ಬಿಜೆಪಿ ಹಿರಿಯ ನಾಯಕರಿಗೆ ಡಬಲ್‌ ಟೆನ್ಶನ್‌! ಎರಡೂ ಕ್ಷೇತ್ರದಲ್ಲಿ ಸ್ಫರ್ಧಿಸಲು ಸೂಚನೆ

Apr 10, 2023, 11:46 PM IST

ಪಕ್ಷದ ಆಂತರಿಕ ಮಾಹಿತಿಗಳ ಪ್ರಕಾರ ಬಿಜೆಪಿ ನಾಯಕರಿಗೆ ಡಬಲ್‌ ಟೆನ್ಶನ್‌ ಶುರುವಾಗಿದೆ. ಪಕ್ಷದ ಹಿರಿಯ ನಾಯಕರಿಗೆ ಅವರು ಈಗಾಗಲೇ ಗೆಲ್ಲುತ್ತಿರುವ ಕ್ಷೇತ್ರದೊಂದಿಗೆ ಎದುರಾಳಿಯ ದೊಡ್ಡ ನಾಯಕರು ಚುನಾವಣೆಗೆ ನಿಂತ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ ಸೂಚನೆ ನೀಡಿದೆ ಎನ್ನಲಾಗಿದೆ. ಅಶ್ವಥ್‌ ನಾರಾಯಣ್‌ಗೆ ಮಲ್ಲೇಶ್ವರದ ಜೊತೆ ಚೆನ್ನಪಟ್ಟಣದಲ್ಲಿ, ಸೋಮಣ್ಣಗೆ ಗೋವಿಂದರಾಜನಗರದೊಂದಿಗೆ ವರುಣಾದಲ್ಲಿ ಸ್ಪರ್ಧೆ ಮಾಡುವಂತೆ ಸೂಚನೆ ನೀಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಅವರು ಗೆಲ್ಲುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎನ್ನುವುದು ಬಿಜೆಪಿ ಹೈಕಮಾಂಡ್‌ ಚಿಂತನೆಯಾಗಿದೆ. ಇನ್ನು ಹಿರಿಯ ನಾಯಕರು ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ನಂತರ, ಒಂದು ಕ್ಷೇತ್ರವನ್ನು ಉಪ ಚುನಾವಣೆಯಲ್ಲಿ ತಮ್ಮದೇ ಕುಟುಂಬ ಸದಸ್ಯರು ಅಥವಾ ಸುಲಭವಾಗಿ ಗೆಲ್ಲುವ ಅಭ್ಯರ್ಥಿಗೆ ಕೊಟ್ಟು ಗೆಲ್ಲಿಸಿಕೊಳ್ಳುವುದು ಬಿಜೆಪಿ ಹೈಕಮಾಂಡ್‌ ತಂತ್ರವಾಗಿದೆ. ಆದರೆ, ಬಿಜೆಪಿ ನಾಯಕರ ಈ ತಂತ್ರದಿಂದ ರಾಜ್ಯದ  ಹಿರಿಯ ನಾಯಕರಿಗೆ ತೀವ್ರ ಸಂಕಷ್ಟ ಎದುರಾಗಿದೆ.