ಪ್ರಕೃತಿ ವಿಕೋಪದಿಂದ ನಲುಗಿ ಹೋಗಿತ್ತು ಆ ಜಿಲ್ಲೆ..! ದಯಾಮರಣ ಕೋರಿ ರಾಷ್ಟ್ರಪತಿಗೆ ಸಂತ್ರಸ್ತೆ ಪತ್ರ

Sep 5, 2023, 2:49 PM IST

ಅಂದು ಕಾವೇರಿ ಮುನಿಸಿಕೊಂಡು ಇಡೀ ಕೊಡಗು ಜಿಲ್ಲೆಯನ್ನು ನೆಲಸಮ ಮಾಡಿದ್ದನ್ನು ಇನ್ನೂ ಯಾರೂ ಕೂಡ ಮರೆತಿಲ್ಲ. ಸಾವಿರಾರು ಜನ ತಮ್ಮ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ರು. ಆದ್ರೆ ಅವರ ಸ್ಥಿತಿ ಇನ್ನೂ ಬದಲಾಗಿಲ್ಲ. ಕಣ್ಣೀರಲ್ಲಿ ಇನ್ನೂ ದಿನ ದೂಡುತ್ತಿದ್ದಾರೆ.  ಇದು 2019ರಲ್ಲಿ ಕಾವೇರಿ ನದಿ ಪ್ರವಾಹ(Flood) ಬಂದು ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡವರ ಸ್ಥಿತಿ. ಇತ್ತ ಕೂಲಿ ಮಾಡಿ ಬಾಡಿಗೆ ಕಟ್ಟಲಾಗುತ್ತಿಲ್ಲ ಎಂದು ದಯಾಮರಣಕ್ಕೆ ಮನವಿ ಮಾಡಿ ಕಾಯುತ್ತಿರುವ ವೃದ್ಧೆ. ಹೊಳೆ ದಂಡೆಯಲ್ಲಿ ಪ್ಲಾಸ್ಟಿಕ್ ಹೊದಿಕೆಯ ಗುಡಿಸಲುಗಳಲ್ಲಿ ಕಾಲ ದೂಡುತ್ತಿರುವ ಕುಟುಂಬಗಳು. 

ಇಂದು ಮನೆ ಸಿಗುತ್ತೆ, ನಾಳೆ ಮನೆ ಸಿಗುತ್ತೇ ಎಂದು ಕಾಯುತ್ತಲೇ ಬಾಡಿಗೆ ಮನೆಯಲ್ಲೇ ಪ್ರಾಣ ಬಿಡುತ್ತಿರುವ ಹಿರಿಯ ಜೀವಗಳು. ಇದು ಕೊಡಗು ಜಿಲ್ಲೆಯಲ್ಲಿ 2019ರ ಕಾವೇರಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಇಂದಿಗೂ ಸ್ವಂತ ಸೂರಿಲ್ಲದೆ ನರಳುತ್ತಿರುವ ಕುಟುಂಬಗಳ ಕಥೆ. ಅಂದು ಕಾವೇರಿ ಉಕ್ಕಿ ಹರಿದು ಪ್ರವಾಹದಲ್ಲಿ ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ 140ಕ್ಕೂ ಹೆಚ್ಚು ಕುಟುಂಬಗಳು(Family) ಮನೆ ಕಳೆದುಕೊಂಡು ಬೀದಿಗೆ ಬಂದಿದ್ದವು. ಆದರೆ ಇಂದಿಗೂ ಆ ಕುಟುಂಬಗಳಿಗೆ ಮನೆ ಅಥವಾ ಪರಿಹಾರ ನೀಡಿಲ್ಲ. ಕುಂಬಾರಗುಂಡಿ ಗ್ರಾಮದ ಶಾಂತಿ ಎಂಬುವರು ಕೂಲಿ ಮಾಡಿ ಬಾಡಿಗೆ ಕಟ್ಟಲಾಗದೆ ಮನೆ(House) ಕೊಡಿ, ಇಲ್ಲವೆ  ದಯಾಮರಣ ನೀಡಿ ಎಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

ಅಂದೇ ಶಾಶ್ವತ ಸೂರಿಗಾಗಿ ಪ್ರತಿಭಟನೆ(Protest) ನಡೆಸಿದ್ದ ಸಂತ್ರಸ್ತರಿಗೆ 5 ಲಕ್ಷ ರೂಪಾಯಿ ಬಿಡುಗಡೆ ಮಾಡಿ ವಾಲ್ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರೆಕಾಡಿನಲ್ಲಿ 8.5 ಎಕರೆ ಸರ್ಕಾರಿ ಜಾಗವನ್ನು ಅಲರ್ಟ್ ಮಾಡಿತ್ತು. ಆದ್ರೆ ನಿವೇಶನ ಇದೀಗ ಪಾಳು ಬಿದ್ದಿದೆ. ಇಂದಿಗೂ ಅದನ್ನು ಬಡಾವಣೆಯಾಗಿ ಪರಿವರ್ತಿಸಿಲ್ಲ. ವಿದ್ಯುತ್ ಸಂಪರ್ಕ, ರಸ್ತೆ, ಚರಂಡಿ ಮತ್ತು ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯವಿಲ್ಲ. ಇದಕ್ಕಾಗಿ 8 ಕೋಟಿ ರೂಪಾಯಿಯಷ್ಟು ಹಣ ಬೇಕಾಗುತ್ತದೆ. ಸರ್ಕಾರ ಈ ಅನುದಾನ ನೀಡಿದರೆ ಮಾತ್ರವೇ ಈ ಕುಟುಂಬಗಳು ಸರ್ಕಾರ ಗುರುತ್ತಿಸಿರುವ ಜಾಗದಲ್ಲಿ ನೆಲೆ ನಿಲ್ಲಲು ಸಾಧ್ಯ. ಇಲ್ಲದಿದ್ದರೆ ಇದೇ ಅತಂತ್ರ ಸ್ಥಿತಿಯಲ್ಲೇ ನೂರಾರು ಕುಟುಂಬಗಳು ಜೀವನ ನಡೆಸಬೇಕಾಗುತ್ತದೆ ಎನ್ನುವುದು ಹೋರಾಟಗಾರರ ಆಕ್ರೋಶ.

ಇದನ್ನೂ ವೀಕ್ಷಿಸಿ:  ಆಂಟಿಗೆ ಮೆಸೇಜ್ ಮಾಡಿದವನು ಹೆಣವಾದ..! ಸಂಜೆ ರಾಜಿ ಪಂಚಾಯ್ತಿ.. ರಾತ್ರಿ ಮರ್ಡರ್..!