ಲೋಕಸಭೆಗೆ ಜೆಡಿಎಸ್-ಬಿಜೆಪಿ ಮೈತ್ರಿಯಾದರೆ, ಮಂಡ್ಯ ಸಂಸದೆ ಸುಮಲತಾ ಕಥೆ ಏನು?

Jul 13, 2023, 11:10 PM IST

ಬೆಂಗಳೂರು (ಜು.13): ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳು ಬರಬಾರದು ಎಂಬ ದೃಷ್ಟಿಕೋನದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಲೋಕಸಭಾ ಚುನಾವಣೆಗೂ ಮುನ್ನವೇ ಮೈತ್ರಿಯನ್ನು ಮಾಡಿಕೊಳ್ಳಲು ಮುಂದಾಗಿವೆ. ಒಂದು ವೇಳೆ ಮೈತ್ರಿ ಮಾಡಿಕೊಂಡು ಮಂಡ್ಯವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ, ಬಿಜೆಪಿಗೆ ಬೆಂಬಲ ನೀಡಿರುವ ಸಂಸದೆ ಸುಮಲತಾ ಅಂಬರೀಶ್‌ ಕಥೆ ಏನಾಗಲಿದೆ ಎಂಬ ಅನುಮಾನ ಕಾಡುತ್ತಿದೆ.

ಇನ್ನು ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಲೋಕಸಭಾ ಸಂಸತ್‌ ಭವನದ ಉದ್ಘಾಟನೆಗೆ ಕೇಂದ್ರ ಸರ್ಕಾರದ ವಿರೋಧ ಪಕ್ಷಗಳ ಸೂಚನೆಯನ್ನು ಮೀರಿ ಭಾಗವಹಿಸಿದ್ದರು. ಆದರೆ, ಈ ವೇಳೆ ದೇವೇಗೌಡರು ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚೆ ಮಾಡಿದ್ದರು. ಇನ್ನು ಮಂಡ್ಯದಲ್ಲಿ ಬಿಜೆಪಿ ಕೂಡ ಹೆಚ್ಚಿನ ಮತಗಳನ್ನು ಪಡೆದುಕೊಂಡಿದೆ. ಒಂದು ವೇಳೆ ಜೆಡಿಎಸ್‌ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಲ್ಲಿ ಲೋಕಸಭಾ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗುತ್ತದೆ. ಆದರೆ, ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸದೆಯಾಗಿರುವ ಹಾಗೂ ಬಿಜೆಪಿಗೆ ಬೆಂಬಲ ನೀಡಿರುವ ಸುಮಲತಾ ಅಂಬರೀಶ್‌ ಅವರ ಕಥೆ ಏನಾಗಲಿದೆ ಎಂಬುದು ಕಾದು ನೊಡಬೇಕಿದೆ. 

ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಎಲ್ಲಿಯೂ ಒಳಮೈತ್ರಿ ಮಾಡಿಕೊಳ್ಳಬೇಡಿ ಎಂದು ಬಿಜೆಪಿಯ ಚಾಣಕ್ಯ ಅಮಿತ್‌ ಶಾ ಅವರು ಖಡಕ್‌ ಸೂಚನೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಭವಿಷ್ಯದಲ್ಲಿ ಸಂಘಟನೆ ಮಾಡಬಹುದು ಎಂಬ ದೃಷ್ಟಿಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ಗೆ ಭಾರಿ ಹಿನ್ನಡೆ ಉಂಟಾಗಿದ್ದು, ಕಡಿಮೆ ಸ್ಥಾನಗಳನ್ನು ಪಡೆದಿದೆ. ಆದರೆ, ಮಂಡ್ಯ, ಹಾಸನ ಮತ್ತು ಮೈಸೂರು ಸೇರಿದಂತೆ ದಕ್ಷಿಣದ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಕೆಲವು ಮತಗಳನ್ನು ಪಡೆಯುವಲ್ಲಿ ಸಫಲವಾಗಿದೆ.