Assembly election: ಹಾಸನ.. ಅರಸೀಕೆರೆ.. ಗೌಡರ ಕೋಟೆಯಲ್ಲಿ ಇದೆಂಥಾ ಯುದ್ಧ..?

Feb 11, 2023, 2:12 PM IST

ಹಾಸನ (ಫೆ.11): ದೇವೇಗೌಡರ ಕೋಟೆ ಭದ್ರವಾಗತ್ತದೆಯೋ ಇಲ್ಲ ಛಿದ್ರವಾಗುತ್ತದೆಯೋ. ಗೌಡರ ಒಡ್ಡೋಲಗದಲ್ಲಿ ದಿನಕ್ಕೊಂದು ಆಟ ಹಾಗೂ ಕ್ಷಣಕ್ಕೊಂದು ಟ್ವಿಸ್ಟ್‌ ಲಭ್ಯವಾಗುತ್ತಿದೆ.

ಅದರಲ್ಲಿ ಗೌಡರ ಹಿರಿಯ ಸೊಸೆ ಭವಾನಿ ಅವರ ಟಿಕೆಟ್‌ ಓಟಕ್ಕೆ ಬ್ರೇಕ್‌ ಹಾಕಲು ಹಾಸನದಿಂದಲೇ ಸ್ಪರ್ಧೆ ಮಾಡಲಿದ್ದಾರೆಯೇ ಎಚ್.ಡಿ. ರೇವಣ್ಣ. ಈ ಮೂಲಕ ಅತ್ತಿಗೆ ಭವಾನಿ ರೇವಣ್ಣ ಅವರಿಗೆ ಹಾಸನದಿಂದ ಜೆಡಿಎಸ್‌ ಟಿಕೆಟ್‌ ನೀಡದೇ ತಪ್ಪಿಸುವ ಯೋಜನೆಗೆ ಮೈದುನ ಎಚ್.ಡಿ. ಕುಮಾರಸ್ವಾಮಿ ಪ್ಲಾನ್‌ ಮಾಡಿದ್ದಾರೆ. ಅಣ್ಣ, ತಮ್ಮ, ಅತ್ತಿಗೆ, ಮೈದುನ, ಇಬ್ಬರು ಮಕ್ಕಳು ಹಾಸನ ಟಿಕೆಟ್‌ ಕದನದಲ್ಲಿ ತೊಡಗಿದ್ದಾರೆ. ಟಿಕೆಟ್‌ಗಾಗಿ ದಳಪತಿಯನ್ನೂ ಭವಾನಿ ರೇವಣ್ಣ ಭೇಟಿ ಮಾಡಿದ್ದಾರೆ. ಈ ಬಗ್ಗೆ ಸ್ವತಃ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ಹಾಸನಕ್ಕೆ ಭವಾನಿ ರೇವಣ್ಣ ಅನಿವಾರ್ಯವಲ್ಲ ಎಂದು ಹೇಳಿದ್ದರು. ಜೊತೆಗೆ, ನಮ್ಮ ಕುಟುಂಬದಲ್ಲಿ ಇನ್ನೊಬ್ಬರು ಸ್ಪರ್ಧೆ ಮಾಡಿದರೆ ಕುಟುಂಬ ರಾಜಕಾರಣದ ಆರೋಪಕ್ಕೆ ನಾವೇ ಅಸ್ತ್ರ ನೀಡಿದಂತಾಗಲಿದೆ.

ಬಿಜೆಪಿ, ಕಾಂಗ್ರೆಸ್‌ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ

ಲೋಕಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಮೂವರು ಸ್ಪರ್ಧಿಸಿ ಪೆಟ್ಟು ತಿಂದಿದ್ದೇವೆ. ಇದೇ ಕಾರಣದಿಂದ ತುಮಕೂರಿನಲ್ಲಿ ದೇವೇಗೌಡರು ಸೋತು, ಪಕ್ಷಕ್ಕೂ ಹಿನ್ನಡೆಯಾಗಿದೆ. ಈಗ ಮತ್ತದೇ ತಪ್ಪು ಮಾಡಿದರೆ ಒಟ್ಟಾರೆ ಫಲಿತಾಂಶದ ಮೇಲೆ ಪೆಟ್ಟು ಬೀಳಲಿದೆ. ಹೀಗಾಗಿ, ಹಾಸನ ಟಿಕೆಟ್‌ ವಿಚಾರದಲ್ಲಿ ಯೋಜನೆ ಮಾಡಿ ನಿರ್ಧಾರ ಕೈಗೊಳ್ಳುವಂತೆ ಕುಮಾರಸ್ವಾಮಿ ಸಹೋದರ ರೇವಣ್ಣ ಕುಟುಂಬಕ್ಕೆ ತಿಳಿಸಿದ್ದಾರೆ.