
ಬೆಂಗಳೂರು/ಮಂತ್ರಾಲಯ (ಅ.23): ದೀಪಾವಳಿ ಸಂಭ್ರಮದ ನಡುವೆಯೂ ರಾಜ್ಯ ರಾಜಕಾರಣದ ಗಮನವೆಲ್ಲ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರತ್ತ ನೆಟ್ಟಿದೆ. 'ಕನಕಾಧಿಪತಿ' ಎಂದೇ ಖ್ಯಾತರಾಗಿರುವ ಡಿಕೆಶಿ ಪಾಲಿಗೆ ಈ ವರ್ಷದ ದೀಪಾವಳಿ ಬಹಳ ವಿಶೇಷವಾಗಿದ್ದು, ಅವರ ಬಹುಕಾಲದ ಮುಖ್ಯಮಂತ್ರಿ ಪಟ್ಟದ ಆಕಾಂಕ್ಷೆಗೆ ಈ ಬೆಳಕಿನ ಹಬ್ಬವು 'ಬೆಳಕು' ನೀಡುತ್ತದೆಯೇ ಎಂಬ ಕುತೂಹಲ ಮೂಡಿದೆ.
ಬಾಲ್ಯದಲ್ಲಿ ಪಟಾಕಿ ಸಿಡಿಸಿದ ಸಡಗರ, ಬಂಡೆ ಬ್ರದರ್ಸ್ನ ಸವಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಡಿಕೆಶಿ, ಈಗ ಮೌನವಾಗಿಯೇ ತಮ್ಮ ರಾಜಕೀಯ ಪಟಾಕಿಯನ್ನು ಸಿಡಿಸುತ್ತಿದ್ದಾರೆ. ಡಿಕೆಶಿ ಅವರ ಪಾಲಿಗೆ ದೈವಬಲ ಅತೀ ಮುಖ್ಯವಾಗಿದ್ದು, ದೀಪಾವಳಿ ದಿನವೇ ಅವರು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದಿರುವುದು, ಅವರ 'ರಾಯರಿದ್ದಾರೆ' ಎಂಬ ನಂಬಿಕೆಯ ಹಿಂದಿರುವ ನೂರೆಂಟು ಕಥೆಗಳನ್ನು ತೆರೆದಿಟ್ಟಿದೆ. ಇದು ಕೇವಲ ಭಕ್ತ ಪ್ರವಾಸವಲ್ಲ, ಬದಲಿಗೆ ರಾಜಕೀಯ ಯಶಸ್ಸಿಗಾಗಿ ನಡೆದ ಪ್ರಮುಖ ಭೇಟಿ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪಕ್ಷ ನಿಷ್ಠೆಯ ಅಸ್ತ್ರ ಮತ್ತು ಸೈಲೆಂಟ್ ಸಮರ:
ಒಂದೆಡೆ ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ 'ಸೈಲೆಂಟ್ ಸಮರ' ನಡೆಯುತ್ತಿದೆ. ಈ ಅಂತರ್ಯುದ್ಧವು ಹೈಕಮಾಂಡ್ಗೆ ದೊಡ್ಡ ಅಗ್ನಿಪರೀಕ್ಷೆಯಾಗಿದೆ. ಬಿಹಾರ ಚುನಾವಣೆ ಸವಾಲು ಮತ್ತು ದೇಶಾದ್ಯಂತ ಕುಗ್ಗುತ್ತಿರುವ ಪಕ್ಷದ ಬಲದ ಮಧ್ಯೆ, ಕರ್ನಾಟಕದಲ್ಲಿ ಉಳಿದಿರುವ ಶಕ್ತಿಯನ್ನು ಹೈಕಮಾಂಡ್ ವಿಭಜಿಸುವ ಸಾಹಸಕ್ಕೆ ಮುಂದಾಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಸಿಂಹಾಸನಕ್ಕಾಗಿ ನಡೆಯುತ್ತಿರುವ ಈ ಸಮರದಲ್ಲಿ ಡಿ.ಕೆ.ಶಿವಕುಮಾರ್ ಹಿಂದೆ ಅವರ ಪಕ್ಷ ನಿಷ್ಠೆಯ ಅಸ್ತ್ರ, ಮೌನ ಹೋರಾಟ ಮತ್ತು ಶಾಸಕರ ಬಲವಿದೆ ಎಂದು ಹೇಳಲಾಗುತ್ತಿದೆ. ಆದರೆ, ಮುಖ್ಯಮಂತ್ರಿ ಪಟ್ಟದ ಗುಟ್ಟು ಶಾಸಕರ ಬಲದಲ್ಲಿ ಅಡಗಿದೆಯೋ ಅಥವಾ ಹೈಕಮಾಂಡ್ ಆದೇಶದಲ್ಲಿ ಅಡಗಿದೆಯೋ ಎಂಬುದು ನಿಗೂಢವಾಗಿದೆ. ಡಿಕೆಶಿ ಅವರ ಕತ್ತಲಲ್ಲಿರುವ ಆಸೆಗೆ, ಈ ದೀಪಾವಳಿಯ ಬೆಳಕು ಬೀಳುತ್ತದೆಯೇ? ಹೈಕಮಾಂಡ್ನ ಅಸಹಾಯಕತೆಯ ಹಿಂದೆ ಅಡಗಿರುವ ಕಾರಣಗಳು ಯಾವುವು? 'ಡಿಕೆ ದೀಪಾವಳಿ ದಂಗಲ್' ಎಂದು ಬಣ್ಣಿಸಲಾಗುತ್ತಿರುವ ಈ ರಾಜಕೀಯ ಪೈಪೋಟಿಯ ಅಂತಿಮ ಫಲಿತಾಂಶಕ್ಕಾಗಿ ಇಡೀ ರಾಜ್ಯ ಕಾದು ನೋಡುತ್ತಿದೆ.