ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ 120 ಪ್ಲಸ್ ಸ್ಥಾನಗಳಿಸುವ ಮೂಲಕ ಸರಳ ಬಹುಮತ ಪಡೆಯಲಿದೆ: ಕಾಂಗ್ರೆಸ್ ರಾಜಕೀಯ ತಂತ್ರಜ್ಞ ಸುನೀಲ್ ಕನ್ನಗೋಲು
ಬೆಂಗಳೂರು (ಜೂ. 30): ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ 120 ಪ್ಲಸ್ ಸ್ಥಾನಗಳಿಸುವ ಮೂಲಕ ಸರಳ ಬಹುಮತ ಪಡೆಯಲಿದೆ. ಬಿಜೆಪಿ 70 ಪ್ಲಸ್ ಸ್ಥಾನಗಳಿಸಿದರೆ, ಜೆಡಿಎಸ್ 25 ಪ್ಲಸ್ಗೆ ಸೀಮಿತವಾಗುತ್ತದೆ. 6ರಿಂದ 8 ಮಂದಿ ಪಕ್ಷೇತರರು ಗೆಲ್ಲಲಿದ್ದಾರೆ. ಕಾಂಗ್ರೆಸ್ ರಾಜಕೀಯ ತಂತ್ರಜ್ಞ ಸುನೀಲ್ ಕನ್ನಗೋಲು (Sunil Kannagolu) ಅವರು ಸಿದ್ಧಪಡಿಸಿ ಕಾಂಗ್ರೆಸ್ ಹೈಕಮಾಂಡ್ಗೆ ಸಲ್ಲಿಸಿರುವ ಪ್ರಾಥಮಿಕ ಸಮೀಕ್ಷಾ ವರದಿಯ ಮುಖ್ಯಾಂಶವಿದು.
ಕನ್ನಗೋಲು ಅವರ ಸಮೀಕ್ಷಾ ವರದಿ ಪ್ರಕಾರ ಈ ತಕ್ಷಣ ಚುನಾವಣೆ ನಡೆದರೆ ಕಾಂಗ್ರೆಸ್ ಸರಳ ಬಹುಮತ ಪಡೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಲಿಂಗಾಯತ ಸಮುದಾಯ ಬಿಜೆಪಿಯ ಬಗ್ಗೆ ಬೇಸರಗೊಂಡಿರುವುದು ಮತ್ತು ಸಂಪೂರ್ಣವಲ್ಲದಿದ್ದರೂ ಗಣನೀಯ ಎನಿಸುವ ಮಟ್ಟಿಗಿನ ಲಿಂಗಾಯತ ಮತದಾರರು ಬಿಜೆಪಿಯಿಂದ ವಿಮುಖವಾಗಬಹುದು. ಇನ್ನು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ದುರ್ಬಲಗೊಂಡು ಒಕ್ಕಲಿಗ ಸಮೂಹದ ಅನ್ಯ ಪಕ್ಷಗಳೆಡೆಗೆ ಚಲನಶೀಲತೆ ತೋರಿದೆ. ಇನ್ನು ಅಹಿಂದ ಮತ ವರ್ಗ ಕಾಂಗ್ರೆಸ್ನ ಬೆನ್ನಿಗೆ ಗಟ್ಟಿಯಾಗಿ ನಿಂತಿದೆ.