ಮಂಗಳೂರು ದಸರಾದಲ್ಲಿ ದೈವಗಳ ಸ್ತಬ್ಧಚಿತ್ರಕ್ಕೆ ಬ್ರೇಕ್: ಡಿಜೆಗೆ ನಿಷೇಧ.. ಭಜನಾ ತಂಡಗಳಿಗೆ ಅವಕಾಶ

Oct 14, 2023, 10:41 AM IST

ಕಾಂತಾರ ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದ ಸಿನಿಮಾ. ಕರಾವಳಿಯ ದೈವಗಳ ಕಾರ್ಣಿಕವನ್ನ ಜಗದಗಲ ಪಸರಿಸಿದ ದಕ್ಷಿಣ ಭಾರತದ ಬ್ಲಾಕ್ ಬಸ್ಟರ್ ಸಿನಿಮಾ. ಸಿನಿಮಾದ ಆಚೆಗೂ ತುಳುನಾಡಿನ ಸಂಸ್ಕೃತಿ, ಸಂಸ್ಕಾರ, ನಂಬಿಕೆ, ಆಚರಣೆ ಜೊತೆಗೆ ದೈವಾರಧನೆಯ ಕಟ್ಟುಕಟ್ಟಲೆಗಳತ್ತ ಇಡೀ ಜಗತ್ತೇ ನಿಬ್ಬೆರಗಾಗಿ ನೋಡುವಂತೆ ಮಾಡಿದೆ. ಆದರೆ ಇದೇ ಸಿನಿಮಾದ ಕಾರಣದಿಂದ ದೈವಗಳ(daiva) ಅವಹೇಳನವೂ ಹೆಚ್ಚಾಗಿದೆ. ನಂಬಿಕೆಯ ದೈವಗಳನ್ನ ಬೀದಿಗೆ ತಂದು ಕುಣಿದು ಕುಪ್ಪಳಿಸಲಾಗ್ತಿದೆ. ಸ್ತಬ್ಧ ಚಿತ್ರಗಳ ಹೆಸರಿನಲ್ಲಿ ದೈವಗಳ ಅವಹೇಳನ ನಡೀತಾ ಇದೆ. ಹೀಗಾಗಿಯೇ ಈ ಬಾರಿಯ ಪ್ರಖ್ಯಾತ ಮಂಗಳೂರು(Mangalore) ದಸರಾದಲ್ಲಿ ದೈವಗಳ ಸ್ತಬ್ಧ ಚಿತ್ರಗಳಿಗೆ ಬ್ರೇಕ್ ಹಾಕಲಾಗಿದೆ. ವಿಶ್ವವಿಖ್ಯಾತ ಮಂಗಳೂರು ದಸರಾಕ್ಕೆ(Dasara procession) ಕುದ್ರೋಳಿ ಶ್ರೀಕ್ಷೇತ್ರ ಸಜ್ಜಾಗುತ್ತಿದೆ. ಈ ಬಾರಿಯ ದಸರಾ ಮೆರವಣಿಗೆ ಅ.25ರಂದು ನಡೆಯಲಿದ್ದು, ತುಳುನಾಡಿನ ದೈವಗಳ ಟ್ಯಾಬ್ಲೊ, ಸ್ತಬ್ಧಚಿತ್ರಕ್ಕೆ ಅವಕಾಶವಿಲ್ಲ ಎಂದು ಶ್ರೀಕ್ಷೇತ್ರ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದೆ. ತುಳುನಾಡಿನಲ್ಲಿ ದೈವಗಳ ಬಗ್ಗೆ ಅಪಾರ ನಂಬಿಕೆಯಿದೆ. ಭಕ್ತರ ಈ ನಂಬಿಕೆಗೆ ಘಾಸಿಯಾಗುವಂತಹ ಕಾರ್ಯ ಆಗಬಾರದೆಂದು ದೈವಗಳನ್ನು ಅವಹೇಳನ ಮಾಡುವಂತಹ ಟ್ಯಾಬ್ಲೊಗಳಿಗೆ ಅವಕಾಶ ನೀಡುತ್ತಿಲ್ಲ. ಅಷ್ಟೇ ಅಲ್ಲ ಯಾವುದೇ ಜಾತಿ, ಧರ್ಮ, ಮತದವರಿಗೆ ನಿಂದನೆ, ಅವಮಾನ ಮಾಡುವಂತಹ ಟ್ಯಾಬ್ಲೋಗಳಿಗೂ ಅವಕಾಶವಿಲ್ಲ ಎಂದು ಸೂಚನೆ ನೀಡಲಾಗಿದೆ.ಈ ಬಾರಿ ಅಕ್ಟೋಬರ್ 15ರಂದು ರಾತ್ರಿ 8ಗಂಟೆಗೆ ಶ್ರಿಕ್ಷೇತ್ರದಿಂದ ಮಂಗಳೂರು ದಸರಾ ಮ್ಯಾರಥಾನ್ ನಡೆಯಲಿದೆ. ಜ್ಯೂಯೀಸ್ ಫಿಟ್ ನೆಸ್ ಕ್ಲಬ್ ಹಾಗೂ ಶ್ರೀಕ್ಷೇತ್ರ ಜೊತೆಯಾಗಿ ಈ ಮ್ಯಾರಥಾನ್ ನಡೆಸಲಿವೆ.

ಇದನ್ನೂ ವೀಕ್ಷಿಸಿ:  ದೀಪಕ್ ಅರಸ್ ನಿರ್ದೇಶನದ ಶುಗರ್ ಫ್ಯಾಕ್ಟರಿ: ಡಾರ್ಲಿಂಗ್ ಕೃಷ್ಣ-ಸೋನಲ್ ಭರ್ಜರಿ ರೊಮ್ಯಾನ್ಸ್!