ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಮಹಾ ವಂಚನೆ : ಕೋಟಿ ಕೋಟಿ ಪಂಗನಾಮ

Sep 4, 2021, 1:04 PM IST

ಬೆಂಗಳೂರು (ಸೆ.04):  ಹನ್ನೊಂದು ವರ್ಷದ ಅವಧಿಯಲ್ಲಿ ಬೆಂಗಳೂರಿನ ಬಸವನಗುಡಿಯ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಸುಮಾರು 923 ಕೋಟಿ ರು.  ನಷ್ಟು ಅಕ್ರಮ ನಡೆದಿದೆ ಎಂದು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ರಾಘವೇಂದ್ರ ಬ್ಯಾಂಕ್‌ ಹಗರಣ: ವಂಚಕರಿಂದ 1 ಸಾವಿರ ಕೋಟಿ ಆಸ್ತಿ ಜಪ್ತಿ?

 ಈ ಬ್ಯಾಂಕ್‌ನಲ್ಲಿ 2009ರಿಂದ 2020ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ ಕುರಿತು ಶೋಧಿಸಿರುವ ಸಿಐಡಿ, ಈಗ ವರ್ಷವಾರು ಲೆಕ್ಕಪರಿಶೋಧನೆ ನಡೆಸಿ ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಲು ನಿರ್ಧರಿಸಿದೆ.  ಅಂತೆಯೇ 2009-10ನೇ ಸಾಲಿನಲ್ಲಿ  60 ರು.  ಕೋಟಿ ಅಕ್ರಮ ನಡೆದಿದೆ ಎಂದು ಬ್ಯಾಂಕ್‌ನ ಮಾಜಿ ಅಧ್ಯಕ್ಷ ರಾಮಕೃಷ್ಣಯ್ಯ ಸೇರಿದಂತೆ 28 ಜನ ಆರೋಪಿಗಳ ವಿರುದ್ಧ ಸಿಐಡಿ ವಿಶೇಷ ನ್ಯಾಯಾಲಯಕ್ಕೆ ಮೊದಲ ಹಂತದ ಆರೋಪ ಪಟ್ಟಿಯನ್ನು ಸಲ್ಲಿಸಿದೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.