ಅತಿರಥರ ಅಖಾಡ: ಕೋಲಾರದಲ್ಲಿ ಹೇಗಿದೆ ಗೊತ್ತಾ ರಣಕಣ?

Mar 11, 2023, 12:33 PM IST

ಕೋಲಾರ (ಮಾ.11): ದೇಶದ ಯಾವುದೇ ಭಾಗಕ್ಕೆ ಹೋದರೂ ಕೋಲಾರ ಅಂದ ತಕ್ಷಣ ಜನ ಕೇಳೋದು ಚಿನ್ನದ ಗಣಿಗಳ ಬಗ್ಗೆ. ಕೆಜಿಎಫ್ ಚಿತ್ರ ಬಂದ ಮೇಲಂತೂ ಕೋಲಾರ ವಿಶ್ವ ವಿಖ್ಯಾತಿಯನ್ನು ಪಡೆದಿದೆ. ಆದರೆ ಚಿನ್ನ ಗಣಿಗಳನ್ನು ಹೊರತು ಪಡಿಸಿದರೆ ಕೋಲಾರಕ್ಕೆ ಗಂಗರ ಕಾಲದ ಇತಿಹಾಸವೂ ಇದೆ. ಗಂಗರ ಕಾಲದಲ್ಲಿ ಕೋಲಾರ ಕುವಲಾಪುರ ಆಗಿತ್ತು. ನಂತರ ಕೋಲಾರವಾಗಿ ಬದಲಾಯಿತು. ಇಲ್ಲಿನ ಕೋಲಾರಮ್ಮ ದೇವಸ್ಥಾನ ಇಡೀ ರಾಜ್ಯಾದ್ಯಂತ ಹೆಸರುವಾಸಿ. ಈ ಬಾರಿ ಕೋಲಾರಮ್ಮ ಯಾರಿಗೆ ಒಲಿಯುತ್ತಾಳೆ ಎನ್ನುವ ಬಗ್ಗೆ 224 ಕ್ಷೇತ್ರಗಳಲ್ಲೂ ಕುತೂಹಲ ಇದೆ. 2006ರಲ್ಲಿ ಜೆಡಿಎಸ್ ಬಿಟ್ಟು ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಬಂದಾಗ ಚಾಮುಂಡೇಶ್ವರಿ ಚುನಾವಣೆಇಡೀ ರಾಜ್ಯದ ಕುತೂಹಲ ಕೆರಳಿಸಿತ್ತು. 

2008ರಲ್ಲಿ ಕ್ಷೇತ್ರ ವಿಂಗಡಣೆಯ ನಂತರ ಸಿದ್ದರಾಮಯ್ಯನವರು ವರುಣಾದಲ್ಲಿ ನಿಂತರು. 2008-2013ರಲ್ಲಿ ವರುಣಾದಲ್ಲಿ ಗೆದ್ದ ನಂತರ ಸಿದ್ದರಾಮಯ್ಯನವರು 2018ರಲ್ಲಿ ಮಗನಿಗೆ ವರುಣಾ ಕ್ಷೇತ್ರವನ್ನು ಬಿಟ್ಟುಕೊಟ್ಟು ಚಾಮುಂಡೇಶ್ವರಿಗೆ ಬರುವುದಾಗಿ ಘೋಷಿಸಿದರು. ಆದರೆ ಚುನಾವಣೆಗೆ ಕೆಲ ದಿನಗಳ ಮುಂಚೆ ಚಾಮುಂಡೇಶ್ವರಿಯಲ್ಲಿ ನಿಂತರೆ ಗೆಲ್ಲುವುದು ಕಷ್ಟ ಎಂದು ಗೊತ್ತಾದಾಗ ಚಾಮುಂಡೇಶ್ವರಿಯ ಜೊತೆಜೊತೆಗೆ ಬಾದಾಮಿಯಲ್ಲೂ ನಾಮಪತ್ರ ಸಲ್ಲಿಸಿ ಕಡಿಮೆ ಅಂತರದಲ್ಲಿ ಗೆದ್ದರು. ಆದರೆ ಈ ಬಾರಿ 2023ರಲ್ಲಿ ಸಿದ್ದರಾಮಯ್ಯನವರು ಬಾದಾಮಿಯಿಂದ ಕೋಲಾರಕ್ಕೆ ವಲಸೆ ಬರುತ್ತಿದ್ದು, ಎಲ್ಲದರ ಬಗ್ಗೆ ಮಾಹಿತಿ ಈ ವಿಡಿಯೋದಲ್ಲಿದೆ.