್ನು ಬರೆದು ಅಂಟಿಸಿರುವುದುಂಟು.

2015ರಿಂದಲೇ ಮಹದಾಯಿ ನೀರಿಗಾಗಿ ಹೋರಾಟ ನಡೆಸಿದವರಲ್ಲಿ ಇವರೂ ಒಬ್ಬರು. ಪರಿಸರ ಜಾಗೃತಿ, ಮದ್ಯವ್ಯಸನ ಮುಕ್ತ ಸಮಾಜ, ಭ್ರಷ್ಟಾಚಾರ ರಹಿತ ಆಡಳಿತ ಇವರ ಹೋರಾಟದ ವಿಷಯಗಳು. ಇದಕ್ಕಾಗಿ ಇವರು ಆಗಾಗ ಜಾಗೃತಿ ಜಾಥಾ ನಡೆಸುತ್ತಲೇ ಇರುತ್ತಾರೆ.