ಅಖಾಡಕ್ಕಿಳಿದ ಅಮಿತ್ ಶಾ.. ಶುರುವಾಯ್ತು ಬಿಜೆಪಿ ಚಾಣಕ್ಯನ ಅಸಲಿ ಆಟ..!

Apr 24, 2023, 11:03 AM IST

ಕರ್ನಾಟಕ ಕುರುಕ್ಷೇತ್ರಕ್ಕೆ ದಿನಗಣನೆ ಶುರುವಾಗಿದ್ದು. ರಾಜಕೀಯ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿದೆ. ಕೇಸರಿ ಪಾಳಯ ಈ ಬಾರಿ ಮತ್ತೆ ಗೆಲುವಿನ ಗದ್ದುಗೆ ಏರಲು ರಣತಂತ್ರ ರೂಪಿಸುತ್ತಿದೆ. ರಾಜ್ಯಕ್ಕೆ ಬಿಜೆಪಿ ಚಾಣಕ್ಯ ರಣತಂತ್ರ ರೂಪಿಸಲು ಎಂಟ್ರಿಕೊಟ್ಟಿದ್ದಾರೆ.2024ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕರ್ನಾಟಕ ಚುನಾವಣೆ ಬಿಜೆಪಿ ಹೈಕಮಾಂಡ್‌ಗೆ  ಬಹಳ ಮುಖ್ಯವಾಗಿದೆ. ಹೀಗಾಗಿ ಶತಾಯ ಗತಾಯ ರಾಜ್ಯದಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ನಿರ್ಧರಿಸಿರುವ ವರಿಷ್ಠರು, ನೇರವಾಗಿ ಚುನಾವಣಾ ನಿರ್ವಹಣೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಅಮಿತ್ ಶಾ  ಕರ್ನಾಟಕ ಚುನಾವಣೆಗೆ ಅನೇಕ ತಂತ್ರಗಾರಿಕೆಗಳನ್ನು ರೂಪಿಸಿ ಅವುಗಳನ್ನು ಕರಾರುವಾಕ್ಕಾಗಿ ಅನುಷ್ಠಾನಗೊಳಿಸಲು ಕೇಸರಿ ಕಲಿಗಳಿಗೆ ಟಾಸ್ಕ್ ಕೊಟ್ಟಿದ್ದಾರೆ. ಅದರಲ್ಲಿ ಶಾ  ಖುದ್ದಾಗಿ 5 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾದ್ರೆ ಆ 5 ಕ್ಷೇತ್ರಗಳು ಯಾವವು ಅಂತೀರಾ. ಅದೇ ವರುಣಾ, ಕನಕಪುರ, ಚನ್ನಪಟ್ಟಣ, ಅಥಣಿ ಹಾಗೂ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರಗಳು. ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಹಾಗೂ ಅಥಣಿಯಲ್ಲಿ ಈಗಾಗಲೇ ಬಿಜೆಪಿ ಹವಾ ಇದ್ದರು ಸಹಾ ಆ ಕ್ಷೇತ್ರಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಈ ಕಾರಣಕ್ಕೆ ಖುದ್ದು ಫೀಲ್ಡಿಗಿಳಿದಿರುವ ಶಾ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿಯನ್ನು ಮಣಿಸಲು ರಣತಂತ್ರ ರೂಪಿಸಿದ್ದಾರೆ.. ಅಷ್ಟೆ ಅಲ್ಲದೆ ವರುಣಾದಲ್ಲಿ ಸಿದ್ದರಾಮಯ್ಯ, ಕನಕಪುರದಲ್ಲಿ ಡಿಕೆಶಿವಕುಮಾರ್ ,ಹಾಗೂ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ  ಗೆಲ್ಲದಂತೆ ನೋಡಿಕೊಳ್ಳಲು ರಣವ್ಯೂಹವನ್ನು ಹೆಣೆದಿದ್ದಾರೆ.